ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಸರ್ಕಾರಿ ನರ್ಸಿಂಗ ಕಾಲೇಜ ಹಾಗೂ ವಿವಿಧ ನರ್ಸಿಂಗ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಶ್ರವಣ ದಿನಾಚರಣೆಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ಹಮ್ಮಿಕೊಂಡ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಡಾ.ಚನ್ನಮ್ಮ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸಂಪತ್ತ ಗುಣಾರಿ ಜಂಟಿಯಾಗಿ ಚಾಲನೆ ನೀಡಿದರು.
ಈ ಜಾಥಾವು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದವರೆಗೆ ಬಂದು ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಡಾ.ಚನ್ನಮ್ಮ ಕಟ್ಟಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಶಬ್ದಮಾಲಿನ್ಯದಿಂದ ಶ್ರವಣದೋಷ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ರೇಡಿಯೋ, ಟಿ.ವಿ, ಮೊಬೈಲ್ ಶಬ್ದ ಸೇರಿದಂತೆ ಹೆಡ್ ಸೆಟ್ಗಳ ಅಧಿಕ ಬಳಕೆಯಿಂದಾಗಿ ಕಿವಿಯ ಒಳಭಾಗದ ನರಕೋಶಗಳು ದುರ್ಬಲಗೊಂಡು ಶ್ರವಣ ದೋಷಕ್ಕೆ ಎಡೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸಂಪತ್ತ ಗುಣಾರಿ ಮಾತನಾಡಿ, ಆಹಾರ ಪದಾರ್ಥಗಳನ್ನು ಅಗೆಯುವಾಗ ದವಡೆಯ ಚಲನೆಯಿಂದಾಗಿ ಸಹಜವಾಗಿ ಕಿವಿಯಲ್ಲಿನ ಸೂಕ್ಷ್ಮ ಹಾಗೂ ಸಣ್ಣ ಕುಗ್ಗೆ ಕಣಗಳು ತಾವಾಗಿಯೇ ಹೊರಬರುತ್ತವೆ. ಹಾಗಾಗಿ ಸ್ವಚ್ಛತೆಗಾಗಿ ಕಿವಿಯ ಒಳ ಭಾಗದ ಎಣ್ಣೆ, ಕಡ್ಡಿ, ಪಿನ್ನು, ಬಡ್ಸ್ ಗಳನ್ನು ಹಾಕುವುದರ ಬದಲಾಗಿ ಕಿವಿಯ ಹೊರಭಾಗದಲ್ಲಿ ಒದ್ದೆಬಟ್ಟೆಯಲ್ಲಿ ಕಿವಿಯ ಮೇಲ್ಭಾಗ ಸ್ವಚ್ಛ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ವರಿ ಗೊಲಗೇರಿ, ಬಸವನ ಬಾಗೇವಾಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಕವಿತಾ ದೊಡ್ಡಮನಿ, ಡಾ.ಪರಸುರಾಮ ಹಿಟ್ನಳ್ಳಿ, ಡಾ. ರವಿ ಅಂಬೇವಾಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಂ ಕೊಲೂರ, ಸುರೇಶ ಹೊಸಮನಿ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಸರ್ಕಾರಿ ನರ್ಸಿಂಗ್ ಶಾಲೆಯ ಮತ್ತು ವಿವಿಧ ನರ್ಸಿಂಗ್ ಕಾಲೇಜಗಳ ಉಪನ್ಯಾಸಕರು ವಿದ್ಯಾರ್ಥಿ, ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.

