ಸಾಮಾಜಿಕ ಭದ್ರತಾ ಯೋಜನೆಯಡಿ ಸ್ಥಳದಲ್ಲೇ ಪಿಂಚಣಿ ಮಂಜೂರು ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಗುನ್ನಾಪುರ ಬಸವ ನಗರದ ನಿವಾಸಿಯಾದ ಮಾಣಿಕ ಕಲ್ಲಪ್ಪ ಐಹೊಳೆ ಎಂಬುವರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಸ್ಥಳದಲ್ಲಿಯೇ ಪಿಂಚಣಿ ಮಂಜೂರಿಸಿ ಆದೇಶ ಪ್ರತಿ ವಿತರಿಸುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾದರಿಯಾಗಿದ್ದಾರೆ.
ವಿಜಯಪುರದ ಗುನ್ನಾಪುರ ಬಸವ ನಗರದ ನಿವಾಸಿಯಾದ ಮಾಣಿಕ ಕಲ್ಲಪ್ಪ ಐಹೊಳೆ ಎಂಬುವರು ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾ ಸುರಕ್ಷಾ ಪಿಂಚಣಿ ಮಂಜೂರಾತಿಗೆ ಫೆ.೨೮ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸ್ಥಳದಲ್ಲಿಯೇ ವಿಜಯಪುರ ತಹಶೀಲ್ದಾರ ಇವರ ಮೂಲಕ ೧೨೦೦ ರೂ.ಗಳ ಮಾಶಾಸನವನ್ನು ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ಫಲಾನುಭವಿಗೆ ವಿತರಿಸಿದರು.
ಸರ್ಕಾರದ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದೇ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಅರ್ಹ ಫಲಾನುಭವಿಗಳಿಗೆ ಅವಶ್ಯಕತೆಯಿರುವವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಲು ಕ್ರಮ ವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿವಿಧ ಪಿಂಚಣಿ ಯೋಜನೆಗಳಾಗಿ ಅರ್ಹರು ತಾಲೂಕಾ ತಹಶೀಲ್ದಾರರನ್ನು ಸಂಪರ್ಕಿಸಬೇಕು.
ಜಿಲ್ಲೆಯಾದ್ಯಂತ ಪಿಂಚಣಿ ಅದಾಲತ್ಗಳನ್ನು ಆಯೋಜಿಸುವ ಮೂಲಕ ಅರ್ಹರಿಗೆ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭಧಲ್ಲಿ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಗ್ರೇಡ್-೨ ತಹಶೀಲ್ದಾರ ಆಯ್.ಎಚ್.ತುಂಬಗಿ ಇತರರು ಉಪಸ್ಥಿತರಿದ್ದರು.

