ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಇದೇ ಪ್ರಥಮ ಬಾರಿಗೆ ಹೋಳಿ ಹಬ್ಬದಂಗವಾಗಿ ಬಸವೇಶ್ವರ ಸೇವಾ ಸಮಿತಿಯಿಂದ ಹಲಗೆ ಬಾರಿಸುವ ಸ್ಪರ್ಧೆಯನ್ನು ಮಾ.೧೨ ರಂದು ಸಂಜೆ ೪ ಗಂಟೆಗೆ ಸ್ಥಳೀಯ ಹಳೆಸಂತೆ ಕಟ್ಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ನಿರ್ದೇಶಕ ಎಂ.ಜಿ.ಆದಿಗೊಂಡ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಪಟ್ಟಣ ಸೇರಿದಂತೆ ಎಲ್ಲೆಡೆ ಹಲಗೆ ವಾದನ ಆರಂಭಗೊಂಡಿದ.ಬಣ್ಣದಾಟದವರೆಗೂ ಹಲಗೆ ಬಾರಿಸುವ ಕಲೆ ಮೆರೆಯಲಿದೆ. ಹಲಗೆ ಬಾರಿಸುವದು ವಿಶಿಷ್ಠ ಕಲೆಯಾಗಿದೆ. ಈ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ಹಲಗೆ ಬಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಪಟ್ಟಣದಲ್ಲಿ ಈಚೆಗೆ ಹೋಳಿ ಹಬ್ಬವು ಕಳೆಗುಂದುತ್ತಿದೆ. ಮುಂದಿನ ಪೀಳಿಗೆಗೆ ಹೋಳಿ ಹಬ್ಬದ ಮೆರಗು ಗೊತ್ತಾಗಬೇಕು. ಎಲ್ಲ ಬಾಂಧವರು ಸೌಹಾರ್ದತೆಯಿಂದ ಹೋಳಿ ಹಬ್ಬವನ್ನು ಆಚರಿಸುವಂತಾಗುವ ಉದ್ದೇಶವು ಸಮಿತಿ ಹೊಂದಿದೆ. ಮಾ.೧೪ ರಂದು ಹೋಳಿ ಹಬ್ಬದ ಬಣ್ಣದಾಟ ನಡೆಯಲಿದೆ. ಮಾ.೧೯ ರಂದು ನಡೆಯಲಿರುವ ರಂಗಪಂಚಮಿ ಹಬ್ಬದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಣ್ಣದ ಬಂಡಿಗಳು ಸಂಚರಿಸುವಂತೆ ಮಾಡುವ ಮೂಲಕ ಹೋಳಿಹಬ್ಬಕ್ಕೆ ಕಳೆ ತರುವ ಆಶಯ ಹೊಂದಲಾಗಿದೆ. ಹೋಳಿ ಹಬ್ಬದ ಆಚರಣೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಹಲಗೆ ಬಾರಿಸುವ ಸ್ಪರ್ಧೆ ತಂಡ, ವೈಯಕ್ತಿಕ ಎರಡು ವಿಭಾಗದಲ್ಲಿ ನಡೆಯಲಿದೆ. ತಂಡದಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರು ಭಾಗವಹಿಸಬೇಕು. ತಂಡದಲ್ಲಿ ಹಲಗೆ ಬಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.೧೫ ಸಾವಿರ, ದ್ವಿತೀಯ ಬಹುಮಾನ ರೂ. ೮ ಸಾವಿರ, ತೃತೀಯ ಬಹುಮಾನ ರೂ. ೫ ಸಾವಿರ, ವೈಯಕ್ತಿಕ ಹಲಗೆ ಬಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೧೧ ಸಾವಿರ, ದ್ವಿತೀಯ ಬಹುಮಾನ ರೂ. ೭,೫೦೦, ತೃತೀಯ ಬಹುಮಾನ ರೂ.೫ ಸಾವಿರ ನಗದು ಬಹಮಾನ ನೀಡುವ ಜೊತೆಗೆ ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸಲಾಗುವದು. ಸ್ಪರ್ಧೆಗೆ ಹೆಸರು ಉಚಿತವಾಗಿ ಮಾ. ೧೨ ರಂದು ಮಧ್ಯಾನ್ಹ ೨ ರೊಳಗೆ ನೋಂದಾಯಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಹಲಗೆಯನ್ನು ತಾವೇ ತರಬೇಕು. ಹಲಗೆ ಹೊರತು ಪಡಿಸಿ ಯಾವುದೇ ವಾದ್ಯಗಳಿಗೆ ಅವಕಾಶವಿರುವದಿಲ್ಲ. ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಬಸವರಾಜ ಹಾರಿವಾಳ ಮೊ-೯೦೦೮೦೫೭೮೦೮, ಡಾ.ಬಸವರಾಜ ಕೋಟಿ ಮೊ- ೮೬೬೦೨೬೯೮೭೫, ರವಿ ರಾಠೋಡ ಮೊ-೯೯೭೨೩೮೯೭೩೩ ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ರವಿ ರಾಠೋಡ, ಅನಿಲ ಅಗರವಾಲ, ಸಂಕನಗೌಡ ಪಾಟೀಲ, ಸಂಗಣ್ಣ ಕಲ್ಲೂರ ಇದ್ದರು.

