ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ತುಸುಮಟ್ಟಿನ ಗೌಪ್ಯತೆ ನಮ್ಮ ಶಕ್ತಿಯಾಗಿ ಪರಿಣಮಿಸಬಲ್ಲದು, ಬೇರೆಯವರ ಮಾತಿಗೆ ದಾಳವಾಗುವ ರೀತಿಯಲ್ಲಿ ನಮ್ಮ ಬದುಕನ್ನು ತೆರೆದಿಡಬಾರದು ಎಂಬುದು ಅನಾದಿಕಾಲದಿಂದಲೂ
ರುಜುವಾತು ಪಟ್ಟಿರುವ ಸತ್ಯ.
ಬದುಕಿನ ಪಯಣದಲ್ಲಿ ನಮ್ಮಎಲ್ಲಾ ಅಂತರಂಗದ ಭಾವನೆಗಳನ್ನು ಬಹಿರಂಗವಾಗಿಸಬಾರದು. ಕೆಲವೊಮ್ಮೆ ಏಕಾಂಗಿತನವು ಕೂಡ ಸಂತಸವನ್ನು ಕೊಡುವುದು ನಮ್ಮೊಳಗಿನ ಭಾವಗಳನ್ನು ನಾವೇ ಅನುಭವಿಸುತ್ತಾ ಅದರಲ್ಲಿಯೇ ಸಮಾಧಾನ ಕಂಡುಕೊಳ್ಳಬಹುದು.
ಈ ಜೀವನವೇ ಒಂದು ಆಶಾಶ್ವತವಾದ ತೂಗುಯ್ಯಾಲೆ ಹಿಂದೆ ಮುಂದೆ ತೂಗಿ ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬಂದು ನಿಲ್ಲುತ್ತದೆ ಎಂದ ಮೇಲೆ ನಾವು ಕೂಡ ಅದೆಷ್ಟೇ ಸಿರಿತನ ಮತ್ತು ಬಡತನಗಳ ನಡುವೆ ತೂಗುಯ್ಯಾಲೆ ಆಡಿದರೂ ನಮ್ಮ ಕಾಲುಗಳು ದೃಢವಾಗಿ ನೆಲದ ಮೇಲೆ ಊರುವಂತಿರಬೇಕು.
ನೀವು ಬದುಕಿನಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಬದುಕಿನ ಯುದ್ಧದಲ್ಲಿ ಹೋರಾಡುತ್ತಿರುತ್ತಾನೆ, ಆದ್ದರಿಂದ ಬೇರೆಯವರ ವಿಷಯದಲ್ಲಿ ಯೋಚಿಸುವಾಗ ತುಸು ಕರುಣೆ ತೋರಿ.. ಅದಕ್ಕೇನು ನೀವು ವಿಶೇಷ ಬೆಲೆ ತೆರ ಬೇಕಾಗಿಲ್ಲ.

ನಿಮ್ಮ ಸಂಗಾತಿ ನಿಮ್ಮ ಪ್ರತಿಬಿಂಬವಾಗಿದ್ದು ಆಯ್ಕೆ ಮಾಡಿಕೊಳ್ಳುವಾಗ ತುಸು ಜಾಣ್ಮೆ ವಹಿಸಿ.. ಮುಖದ ಅಂದ ಚಂದ, ದೇಹದ ಸೌಷ್ಠವವಷ್ಟೇ ಅಲ್ಲ ಅವರ ವೈಚಾರಿಕ, ಬೌದ್ಧಿಕ ಮಟ್ಟವನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಿ ಆಯ್ದುಕೊಳ್ಳಿ.
ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ತುಸು ಸ್ವಾರ್ಥಿಯಾಗಿರಿ. ಕೆಸರಿನೊಳಗೆ ಬೆಳೆದರೂ ಕಮಲ ಶುಭ್ರವಾಗಿ ಇರುವಂತೆ ಸಂಸಾರವೆಂಬ ಗೋಜಲಿನಲ್ಲಿ ಸಿಲುಕಿಯೂ ಸಿಲುಕದಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.
ಏನನ್ನಾದರೂ ಸಾಧಿಸಲು ನಿಮಗೆ ಹೆಚ್ಚು ಸಮಯ ಬೇಕಾಗಿಲ್ಲ, ಆದರೆ ನಿಮ್ಮನ್ನು ವಿಚಲಿತಗೊಳಿಸುವ ಹಲವು ಸಂಗತಿಗಳನ್ನು ದೂರವಿಟ್ಟು ಗುರಿಯತ್ತ ಮುನ್ನಡೆಯಬೇಕು. ಸಮಯ ಅತ್ಯಮೂಲ್ಯವಾದದು ಆದ್ದರಿಂದ ಎಲ್ಲರಿಗೂ ನಿಮ್ಮ ಸಮಯವನ್ನು ಹಂಚದೇ ನಿಮಗಾಗಿಯೂ ಸ್ವಲ್ಪ ನಿಮ್ಮ ಸಮಯವನ್ನು ಉಳಿಸಿಕೊಳ್ಳಿ. ನಿಮ್ಮ ಬೆಲೆಯನ್ನು ಅರಿತವರು ನಿಮ್ಮ ಸುತ್ತ ಇರಲಿ,ಆದರೆ ಬೇರೆಯವರು ನಿಮ್ಮನ್ನು ಗೌರವಿಸಲಿ ಮತ್ತು ಹೊಗಳಲಿ ಎಂದು ಆಶಿಸದಿರಿ.
ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ
ಹಾಗೆಯೇ ಸ್ವಯಂ ಪ್ರೀತಿಯು ಸ್ವಾರ್ಥವಲ್ಲ.. ಅದೊಂದು ಅವಶ್ಯಕತೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಮನೋ ದೈಹಿಕ ಸ್ವಾಸ್ತ್ಯ ಎಲ್ಲಕ್ಕಿಂತಲೂ ಮುಖ್ಯ
ನಿಮ್ಮ ಮಾನಸಿಕ ಭಾರವನ್ನು ಹಗುರಗೊಳಿಸುವ ಸ್ನೇಹಿತರನ್ನು ಹೊಂದಿರಿ. ಅತ್ಯಂತ ಬೆಲೆ ಬಾಳುವ ಸ್ನೇಹವನ್ನು ಕಾಯ್ದುಕೊಳ್ಳಿ. ಒಳ್ಳೆಯ ಸ್ನೇಹಿತರು ನಿಮ್ಮನ್ನು ಮೇಲಕ್ಕೆತ್ತಿದರೆ ಕೆಟ್ಟ ಸ್ನೇಹಿತರು ನಿಮ್ಮನ್ನು ಪಾತಾಳಕ್ಕೆ ಇಳಿಸಬಲ್ಲರು.. ಆಯ್ಕೆ ಮತ್ತು ಅವಕಾಶಗಳು ನಿಮ್ಮವೇ.
ಎಲ್ಲಕ್ಕಿಂತಲೂ ಮುಖ್ಯವಾದದ್ದು ನಿಮ್ಮ ಮಾನಸಿಕ ಶಾಂತಿ. ಪ್ರೀತಿಗಾಗಿ ಹುಡುಕಾಡಬೇಡಿ ನಿಮ್ಮ ಜೀವನವನ್ನು ಪ್ರೀತಿಯಿಂದ ಜೀವಿಸಿ ಸರಿಯಾದ ವ್ಯಕ್ತಿ ನಿಮ್ಮ ಜೀವನದಲ್ಲಿ ಬಂದೇ ಬರುತ್ತಾರೆ. ಜೊತೆಯಾಗಿ ಬೆಳೆಯುವ ಮಾನಸಿಕತೆಯನ್ನು ಹೊಂದಿರುವವರೊಂದಿಗೆ ಸ್ನೇಹವಿರಲಿ.
ಯಾರಾದರೂ ನಂಬಿಕೆ ದ್ರೋಹ ಮಾಡಿದಾಗ, ಸ್ನೇಹಿತರು ಮೋಸ ಮಾಡಿದಾಗ ನಿಧಾನವಾಗಿ ಅವರಿಂದ ಕಲಿತ ಪಾಠವನ್ನು ನೆನಪಿಟ್ಟು ದೂರ ಸರಿಯಿರಿ ಆದರೆ ಅಂಥವರ ಸ್ನೇಹ ಕಳೆದುಹೋದುದಕ್ಕೆ ಯಾವುದೇ ಪಶ್ಚಾತಾಪ ಬೇಡ.
ಪ್ರತಿಯೊಬ್ಬರ ಬದುಕು ಕೆಲ ಏರಿಳಿತಗಳಿಂದ, ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಸೋಲನ್ನು ಒಪ್ಪದೇ ಧೈರ್ಯವನ್ನು ಒಗ್ಗೂಡಿಸಿಕೊಂಡು ಮುನ್ನಡೆಯಿರಿ. ಅಂತಹ ಸಮಯದಲ್ಲಿ ಬಣಗುಟ್ಟುವ ಖಾಲಿತನ ನಿಮ್ಮನ್ನು ಆವರಿಸಬಹುದು, ಕೆಲ ಸಮಯದ ವಿಶ್ರಾಂತಿಯ ನಂತರ ನಿಮ್ಮನ್ನು ನೀವು ಹುರಿದುಂಬಿಸಿಕೊಂಡು ಮತ್ತೆ ಮುಂದೆ ಸಾಗಿರಿ… ಡೋಂಟ್ ಕ್ವಿಟ್. ಕೆಲವೊಮ್ಮೆ ಹೆಚ್ಚು ಸಶಕ್ತವಾಗಿ ಮತ್ತೆ ಮುಂದುವರೆಯಲು ತುಸು ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಸಿಂಹ, ಚಿರತೆ ಮತ್ತು ಹುಲಿಗಳಂತಹ ಪ್ರಾಣಿಗಳು ಕೂಡ ತನ್ನ ಗುರಿಯತ್ತ ಮುನ್ನುಗುವಾಗ ಮೊದಲು ಒಂದೆರಡು ಹೆಜ್ಜೆ ಹಿಂದೆ ಸರಿಯುತ್ತವೆ ಎಂಬುದು ನೆನಪಿರಲಿ.
ಬೇರೆಯವರ ಯಶಸ್ಸಿನಿಂದ ಪಾಠ ಕಲಿಯಿರಿ.. ಅವರ ಸೋಲು ಕೊಡುವ ಅನುಭವದ ಪಾಠವನ್ನು ಮರೆಯದಿರಿ.
ಸಂತೋಷವಾಗಿರಬೇಕು ಎಂದು ಬಯಸುವುದಾದರೆ ಬೇರೆಯವರಿಂದ ಅತಿ ಕಡಿಮೆ ಆಶಿಸಿ. ನೀವು ಆಶಿಸಿದ್ದು ದೊರಕಲೇಬೇಕೆಂಬ ಆಶಯವೇ ನಿಮ್ಮ ನಿರಾಸೆಗೆ ಕಾರಣವಾಗಬಹುದು. ಸರಿಯಾದ ಸಮಯಕ್ಕೆ ನಿಮಗೆ ನೀವು ಬಯಸುವುದು ಸಿಕ್ಕೇ ಸಿಗುತ್ತದೆ ಎಂಬ ಧನಾತ್ಮಕ ಮನಸ್ಥಿತಿ ಇರಲಿ.. ಆದರೆ ಪ್ರಯತ್ನವಿಲ್ಲದೆ ಫಲವಿಲ್ಲ ಎಂಬ ಅರಿವು ಕೂಡ ಜೊತೆಗಿರಲಿ.
ನಿಮಗೆ ಗೌರವ ದೊರೆಯದ ಸ್ಥಳದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ದೂರವಾಗಿ. ಯಾರೂ ನಿಮಗೆ ಸಹಾಯ ಹಸ್ತವನ್ನು ಚಾಚಲಿಲ್ಲ ಎಂದು ಬೇಸರಪಟ್ಟುಕೊಳ್ಳಬೇಡಿ ನೀವೇ ನಿಮಗೆ ದಾರಿ ತೋರುವವರಾಗಿ. ದೂರುವುದು ನಿಮಗೆಂದೂ ಸಹಾಯ ಮಾಡುವುದಿಲ್ಲ.
ನಿಮ್ಮ ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನಹರಿಸಿ. ಹೃದಯದ ಅಂತರಾಳದ ಮಾತುಗಳು
ಎಂದೂ ಕ್ಲೇಶಕ್ಕೆ ಎಡೆ ಮಾಡಿ ಕೊಡುವುದಿಲ್ಲ. ಬಿಚ್ಚು ಮನಸ್ಸಿನ ಮಾತುಗಳು ಪವಿತ್ರವಾಗಿರುತ್ತವೆ.
ನಾಳೆ ಮಾಡುತ್ತೇನೆ ಎಂಬುದು ಆಲಸ್ಯದ ಮತ್ತೊಂದು
ರೂಪವಾಗಿರುತ್ತದೆ. ನಿಮ್ಮ ದೈಹಿಕ ರೂಪ, ಬಣ್ಣ ಹೇಗೆ ಇರಲಿ, ಆದರೆ ನಿಮ್ಮ ಮಾನಸಿಕ ಪ್ರಬುದ್ಧತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಲಿ.
ಕಾಯುವಿಕೆ ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ.. ‘ಕಾಯದ ಹೊರತು ಹಾಲು ಕೆನೆಗಟ್ಟದು’ ಎಂಬ ಮಾತನ್ನು ಸದಾ ನೆನಪಿನಲ್ಲಿಡಿ. ಜೀವನದ ಪಯಣದಲ್ಲಿ ನಿಮ್ಮ ಎಲ್ಲ ನಡೆಗಳು ಎಲ್ಲರಿಗೂ ಅರ್ಥವಾಗುವುದಿಲ್ಲ ಹಾಗೆಂದು ನಿಮ್ಮ ಪಯಣ ವ್ಯರ್ಥವಲ್ಲ.. ಬೇರೆಯವರ ಅನವಶ್ಯಕ ಮಾತುಗಳಿಗೆ ನಕ್ಕು ಮುನ್ನಡೆಯಿರಿ.
ನಿಮ್ಮ ಬದುಕಿನಲ್ಲಿ ಈಗಾಗಲೇ ಘಟಿಸಿರುವ ದುರ್ಘಟನೆಗಳ ಇಂದಿನ ಪ್ರತಿಬಿಂಬ ನೀವಾಗದಿರಿ. ಸ್ವಾನುಕಂಪದ ಬೇಗೆಯಲ್ಲಿ ಬೇಯದಿರಿ. ಚಿಕ್ಕದಾದರೂ ಒಳ್ಳೆಯ ಸ್ನೇಹಿತರ ಬಳಗ ನಿಮ್ಮದಾಗಿರಲಿ. ಕೆಲ ಸಮಯದವರೆಗೆ ಮಾತ್ರ ನಿಮ್ಮ ಸ್ನೇಹವನ್ನು ಬಯಸುವ ಜನರನ್ನು ಶಾಶ್ವತವಾಗಿ ದೂರವಿಡಿ. ಹಾಗೆ ಬಂದು ಹೋಗುವ ಜನರನ್ನು ದೂರವಿಟ್ಟು ಒಬ್ಬಂಟಿಯಾಗಿ ಬದುಕನ್ನು ಎದುರಿಸುವುದನ್ನು ಕಲಿಯಿರಿ.
ಅವಶ್ಯಕತೆ ಬಿದ್ದಾಗ ನಿಮ್ಮನ್ನು ಸುತ್ತುವರಿದಿರುವ ಜನರ ಕಣ್ಣಿನಿಂದ ದೂರವಾಗಿ ನಿಮ್ಮ ವೈಯುಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ…. ಹಾಗೆಂದು ನೀವೇ ಸರಿ ಎಂದು ಬೇರೆಯವರಿಗೆ ಸಿದ್ಧಪಡಿಸುವ ಅವಶ್ಯಕತೆ ಇಲ್ಲ.
ಈಗಾಗಲೇ ಘಟಿಸಿ ಹೋದ ಘಟನೆಯಲ್ಲಿ ನಿಮ್ಮ ತಪ್ಪಿಲ್ಲದೆಯೂ ನಿಮ್ಮನ್ನು ದೂಷಿಸುವವರನ್ನು ಕ್ಷಮಿಸಿಬಿಡಿ. ಆದರೆ ಮತ್ತೆಂದೂ ಅವರನ್ನು ನಂಬಬೇಡಿ.
ಈ ಬದುಕಿನ ಪಯಣ ಬಹಳ ದೀರ್ಘವಾದದ್ದು.. ಕೇವಲ ಬೇರೆಯವರನ್ನು ಮೆಚ್ಚಿಸಲು ಮಾತ್ರ ನಮ್ಮ ಬದುಕನ್ನು ಮೀಸಲಾಗಿಡುವುದರ ಅವಶ್ಯಕತೆ ಇಲ್ಲ.. ಬದಲಾಗಿ ಬೇರೆಯವರ ಬದುಕಿಗೆ ನಾವು ಪ್ರೇರಣಾ ದಾಯಿಯಾಗಿ ನಮ್ಮನ್ನು ನಾವು ಬದಲಿಸಿಕೊಳ್ಳುತ್ತಾ ನಮ್ಮ ಬದುಕನ್ನು ಆದಷ್ಟು ಉತ್ತಮಗೊಳಿಸಿಕೊಳ್ಳುತ್ತಾ ಸಾಗಬೇಕು..


