ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಜಾತಿಗಳ ವಿಶೇಷ ಘಟಕ (ಎಸ್.ಸಿ.ಪಿ) ಹಾಗೂ ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ (ಟಿ.ಎಸ್.ಪಿ)ಗಳ ಮೀಸಲು ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯದವರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ಚೌಕ್ ದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಮೆರವಣಿಗೆಯುದ್ದಕ್ಕೂ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
ಕಲಬುರಗಿ ಮಾಜಿ ಸಂಸದ ಉಮೇಶ್ ಜಾದವ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿಸಲು, ದಲಿತ ಕೇರಿ, ಕಾಲೊನಿಗಳಿಗೆ ಆದಿವಾಸಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಭೂ ಒಡೆತನ, ಭೂಮಿಗೆ ನೀರು, ಸ್ವಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಸತಿ ಶಾಲೆ, ವಸತಿ ನಿಲಯ ನಿರ್ಮಾಣದ ಮಹತ್ತರ ಉದ್ದೇಶದಿಂದ ಆರಂಭಗೊಂಡ ಪರಿಶಿಷ್ಟ ಜಾತಿಗಳ ವಿಶೇಷ ಘಟಕ (ಎಸ್.ಸಿ.ಪಿ) ಹಾಗೂ ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ (ಟಿ.ಎಸ್.ಪಿ)ಗಳ ಮೀಸಲು ಅನುದಾನ ಗ್ಯಾರಂಟಿಗೆ ಬಳಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ.
೨೦೨೩ ರಲ್ಲಿ ಎಸ್.ಸಿ.ಪಿ ಯಿಂದ ರೂ.೭,೭೧೩.೧೫ ಸಾವಿರ ಕೋಟಿ, ಟಿ.ಎಸ್.ಪಿ ಯಿಂದ ರೂ.೩,೪೩೦.೮೫ ಸಾವಿರ ಕೋಟಿ ಸೇರಿ ರೂ.೧೧,೧೪೪ ಸಾವಿರ ಕೋಟಿ ಹಾಗೂ ೨೦೨೪ ರಲ್ಲಿ ಎಸ್.ಸಿ.ಪಿ ಯಿಂದ ರೂ.೯,೯೮೦.೬೬ ಸಾವಿರ ಕೋಟಿ, ಟಿ.ಎಸ್.ಪಿ ಯಿಂದ ರೂ.೪,೩೦೨.೦೨ ಸಾವಿರ ಕೋಟಿ ಸೇರಿ ರೂ.೧೪,೨೮೨.೬೮ ಸಾವಿರ ಕೋಟಿ, ಹೀಗೆ ಕಳೆದ ಎರಡು ವರ್ಷದಲ್ಲಿ ೨೫,೪೨೬.೬೮ ಕೋಟಿ ಅನುದಾನವನ್ನು ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುವ ಈ ಮೂಲಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರವಿಲ್ಲ. ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಒಳಗೊಂಡಿದ್ದಾರೆ. ಅವರೆಲ್ಲರಿಗೂ ದಲಿತರಿಗೆ ಮೀಸಲಿಟ್ಟ ಅನುದಾನ ಕೊಡುವುದು ನ್ಯಾಯವಲ್ಲ. ಬಜೆಟ್ ದಲ್ಲಿ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ಮೀಸಲಿಡುವ ಕಾಂಗ್ರೆಸ್ ಸರ್ಕಾರ, ಆ ಹಣವನ್ನೇಕೆ ಗ್ಯಾರಂಟಿಗೆ ಬಳಸುವುದಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರ್, ರಮೇಶ್ ಬೂಸನೂರ್, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಶಂಕರಗೌಡ ಪಾಟೀಲ್, ವಿವೇಕಾನಂದ ಡಬ್ಬಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷರಾದ ಬಳ್ಳಾರಿ ಹನುಮಂತಪ್ಪ, ಸಂಯೋಜಕರಾದ ರಾಮಣ್ಣ ಬಲ್ಲಾಹಣ್ಸಿ, ವಿಜುಗೌಡ ಪಾಟೀಲ್, ಉಮೇಶ್ ಕೊಳಕರ್, ಗೋಪಾಲ್ ಘಟಕಂಬ್ಳೆ, ಕಾಸು ಗೌಡ ಬಿರಾದಾರ್ ಉಮೇಶ್ ಕಾರಜೋಳ, ಸಂಜಯ ಐಹೊಳೆ, ರವಿ ಬಗ್ಗೆ, ಮಂಜುನಾಥ್ ಮೀಸೆ, ಇರಣ್ಣ ಸಾಬು ಮಾಶಾಳ ಮಲ್ಲನಗೌಡ ಪಾಟೀಲ್, ಚಿದಾನಂದ ಚಲವಾದಿ ಬಸವರಾಜ್ ಹೂಗಾರ, ಕೃಷ್ಣ ಗುನಾಳಕರ್, ಬಸವರಾಜ್ ಬೈಚಬಾಳ, ಶ್ರೀನಿವಾಸ್ ಕಂದಗಲ್, ಟಿ ಸಿದ್ದಲಿಂಗಪ್ಪ ಮಮದಾಪುರ್ ಶಂಕರ್ ಹೂಗಾರ್, ಪಾಲಿಕೆ ಸದಸ್ಯರಾದ ಪರಮಾನಂದ್ ಬಿರಾದಾರ, ಸಂಜಯ ಪಾಟೀಲ್ ಕನ್ಮಡಿ, ವಿಜಯ್ ಜೋಶಿ, ಶ್ರೀಧರ್ ಬಿಜ್ಜರಿಗೆ, ಭರತ್ ಕೋಳಿ, ಬಸವರಾಜ್ ಹೂಗಾರ್, ಮಲ್ಲಿಕಾರ್ಜುನ್ ಜೋಗುರ, ಸಂದೀಪ್ ಪಾಟೀಲ್, ಕಾಂತು ಸಿಂಧೆ, ಪಾಪು ಸಿಂಗ್ ರಜಪುತ್, ಭೀಮಾಶಂಕರ ಹದನೂರ ಸೇರಿದಂತೆ ಇತರರು ಇದ್ದರು.

