ಇಂಡಿಯಲ್ಲಿ ’ಭೀಮಾಂತರಂಗ’ ಕೃತಿ ಲೋಕಾರ್ಪಣೆ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಭೀಮಾ ನದಿಗೆ “ಭೀಮಾ ತೀರದ ಹಂತಕರು” ಎಂದು ವಿಕಾರತೆ ಹುಟ್ಟು ಹಾಕುವ ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಅವರು ಶನಿವಾರ ಪಟ್ಟಣದ ಕರ್ನಾಟಕ ಬಿಈಡಿ ಮಹಾವಿದ್ಯಾಲಯದಲ್ಲಿ ಭೀಮಾಂತರಂಗ ಸಾಹಿತ್ಯಿತ ಸಾಂಸ್ಕೃತಿಕ ಜಗಲಿ ವತಿಯಿಂದ ನಡೆದ ಭೀಮಾಂತರಂಗ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭೀಮಾ ತೀರದಲ್ಲಿ ಅನೇಕ ಯುಗ ಪುರುಷರು, ಸಾಹಿತಿಗಳು, ಸಮಾಜದ ಚಿಂತಕರು ಕಾರ್ಯ ಮಾಡಿದ್ದಾರೆ. ಮಾಡುತ್ತಿದ್ದಾರೆ. ಭೀಮಾತೀರ ನಮ್ಮ ಅಂತರಂಗದ ಶಬ್ದವಾಗಬೇಕು.
ಭೀಮಾ ಭಾಗದ ಸಾಹಿತ್ಯದ ಹಿರಿಮೆ ಗರಿಮೆ ಜನರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಈ ದಿಸೆಯಲ್ಲಿ ಭೀಮಾಂತರಂಗ ಜಗುಲಿ ಮಾಡುತ್ತಿರುವ ಕಾರ್ಯ ಪ್ರಶಂಸನೀಯ.
ಭೀಮಾಂತರಂಗ ಸಾಹಿತ್ಯವನ್ನು ಯುವ ಜನಾಂಗಕ್ಕೆ ತಲುಪಿಸುವ ಸ್ಪೂರ್ತಿಸುವ ಕಾರ್ಯ ಮಾಡುತ್ತಿದ್ದು ಮತ್ತು ಭೀಮಾ ನದಿ ಒಳ್ಳೆಯ ಇತಿಹಾಸ ಪರಂಪರೆ ಹೊಂದಿದ್ದು ಭಾವನಾತ್ಮಕವಾಗಿ ಭೀಮೆಗೆ ಕೆಟ್ಟ ಪದಗಳನ್ನು ಬಳಕೆ ಬೇಡ. ಈ ದಿಶೆಯಲ್ಲಿ ಎಲ್ಲರೂ ಕೆಲಸಮಾಡಬೇಕಾಗಿದೆ ಎಂದರು.
ಅಥಣಿಯ ಖ್ಯಾತ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ, ಗುರು ದತ್ತ ಮಹಾರಾಜರು ಪಾದುಕೆ ಹರಿಸಿದ ಭೀಮೆ, ಘತ್ತರಗಿ ಭಾಗಮ್ಮಳ ಭೀಮೆ ಪುಣ್ಯಕ್ಷೇತ್ರಗಳ ಪವಿತ್ರ ನದಿ,ನೆಲ,ಜಲ. ಭೀಮೆಗೆ ವಿಕಾರತೆಯ ಪದಗಳನ್ನು ಬಳಸುವದು ನಡೆದಿದ್ದು ನದಿಯ ಸಂಸ್ಕೃತಿ ಮಾನವ ಸಂಸ್ಕೃತಿಯ ಪ್ರತೀಕವಾಗಿದ್ದು ಈ ನೆಲದಲ್ಲಿ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸುವ ಕಾರ್ಯವಾಗುತ್ತಿದ್ದು ಭೀಮೆಗೆ ಇತಿಹಾಸ ಮತ್ತು ಭವಿಷ್ಯ ರೂಪಿಸುವ ಪದಗಳ ಬಳಕೆಯಾಗಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾಹುಕಾರ ಕುಮಸಗಿ, ಸಂಪಾದಕ ಸಿ.ಎಂ.ಬಂಡಗರ, ಪ್ರಧಾನ ಸಂಪಾದಕ ರಾಘವೇಂದ್ರ ಕುಲಕರ್ಣಿ ವಾಯ್.ಜಿ.ಬಿರಾದಾರ, ಗೀತಯೋಗಿ, ಶ್ರೀಧರ ಹಿಪ್ಪರಗಿ, ಸಂತೋಷ ಬಂಡೆ, ಶ್ರೀಮತಿ ಬಿ.ಸಿ.ಭಗವಂತಗೌಡರ, ಸರೋಜಿನಿ ಮಾವಿನಮರದ ಮಾತನಾಡಿದರು.
ವೇದಿಕೆಯ ಮೇಲೆ ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ,ಪಿ.ಬಿ.ಕತ್ತಿ, ಸಂಗಣ್ಣ ಈರಾಬಟ್ಟೆ, ಎಸ್.ಎಂ. ಕಡಕೋಳ, ಪ್ರಾಚಾರ್ಯಡಾ. ಸುಧಾ ಸುಣಗಾರ ಮತ್ತಿತರಿದ್ದರು.

“ಭೀಮಾತರಂಗ’ ಬಳಗವು ಇತಿಹಾಸ ನೆನಪಿಸುವ, ಭವಿಷ್ಯ ರೂಪಿಸುವ, ಪರಂಪರೆ ಹಾಗೂ ಸಾಹಿತ್ಯದ ಹಿರಿಮೆ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ”
– ಯಶವಂತರಾಯಗೌಡ ಪಾಟೀಲ
ಶಾಸಕರು, ಇಂಡಿ

