ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶಾಲೆಗಳಲ್ಲಿ ಜಾತಿ, ಮಥ, ಪಂಥ ಎನ್ನದೇ ಎಲ್ಲರೂ ಒಂದಾಗಿ ಖುಷಿಯಿಂದ ಮಾಡುವ ಉತ್ಸವಗಳು ಸಮಾಜವನ್ನು ಗಟ್ಟಿಗೊಳಿಸುತ್ತಿವೆ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಾಲೆಯ ವಾರ್ಷಿಕೋತ್ಸವ ಬಂದರೆ ಮಕ್ಕಳಿಗೆ ಪಾಲಕರಿಗೆ ಹಬ್ಬವಿದ್ದಂತೆ. ತಮ್ಮ ಮಕ್ಕಳ ಮನರಂಜನೆಯನ್ನು ನೋಡಿ ಪಾಲಕರು ಕಣ್ತುಂಬಿಕೊಂಡು ಆನಂದ ಪಡೆಯುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಶಾಲೆಗಳು ಆಗಾಗ ಏರ್ಪಡಿಸಿದಲ್ಲಿ ಮಕ್ಕಳಲ್ಲಿ ಲವಲವಿಕೆ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕಾರಗಳನ್ನು ಕಲಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕಿದೆ. ಶಿಕ್ಷಣ ರಂಗ ಈಗ ಒಂದು ಲಾಭದಾಯಕ ವ್ಯವಹಾರ ಆಗಿದೆ. ತಮ್ಮ ಮಕ್ಕಳಿಗೆ ಉತ್ತಮ, ಶಿಸ್ತುಬದ್ಧ ಶಿಕ್ಷಣ ನೀಡಬೇಕು ಎನ್ನುವುದು ಎಲ್ಲ ಪಾಲಕರ ಕನಸು. ಆದರೆ ಇದೇ ಸಮಯದಲ್ಲಿ ಶಾಲೆಗಳಲ್ಲಿ ಮಾನವೀಯತೆ, ಸಂಸ್ಕಾರ ಮರೆಯಾಗುತ್ತಿದೆ. ಯಾವ ವಿಶ್ವವಿದ್ಯಾಲಯವೂ ಕಲಿಸದ ಬದುಕಿನ ಪಾಠಗಳನ್ನು ಸಮಾಜ ನಮಗೆ ಕಲಿಸುತ್ತದೆ. ಅಂಥ ಸಮಾಜದ ಋಣ ತೀರಿಸುವ ಕೆಲಸ ನಾವು ಮಾಡಬೇಕು. ಹೆಚ್ಚಿನ ಲಾಭ ಅಪೇಕ್ಷಿಸದೇ, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಕಲ್ಯಾಣ ಬಯಸುವ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.
ವೇದಿಕೆಯಲ್ಲಿ ಬಸವ ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷ ಮುರಿಗೆಪ್ಪ ಮೋಟಗಿ, ಕಾರ್ಯದರ್ಶಿ ಜಗದೀಶ ಕಂಠಿ, ಪ್ರೌಢಶಾಲಾ ವಿಭಾಗದ ಮುಖ್ಯ ಗುರುಮಾತೆ ದಿವ್ಯಾ ಹೆಬ್ಬಾರ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರು ವಿನೋದ ಪಟಗಾರ, ಶಾಲಾ ಸಲಹಾ ಸಮಿತಿ ಸದಸ್ಯರಾದ ಜಿ.ಆರ್.ನಾವದಗಿ, ಎಸ್.ಎ.ಬೇವಿನಗಿಡದ, ವಿದ್ಯಾರ್ಥಿ ಪ್ರತಿನಿಧಿಗಳಾದ ಅನುರೂಪ ಗಡೇದ, ಸಾಕ್ಷಿ ಹೆಬ್ಬಾಳ, ಸಿದ್ದಣ್ಣ ಹುನಗುಂದ, ವಿಜಯಲಕ್ಷ್ಮಿ ಗಡೇದ, ರೇಣುಕಾ ಕಡಿ, ಗುರುಶಾಂತಪ್ಪ ಜೋಳದ, ಪ್ರಭುದೇವ ಕಲಬುರ್ಗಿ, ಬಸಲಿಂಗಪ್ಪ ನಾವದಗಿ, ರುದ್ರಪ್ಪ ಕಡಿ, ನಿಂಗಪ್ಪ ಚಟ್ಟೇರ, ಪ್ರವೀಣ ನಾಗಠಾಣ, ರೇವಪ್ಪ ಮೋಟಗಿ, ಪೂರ್ಣಿಮಾ ಜಮಖಂಡಿ, ಶೋಭಾ ಸುಕಾಲಿ, ನಿರ್ಮಲಾ ರಾಂಪೂರ, ಮಹಾಬಲೇಶ್ವರ ಗಡೇದ ಸೇರಿದಂತೆ ಮತ್ತಿತರರು ಇದ್ದರು. ಶಿಕ್ಷಕ ರಾಜು ಜಾಧವ ಸ್ವಾಗತಿಸಿದರು. ಮುಖ್ಯ ಗುರು ವಿನೋದ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿವೇಣಿ ರಾಠೋಡ ಮತ್ತು ಅಂಜನಾ ಬಸರಕೋಡ ನಿರೂಪಿಸಿದರು. ಶಾರದಾ ಗೌಡರ ವಂದಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

