ವಿಜಯಪುರ: ಕಾಂಗ್ರೆಸ್ ಗೆ ಮತ ಹಾಕಿದರೆ, ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವತ್ತೇ ಹೇಳಿದ್ದಾರೆ. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಹತ್ತು ಅಡಿ ಜಾಗ ಕೊಡಲಿಲ್ಲ ಕಾಂಗ್ರೆಸ್. ಮತ್ಯಾಕೆ ಆ ಪಕ್ಷಕ್ಕೆ ಮತ ಹಾಕಬೇಕು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಲಕ್ಷ್ಮಿ ದೇವಸ್ಥಾನ ಹತ್ತಿರ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸು ನನಸು ಮಾಡಿದವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ನಾನು ಕೂಡ ಅಂಬೇಡ್ಕರ್ ಅವರ ಪರಮ ಭಕ್ತ ಎಂದು ಹೇಳಿದರು.
ಕಾಂಗ್ರೆಸ್ ನವರು ಹೇಳಿರುವ ಭಜರಂಗ ದಳ ನಿಷೇಧ ಹೇಳಿಕೆಗೆ ಜಗಳಾಡುವುದು, ಆರೋಪ ಪ್ರತ್ಯಾರೋಪ ಮಾಡುವುದು ಬೇಡವೇ ಬೇಡ. ಮೇ 10 ರಂದು ಜೈ ಭಜರಂಗಿ ಬಲಿ ಅನ್ನುವುದು ಕಮಲಕ್ಕೆ ಮತ ಒತ್ತಿ ಉತ್ತರ ನೀಡಬೇಕು. ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯಲು ಅಲೆಯುವುದು, ಹಣ ತುಂಬುವುದು ಬಂದ್ ಮಾಡಲಾಗಿದೆ. ಪೊಲೀಸ್ ಇಲಾಖೆ, ಹೆಸ್ಕಾಂ ಸಿಬ್ಬಂದಿ ಪ್ರತಿಷ್ಠಾಪನಾ ಸ್ಥಳಕ್ಕೆ ಆಗಮಿಸಿ ಪರವಾನಗಿ ಕೊಡುವಂತೆ ಮಾಡಿರುವೆ. ಇನ್ನೂ ಐದು ವರ್ಷದಲ್ಲಿ ವಿಜಯಪುರ ಹಿಂದೂ ಊರು ಮಾಡಿ, ಜಗತ್ತಿನಲ್ಲೇ ಪೇಮಸ್ ಮಾಡುತ್ತೇನೆ ಎಂದು ಹೇಳಿದರು.
ಎಲ್ಲಾ ಸಮುದಾಯಗಳ ಪರ ಧ್ವನಿ ಎತ್ತಿ ಮೀಸಲಾತಿ ಕೊಡಿಸುವ ಕೆಲಸ ಮಾಡಿರುವೆ. ಆದರೆ, ಕೆಲವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಚಾರಕ್ಕೆ ಹೋದಲೆಲ್ಲ ನಿಮ್ಮಿಂದಗಾಗಿ ಮೀಸಲಾತಿ ಸಿಕ್ಕಿತು ಅಂತಾರ. ಅದಕ್ಕಿಂತ ಖುಷಿಯ ವಿಷಯ ಏನೈತಿ. ಸ್ವತ ಅಮಿತ್ ಶಾ ಅವರೇ ಘಂಟಾಘೋಷವಾಗಿ ಹೇಳಿದ್ದಾರೆ ಎಂದರು.
ತೊರವಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಾಗಿವೆ. ಸಮೀಪದಲ್ಲೇ ವೈನ್ ಪಾರ್ಕ್ ಮಂಜೂರು ಮಾಡಲಾಗಿದೆ. ಇದರಿಂದ ವ್ಯಾಪಾರ, ವ್ಯವಹಾರ ಉತ್ತೇಜನಕ್ಕೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಮುಖಂಡರಾದ ಎಂ.ಎಸ್.ರುದ್ರಗೌಡರ, ಬಿ.ಎಸ್. ಪಾಟೀಲ ನಾಗರಾಳ ಹುಲಿ ಸೇರಿದಂತೆ ತೊರವಿ ಗ್ರಾಮದ ಮುಖಂಡರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ಕೋಟ್ ನಿನ್ನೆ ಒಬ್ಬ ಪುಣ್ಯಾತ್ಮ ಹೇಳ್ಯಾನ. ಆರ್.ಎಸ್.ಎಸ್, ಭಜರಂಗ ದಳ, ವಿಶ್ವ ಹಿಂದು ಪರಿಷತ್ ಎಲ್ಲವೂ ಬ್ಯಾನ್ ಮಾಡುತ್ತೇವೆ ಅಂದಾನ. ನಾವೇನ ಮಾಡುತ್ತಿರುತ್ತಿವಿ. ಸುಮ್ಮನೆ ಇರ್ತಿವಾ?
-ಬಸನಗೌಡ ಪಾಟೀಲ ಯತ್ನಾಳ, ಶಾಸಕರು