ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಕಣ್ಣಿನ ತೊಂದರೆಗೆ ಒಳಗಾಗಿ ಕಲಿಕೆಯಲ್ಲಿ ಹಿಂದುಳಿಯಬಾರದು ಎಂದು ವಿಜಯಪುರ ಗ್ರಾಮೀಣ ವಲಯದ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ (ಬಿಐಈಆರ್ಟಿ) ಎಸ್.ಬಿ.ಬಿರಾದಾರ ಹೇಳಿದರು.
ತಾಲ್ಲೂಕಿನ ಘೋಣಸಗಿ, ಕಳ್ಳಕವಟಗಿ ಹಾಗೂ ಅಳಗಿನಾಳ ಗ್ರಾಮಗಳ ಶಾಲೆಗಳಲ್ಲಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟನ್ ಕಂಪನಿ ಸಹಯೋಗದೊಂದಿಗೆ 500 ಕ್ಕೂ ಹೆಚ್ಚು ಶಾಲಾ ವಿಧ್ಯಾರ್ಥಿಗಳಿಗೆ “ನನ್ನ ಕಣ್ಣು” ಎಂಬ ಕಾರ್ಯಕ್ರಮದ ಮೂಲಕ ಉಚಿತ ನೇತ್ರ ಚಿಕಿತ್ಸೆ ತಪಾಸಣೆ ನೆರವೇರಿಸಿ ಅವರು ಮಾತನಾಡಿದರು.
ಉಚಿತವಾಗಿ ಮಕ್ಕಳಿಗೆ ನೇತ್ರ ತಪಾಸಣೆ ಮಾಡಿ, ಉಚಿತವಾಗಿ ಕನ್ನಡಕವನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ ಬೆಂಗಳೂರಿನ ಆಸ್ಪತ್ರೆಗೆ ಕರೆಸಿಕೊಂಡು ಚಿಕಿತ್ಸೆ ನೀಡುತ್ತಾರೆ. ತಂಗಲು ವಸತಿ ವ್ಯವಸ್ಥೆ ಸಹ ಮಾಡಿ ಸಾರಿಗೆ ವೆಚ್ಚವಾಗಿ ₹ 1 ಸಾವಿರ ಮಕ್ಕಳಿಗೆ ನೀಡುತ್ತಾರೆ. ಬಡ ಮಕ್ಕಳ ನೇತ್ರ ಚಿಕಿತ್ಸೆ ಮಾಡುತ್ತಿರುವ ಇವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿಜಯಪುರ ಗ್ರಾಮೀಣವಲಯದ ಶಾಲೆಗಳಲ್ಲಿ ಇಲ್ಲಿಯವರೆಗೆ 145 ಶಾಲೆಗಳಲ್ಲಿ 16556 ಮಕ್ಕಳ ನೇತ್ರ ತಪಾಸಣೆ, 604 ಮಕ್ಕಳಿಗೆ ಕನ್ನಡಕವನ್ನು ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ 299 ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ರೆಪರ್ ಮಾಡಲಾಗಿದೆ. ರೆಪರ್ ಮಾಡಲಾದ ಮಕ್ಕಳಲ್ಲಿ 50 ಮಕ್ಕಳು ಆಸ್ಪತ್ರೆಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ದರ್ಶನ ಪಿ.ಎನ್, ವಿ. ಸ್ವಾತಿ, ಎಸ್.ಪೂಜಾ ನಾಯಕ, ಸಿಆರ್ಪಿ ಜೆ.ಜಿ.ದೊಡ್ಡಿಹಾಳ, ಮುಖ್ಯೋಪಾಧ್ಯಾಯ, ಎಂ.ಎಚ್.ಜಾಧವ, ಅಂಜನಾ ದೇಶಮುಖ ಇದ್ದರು.

