ಕಲಕೇರಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದಿಂದ ಟೈಲರ್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ಇದರ ಅಡಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದ ವತಿಯಿಂದ ಗ್ರಾಮದ ಶ್ರೀ ಗುರು ಮರುಳಾರಾಧ್ಯ ಹಿರೇಮಠದಲ್ಲಿ ಟೈಲರ್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಸಂಘದ ಶಾಂತಯ್ಯ ವೀ. ಹಿರೇಮಠ ಅವರು, ವೃತ್ತಿ ಬದುಕಿನ ಭದ್ರತೆಯ ಕಳವಳದ ನಡುವೆಯೂ ಕೂಡಾ ನಾಳಿನ ನಮ್ಮ ಭವಿಷ್ಯದೆಡೆಗೆ ಈ ಹೃದಯ ಕಾತರಿಸುತ್ತಿದೆ, ಈ ಸಂಘಟನೆಯ ನಡುವಿನಿಂದ ಬಂದಾನೊಬ್ಬ ಕಲಾವಿದ, ಬರಿದಾದ ನಮ್ಮ ವೃತ್ತಿ ಬದುಕಿನ ಅಂಗಳದ ಮೇಲೆ ಭರವಸೆಯ ನವ ಚಿತ್ತಾರ ಬಿಡಿಸಿ ನಮ್ಮೆಲ್ಲರ ಬದುಕನ್ನು ಹಸನಗೊಳಿಸಿಯಾನು ಎಂಬ ಸಂತಸದಲಿ ಮತ್ತೆ ಈ ದಿನವನ್ನು ಪ್ರೀತಿಯಿಂದ ಸ್ವಾಗತಿಸೋಣ ಎಂದರು.
ನೋವಿರಲಿ ನಲಿವಿರಲಿ ಕಷ್ಟವಿರಲಿ ಸುಖವಿರಲಿ ಸಂಘಟನೆ ಎನ್ನುವ ತೇರನ್ನು ಜೊತೆಯಾಗಿ ಎಳೆಯೋಣ, ಇಂದೋ ನಾಳೆಯೋ ತೇರನೆಳೆದ ಪುಣ್ಯದ ಪ್ರಸಾದ ನಮಗೋ ನಮ್ಮ ನಂತರದ ಪೀಳಿಗೆಗೋ ದೊರೆತೇ ದೊರೆಯುತ್ತದೆ ಎಂಬ ನಂಬಿಕೆಯಲ್ಲಿ ಸಾಗಿ ಬರೋಣ, ಸಮಸ್ತ ವೃತ್ತಿ ಬಾಂಧವರ ಕಲ್ಯಾಣಕ್ಕಾಗಿ ದುಡಿಯೋಣ, ನಮ್ಮ ವೃತ್ತಿ ಸಮಾಜದಲ್ಲಿ ಸಂಘಟನೆಯ ಹೆಜ್ಜೆ ಗುರುತನ್ನು ಬಲವಾಗಿ ಮೂಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಗುರುಮರುಳಾರಾಧ್ಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾದ ಗ್ರಾ.ಪಂ ಅಧ್ಯಕ್ಷರಾದ ರಾಜಅಹ್ಮದ ಸಿರಸಗಿ, ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ, ಸುಧಾಕರ ಅಡಕಿ ಮತ್ತು ಸುಜಾತಾ ಶ್ರೀ ಅವಟಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ದೇವಿಂದ್ರ ಬಡಿಗೇರ, ರಮೇಶ ಮೋಪಗಾರ, ಸಂಘದ ಮನೋಹರ ಪತ್ತಾರ, ಸಿದ್ದಣ್ಣ ಅಂಗಡಿ, ವಿಮಲಾ ಹಿರೇಮಠ, ಶಾಂತಮ್ಮ ಹಿರೇಮಠ, ಬಸಮ್ಮ ಚಳ್ಳಗಿ, ಶೋಭಾ ಗದ್ದಿಗಿಮಠ, ಪೂಜಾ ಬಡಿಗೇರ, ಜಗದೇವಿ ಗಣಾಚಾರಿ ಸೇರಿದಂತೆ ಇತರರು ಇದ್ದರು.
ಇದೇ ವೇಳೆ ಟೈಲರ್ಸ್ಗಳಿಗೆ ಹೊಸ ಕಾರ್ಡ್ ವಿತರಣೆ ಮಾಡಲಾಯಿತು ಮತ್ತು ಎಲ್ಲ ಟೈಲರ್ಸ್ಗಳ ಪರವಾಗಿ ಗ್ರಾಮದಲ್ಲಿ ಟೈಲರ್ಸ್ ಸಮುದಾಯ ಭವನ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ನಂತರ ಸಾಯಂಕಾಲ ಗುರುಮರುಳಾರಾಧ್ಯರ ಹಿರೇಮಠದಲ್ಲಿ ನಡೆದ ಪುರಾಣ ಕಾರ್ಯಕ್ರಮದಲ್ಲಿ ಟೈರ್ಸ್ ಸಂಘದಿಂದ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

