ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೊಪ್ಪಳದಲ್ಲಿ ಮಾ.9 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ, ಕೆಯುಡಬ್ಲುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾನಿಪ ಸಂಘದ ವಿಜಯಪುರ ಜಿಲ್ಲಾ, ತಾಲೂಕು ಘಟಕಗಳ ಎಲ್ಲ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಮನವಿ ಮಾಡಿದರು.
ಇಲ್ಲಿನ ಹೊಸ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಕಾರ್ಯಕಾರಿಣಿ ಸಭೆ, 11 ಗಂಟೆಗೆ ಸರ್ವ ಸದಸ್ಯರ ಸಾಮಾನ್ಯ ಸಭೆ, ಮದ್ಯಾಹ್ನ 2 ಗಂಟೆಗೆ ದತ್ತಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಮುಂಚಿತವಾಗಿ ಪಾಲ್ಗೊಳ್ಳಲು ತೆರಳುವ ಸದಸ್ಯರಿಗೆ ವಸತಿ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲಾ ಘಟಕದವರು ಮಾಡಿದ್ದಾರೆ. ಎಷ್ಟು ಜನ ಹೋಗುತ್ತೀರಿ ಎನ್ನುವ ಮಾಹಿತಿಯನ್ನು ಮುಂಚಿತವಾಗಿಯೇ ಜಿಲ್ಲಾ ಘಟಕಕ್ಕೆ ನೀಡಿದರೆ ನೋಂದಣಿಗೆ ಅನುಕೂಲ ಆಗುತ್ತದೆ ಎಂದರು.
10ರಂದು ಜಿಲ್ಲಾ ಸಾಮಾನ್ಯ ಸಭೆ
ಮಾ.10 ರಂದು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕಾನಿಪ ಸಂಘದ ವಿಜಯಪುರ ಜಿಲ್ಲಾ ಘಟಕದ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಮಾಧ್ಯಮ ಅಕಾಡೆಮಿ ಸೇರಿ ವಿವಿಧ ಪ್ರಶಸ್ತಿ ಪುರಸ್ಕೃತರಿಗೆ, ಹುದ್ದೆ ಪಡೆದುಕೊಂಡವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಸಂಘದ ವಿಜಯಪುರ ನಗರ ಮತ್ತು ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಅಂದು ಬೆಳಿಗ್ಗೆ 10 ಗಂಟೆಯ ಒಳಗೆ ರಂಗಮಂದಿರಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು. ಆಯಾ ತಾಲೂಕು ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯವರು ತಮ್ಮ ಹಂತದಲ್ಲಿ ಪೂರ್ವಭಾವಿ ಸಭೆ ನಡೆಸಿ ಜಿಲ್ಲಾ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆಯನ್ನು ಮುಂಚಿತವಾಗಿಯೇ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಅವರ ಹತ್ತಿರ ಕೊಡಬೇಕು ಎಂದು ಸಭೆಯಲ್ಲಿ ಕೋರಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಇಂದುಶೇಖರ ಮಣೂರ, ಖಜಾಂಚಿ ರಾಹುಲ್ ಆಪ್ಟೆ, ಸಹ ಖಜಾಂಚಿ ದೀಪಕ ಶಿಂತ್ರೆ, ಕಾರ್ಯದರ್ಶಿ ಅವಿನಾಶ ಬಿದರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ ಯಡಹಳ್ಳಿ, ಗುರು ಗದ್ದನಕೇರಿ, ಗುರು ಲೋಕರೆ, ಇರ್ಫಾನ ಶೇಖ್, ಶಶಿಕಾಂತ ಮೆಂಡೇಗಾರ, ಬಸವರಾಜ ಉಳ್ಳಾಗಡ್ಡಿ, ಸದ್ದಾಂಹುಸೇನ ಜಮಾದಾರ, ಇಂಡಿ ಘಟಕದ ಅಧ್ಯಕ್ಷ ಅಬುಶಾಮ ಹವಾಲ್ದಾರ್ ಇನ್ನಿತರರು ಇದ್ದರು.

