ತೆಲಂಗಾಣಕ್ಕೆ ಆಲಮಟ್ಟಿ ಜಲಾಶಯದಿಂದ ೧.೨೭ ಟಿ.ಎಂ.ಸಿ. ನೀರನ್ನು ಹರಿಬಿಟ್ಟ ರಾಜ್ಯ ಸರ್ಕಾರದ ನಡೆಗೆ ರೈತ ಸಂಘ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಆಣೆಕಟ್ಟಿಗೆ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದಿಂದ ೧.೨೭ ಟಿ.ಎಂ.ಸಿ. ನೀರನ್ನು ಹರಿಬಿಟ್ಟು ಅವಳಿ ಜಿಲ್ಲೆಯ ರೈತರ ಬದುಕನ್ನು ಹಾಳು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಶಂಖ ವಾದ್ಯ ಮೊಳಗಿಸಿದರು.
ಶುಕ್ರವಾರದಂದು ವಿಜಯಪುರ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ರೈತ ವಿರೋಧಿ ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವರ ವಿರುದ್ಧ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅವರ ಪ್ರತಿಕೃತಿಗಳನ್ನು ದಹಿಸಿ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಅವಳಿ ಜಿಲ್ಲೆಯ ರೈತರ ಬದುಕನ್ನು ಕಿತ್ತುಕೊಂಡು ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿ ತೆಲಂಗಾಣ ರಾಜ್ಯದ ರೈತರಿಗೆ ಹಾಗೂ ಜನಸಾಮಾನ್ಯರಿಂದ ಶಬ್ಬಾಶಗಿರಿ ಪಡೆದುಕೊಳ್ಳಲು ನೀರು ಹರಿಬಿಟ್ಟಿದ್ದಾರೆ. ಇದನ್ನು ಖಂಡಿಸಿ ಪ್ರತಿಕೃತಿ ದಹಿಸಿದ ನಂತರ ನಮ್ಮ ರೈತರ ಪಾಲಿಕೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಇಂದಿನಿಂದ ನಮ್ಮ ಪಾಲಿಗೆ ಸತ್ತು ಹೋಗಿದ್ದಾರೆ ಎಂದು ಆಕ್ರೋಶಭರಿತರಾಗಿ ಹೋಳಿ ಹಬ್ಬ ಇನ್ನು ಮುಂದೆ ಇರುವಾಗಲೇ ಈಗಲೇ ನಮಗೆ ಶಂಖವಾದ್ಯ ಮೊಳಗಿಸಲು ಸರ್ಕಾರ ಎಡೆಮಾಡಿಕೊಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಂಖವಾದ್ಯ ಮೊಳಗಿಸಿದರು.
ನಮಗೆ ಕುಡಿಯಲು ನೀರಿಲ್ಲ. ಈ ಸದ್ಯ ಆಲಮಟ್ಟಿ ಆಣೆಕಟ್ಟಿನಲ್ಲಿ ಕೇವಲ ೩೩ ಟಿಎಂಸಿ ಮಾತ್ರ ನೀರು ಉಳಿದಿವೆ. ಇದರಲ್ಲಿ ಕೈಗಾರಿಕೆ ಉದ್ದೇಶಕ್ಕೆ ಜಲಚರ, ಜನ ಹಾಗೂ ಜಾನುವಾರುಗಳಿಗೆ ಹಾಗೂ ಜಿಲ್ಲೆಯ ರೈತರುಗಳಿಗೆ ನೀರು ಮೀಸಲಿರಿಸಬೇಕು. ತೆಲಂಗಾಣ ಸರ್ಕಾರವನ್ನು ಮೆಚ್ಚಿಸಲು ಒಂದೇ ಪಕ್ಷದ ಮುಖಾ ನೋಡಿ ನೀರು ಹರಿಸಿ ನಮ್ಮ ಜಿಲ್ಲೆಯ ರೈತರಿಗೆ ಘೋರಿ ತೋಡಲು ಹೊರಟಿದೆ. ಈ ಹಿಂದೆ ನ್ಯಾಯಮೂರ್ತಿ ಬ್ರಿಜೆಶ್ ಕುಮಾರ ನೇತೃತ್ವದ ನ್ಯಾಯಾಧೀಕರಣ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ ಕ್ಕೆ ನೀರು ನಿಲ್ಲಿಸಲು ಅನುಮತಿ ಕೊಟ್ಟಾಗ ಸುಮ್ಮನಿರದ ತೆಲಂಗಾಣ ಸರ್ಕಾರ ಟ್ರಿಬ್ಯೂನಲ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಆಣೆಕಟ್ಟಿನ ನೀರಿನ ಮಟ್ಟ ಎತ್ತರಿಸಲು ತಡೆಯಾಜ್ಞೆ ತಂದು ನಮ್ಮ ರೈತರನ್ನು ಹಾಳುಮಾಡಿದೆ. ಈಗ ಅವರಿಗೆ ಆಲಮಟ್ಟಿ ನೀರಿನ ನೆನಪಾಗಿದೆ ಎಂದರು.
ನಂತರ ಪ್ರತಿಕೃತಿ ದಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿ ಕೂಡ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಅಧ್ಯಕ್ಷ ಉಮೇಶ ವಾಲೀಕಾರ, ವಿಠ್ಠಲ ಬಿರಾದಾರ, ರಾಜೇಸಾಬ ವಾಲಿಕಾರ, ಗುರಲಿಂಗಪ್ಪ ಪಡಸಲಗಿ, ದಾವಲಸಾಬ ನದಾಫ, ಚನಬಸಪ್ಪ ಸಿಂಧೂರ, ಗಿರಮಲ್ಲಪ್ಪ ದೊಡಮನಿ, ಹಣಮಂತರಾಯ ಕಲಬುರ್ಕಿ, ಬಸವರಾಜ ಮಾಡ್ಯಾಳ, ಲಾಲಸಾಬ ಹಳ್ಳೂರ, ಶಿವಶರಣ ನಾಗರೆಡ್ಡಿ, ಆನಂದ ನಾಗರೆಡ್ಡಿ, ಸಾಹೇಬಗೌಡ ಹೊಸೂರ, ಮುದಕಪ್ಪಗೌಡ ಸರೂರ, ಪರಶುರಾಮ ಹೊಸೂರ, ಹಣಮಂತ ವಾಲೀಕಾರ, ಬಸವರಾಜ ನಾಗರೆಡ್ಡಿ, ಯಮನೂರಪ್ಪ ಮಾದರ, ಮಾರುತಿ ಹೂಗಾರ, ಸೋಮೇಶ ನಾಗರೆಡ್ಡಿ, ಹಣಮಂತರಾಯ ಹೂಗಾರ, ಶೇಖಪ್ಪ ಮಾದರ, ಶರಣು ವಾಲಿಕಾರ, ಕಿರಣ ನಾಟೀಕಾರ, ಗುರಲಿಂಗಯ್ಯ ತೆಗ್ಗಿನಮಠ, ಕಾಸೀನಾಥ ಬಿರಾದಾರ, ಮಡಿವಾಳಪ್ಪ ನಾಗರೆಡ್ಡಿ, ಪರಸು ಹೊಸೂರ, ಮಲಿಗೆಪ್ಪ ಸಾಸನೂರ, ಮಂಜುನಾಥ ಸಜ್ಜನ, ಶ್ರೀಶೈಲ ಹೊಸೂರ, ಶಿವು ನಾಗರೆಡ್ಡಿ, ಮಾರುತಿ ಹೂಗಾರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

