ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ ಹೇಳಿದರು.
ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ತಂದೆ, ತಾಯಿ, ಬಂಧುಗಳು ಕೊಟ್ಟ ಆಸ್ತಿ, ಒಡವೆ, ಭೂಮಿ ಶಾಶ್ವತವಾಗಿ ಇರುವುದಿಲ್ಲ. ಆದರೆ ನಾವು ಪಡೆದ ವಿದ್ಯೆ ನಮ್ಮ ದೇಹದಲ್ಲಿ ಉಸಿರು ಇರುವವರೆಗೆ ಇರುತ್ತದೆ. ನಮ್ಮ ಒಳ್ಳೆಯ ಜೀವನ ನೋಡಲು ನಮ್ಮ ಪಾಲಕರು ದೊಡ್ಡ ಕನಸು ಇಟ್ಟುಕೊಂಡು ನಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ ಎಂಬ ತಿಳುವಳಿಕೆ ನಮ್ಮಲ್ಲಿ ಬರಬೇಕು. ಪರಿಶಿಷ್ಟ ಜಾತಿ, ಜನಾಂಗದ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಉನ್ನತಮಟ್ಟದ ಅಭ್ಯಾಸಕ್ಕೆ ಸರ್ಕಾರ ಊಟ, ವಸತಿ ಸಹಿತ ಶಿಷ್ಯವೇತನ ನೀಡಿ ನಮಗೆ ಓದಲು, ಉನ್ನತ ವ್ಯಾಸಂಗ ಕಲಿತು ಪ್ರಗತಿ ಸಾಧಿಸಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಸಾಗಬೇಕು ಎಂದರು.
ಅತಿಥಿಯಾಗಿದ್ದ ಮಹಾಬಲೇಶ್ವರ ಗಡೇದ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಅರಿತಿದ್ದ ಡಾ.ಅಂಬೇಡ್ಕರ್ ಅವರು, ಬಾಲಕಿಯರ ಉನ್ನತ ವ್ಯಾಸಂಗದವರೆಗೆ ಸಂಪೂರ್ಣ ಉಚಿತ ಸೌಲಭ್ಯಗಳನ್ನು ಸಂವಿಧಾನದ ಮೂಲಕ ಒದಗಿಸಿದ್ದಾರೆ. ಪಾಲಕರ ಕನಸು ನನಸಾಗಿಸಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆಯಿಂದ ಓದಬೇಕು. ಪಠ್ಯ ಪುಸ್ತಕಗಳ ಜೊತೆಯಲ್ಲಿ ನಿತ್ಯ ದಿನಪತ್ರಿಕೆ, ಕಥೆ, ಲೇಖನ ಓದುವ ಮೂಲಕ ಜ್ಞಾನ ಸಂಪತ್ತು, ವ್ಯವಹಾರ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಸಾಧಿಸಲು ದಿನಪತ್ರಿಕೆ ಓದುವದು ಅವಶ್ಯ ಎಂದರು.
ವಸತಿ ನಿಲಯ ಪಾಲಕಿ ರೇಣುಕಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪರೀಕ್ಷೆಗಳು ಹತ್ತಿರ ಬಂದಿದ್ದು, ಕಾಲಹರಣ ಮಾಡದೇ ಅಭ್ಯಾಸ ಮಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆಗಳನ್ನು ಬರೆದು ಯಶಸ್ಸು ಸಾಧಿಸಲು ಕರೆ ನೀಡಿದರು. ವಿದ್ಯಾರ್ಥಿನಿಯರಾದ ಅಕ್ಷತಾ ಚವ್ಹಾಣ, ಗಾಯತ್ರಿ ಚಲವಾದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನೀಲಮ್ಮ ಚಲವಾದಿ ಸ್ವಾಗತಿಸಿದರು. ಗೀತಾ ಪವಾರ ನಿರೂಪಿಸಿದರು.

