ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ನಿತ್ಯ, ಸತ್ಯ ಬದುಕಿನ ಶ್ರೇಷ್ಠತೆಯನ್ನು ಜಗತ್ತಿಗೆ ನೀಡಿದವರು. ಅಂತಹ ಶರಣರ ಸತ್ಸಂಗದಿಂದ ಅಂತರಂಗ ಪರಿಶುದ್ಧವಾಯಿತು. ಅಂತಹ ಶ್ರೇಷ್ಠ ಶರಣರಲ್ಲಿ ಡೋಹರ ಕಕ್ಕಯ್ಯ ಒಬ್ಬರು ಎಂದು ಪ್ರೊ. ಬಿ.ಎಸ್. ಬೆಳಗಲಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಲಿಂಗಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಡೋಹರ ಕಕ್ಕಯ್ಯನವರ ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತ ಅವರು ಕಾಯಕ, ದಾಸೋಹ, ಸಮಾನತೆ ಪರಿಶುದ್ಧತೆ ಎಲ್ಲವೂ ಡೋಹರ ಕಕ್ಕಯ್ಯನವರ ವಚನದಲ್ಲಿ ಅಡಕವಾಗಿದೆ. ಬಸವಣ್ಣನವರಿಗಿಂತ ಹಿರಿಯರಾದರೂ ಆಧ್ಯಾತ್ಮದ ಹಸಿವನ್ನು ನೀಗಿಸಲು ಪುಣೆಯ ಹಳ್ಳ್ಳಿಯಿಂದ ಕಲ್ಯಾಣಕ್ಕೆ ಬಂದು ಅನುಭಾವಿಗಳಾಗಿ ಅಭಿನವ ಚನ್ನಮಲ್ಲಿಕಾರ್ಜುನ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ. ಆರು ವಚನಗಳು ಲಭ್ಯವಾಗಿವೆ ಅವೆಲ್ಲವೂ ಸಮಾನತೆಗಾಗಿ ರಚಿಸಿದಂತಹವುಗಳು ಎಂದರು.
ಡಾ. ಸಂಗಮೇಶ ಮೇತ್ರಿ ಮಾತನಾಡಿ ಡೋಹರ ಕಕ್ಕಯ್ಯ ಕೆಳಸ್ತರದ ವ್ಯಕ್ತಿ ಗುರು, ಲಿಂಗ, ಜಂಗಮ, ದಾಸೋಹ ಕಲ್ಪನೆ ಇತ್ತು. ಸಾಮಾಜಿಕ ಸಾಮರಸ್ಯ ಬರಬೇಕು ಎನ್ನುವ ಉದ್ದೇಶವಿತ್ತು. ಚರ್ಮ ಹದ ಮಾಡುವ ಕಾಯಕದ ಜೊತೆಗೆ ಸಿದ್ಧಾಂತ, ಪ್ರಸಾದ, ನಡೆ, ನುಡಿ, ಅನುಸರಿಸಿ ಬಂದವರು. ಮುಟ್ಟದಕಾರಣ ಬಯಲು ಬಯಲಾದೆನು ಎಂದು ವಚನಗಳಲ್ಲಿ ವ್ಯಕ್ತವಾಗಿದೆ ಎಂದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರಿಗೆ ಸಮಾನತೆ ತರಬೇಕು. ಕಾಯಕ, ದಾಸೋಹ, ಅನುಭಾವ ಈ ಮೂಲಕವಾಗಿಯೇ ಸಮಾಜದಲ್ಲಿ ಹಿರಿಮೆಯನ್ನು ಕಂಡುಕೊಂಡವರು ಡೋಹರ ಕಕ್ಕಯ್ಯನವರು. ಕಾಯಕ, ದಾಸೋಹದ ಬಗ್ಗೆ ವ್ಯಕ್ತಿತ್ವದ ವಿವರಣೆ ಮಾನವೀಯ ಮೌಲ್ಯಗಳು, ಚಾರಿತ್ರಿಕ ಹಿನ್ನಲೆ ಜೀವಂತ ಸಾಕ್ಷಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಡಾ. ಸುಭಾಸಚಂದ್ರ ಕನ್ನೂರ ಪರಿಚಯಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ವಿಠ್ಠಲ ತೇಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಹದೇವ ನಾಡಗೌಡರ, ಮಲ್ಲಿಕಾರ್ಜುನ ಅಮರಣ್ಣವರ, ಭೀಮಣ್ಣ ಭಜಂತ್ರಿ, ಮಹಾದೇವ ಹಾಲಳ್ಳಿ, ಜಂಬುನಾಥ ಕಂಚ್ಯಾಣಿ, ಈರಣ್ಣ ತೊಂಡಿಕಟ್ಟಿ, ಡಾ. ವಿ.ಡಿ. ಐಹೊಳ್ಳಿ ದಂಪತಿ, ಬ್ಯಾಕೋಡ ದಂಪತಿ ಡಾ. ಎಂ.ಎಸ್. ಮಾಗಣಗೇರಿ, ಶರಣಗೌಡ ಪಾಟೀಲ, ಎಂ.ಜಿ. ಯಾದವಾಡ, ದ್ರಾಕ್ಷಾಯಣಿ ಬಿರಾದಾರ, ಎಸ್.ಎನ್. ಶಿವಣಗಿ ಉಪಸ್ಥಿತರಿದ್ದರು. ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

