ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಳವಾರ ಸಮಾಜದ ಶ್ರೇಯೋಭಿವೃದ್ದಿಗೆ ಮಾಜಿ ಶಾಸಕ ರಮೇಶ ಭೂಸನೂರ ತಮ್ಮ ಅಧಿಕಾರ ಅವಧಿಯಲ್ಲಿ ವಯಕ್ತಿಕ ೩೧ಲಕ್ಷ ರೂ. ನೀಡಿದ್ದರು. ಆ ಹಣದಲ್ಲಿ ಖರೀದಿಸಿದ ೧೧ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಈಗಿನ ಶಾಸಕ ಅಶೋಕ ಮನಗೂಳಿ ಅವರು ಅನುದಾನ ಮಂಜೂರು ಮಾಡಬೇಕೆಂದು ತಳವಾರ ಮಹಾಸಭಾದ ನಗರ ಘಟಕ ಅಧ್ಯಕ್ಷ ಪ್ರಶಾಂತ ಕದ್ದರಕಿ ಮನವಿ ಮಾಡಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರು ನೀಡಿದ ಹಣದಲ್ಲಿ ಈಗಾಗಲೇ ಸಿಂದಗಿ ನಗರದಲ್ಲಿ ೧೧ಗುಂಟೆ ಜಾಗೆಯನ್ನು ಖರೀದಿಸಲಾಗಿದೆ. ಆ ಜಾಗದಲ್ಲಿ ಈಗಿನ ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಮತ್ತು ಸರ್ಕಾರದಿಂದ ಮಂಜೂರು ಮಾಡಿದ ೨೦ಗುಂಟೆ ಜಾಗದಲ್ಲಿ ೫ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಬೇಕು ಎಂದು ತಳವಾರ ಸಮಾಜದ ವತಿಯಿಂದ ಮನವಿ ಮಾಡಿಕೊಂಡರು.
ಈ ವೇಳೆ ಸಮಾಜದ ಮುಖಂಡ ಪೀರು ಕೆರೂರ ಮಾತನಾಡಿ, ಸಮಾಜದ ಅಭಿವೃದ್ದಿಗೆ ಸರ್ಕಾರದಿಂದ ೨೦ಗುಂಟೆ ಜಾಗವನ್ನು ಮಂಜೂರು ಮಾಡಿದ ಪ್ರಸ್ತುತ ಶಾಸಕರಿಗೂ ಹಾಗೂ ಈ ಹಿಂದೆ ಸಮಾಜದ ಜಾಗ ಖರೀದಿಗೆ ವಯಕ್ತಿಕ ೩೧ಲಕ್ಷ ರೂ. ನೀಡಿದ ಮಾಜಿ ಶಾಸಕರಿಗೂ ಸಮಾಜದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ವೇಳೆ ತಳವಾರ ಮಹಾಸಭಾ ಮುಖಂಡ ಈರಣ್ಣ ಕುರಿ, ವಿಠ್ಠಲ ಯರಗಲ್, ಬಸವರಾಜ ರಂಜುಣಗಿ ಸೇರಿದಂತೆ ಅನೇಕರಿದ್ದರು.

