ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಭಗವಂತನು ತಪ್ಪಸ್ಸಿಗೆ ಒಲಿಯುವುದಿಲ್ಲ ಬದಲಾಗಿ ಭಕ್ತರ ಭಕ್ತಿ ಶುದ್ದವಾಗಿರಬೇಕು ಅಂದಾಗ ಭಗವಂತನು ಒಲಿದು ನಿಮ್ಮ ಆಶೋತ್ತರಗಳನ್ನು ಪೂರೈಸಲಿದ್ದಾನೆ ಎಂದು ಜಗದ್ಗುರು ಡಾ. ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಉಜೈನಿ ಪೀಠ ಅವರು ಹೇಳಿದರು.
ಅವರು ತಾಲೂಕಿನ ಆನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನೂತನ ಚಂದ್ರಗಿರಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಹತ್ತಾರು, ಜಾತಿ, ಮತ ಪಂಥಗಳಿವೆ ಆದರೆ ಎಲ್ಲರ ಭಕ್ತಿ ಒಂದೇ ಆಗಿದೆ. ಎಲ್ಲರ ಪ್ರೀತಿ ಬಾಂಧವ್ಯ ಕೂಡ ಒಂದೇ ಆಗಿದೆ ಹೀಗಾಗಿ ಭಾರತವನ್ನು ಭಕ್ತಿ, ಧರ್ಮಗಳ ತವರು ಎಂದು ಜಗತ್ತು ಕರೆದು ಗೌರವಿಸುತ್ತದೆ ಎಂದ ಅವರು ಅನೇಕರು ದೇವರು, ಧರ್ಮವನ್ನು ಮೂಢ ನಂಬಿಕೆ ಎಂದು ಲೇವಡಿ ಮಾಡುತ್ತಾರೆ. ಆದರೆ ನಮ್ಮ ಪೂರ್ವಜರು ಮಾಡಿರುವ ಯಾವ ಆಚರಣೆಗಳಲ್ಲೂ ಮೂಢ ನಂಬಿಕೆಗಳನ್ನು ಕಾಣಲು ಸಾಧ್ಯವಿಲ್ಲ. ಅವೆಲ್ಲವೂ ಮೂಲ ನಂಬಿಕೆಗಳಾಗಿವೆ ಹೀಗಾಗಿ ಯಾರು ಲೇವಡಿ ಮಾಡುವವರ ಮಾತುಗಳಿಗೆ ಕಿವಿಗೊಡದೆ ನಿರಂತವಾಗಿ ಧರ್ಮ ಕಾರ್ಯಗಳನ್ನು ಮಾಡಿ ಎಂದ ಅವರು ನಿಜಕ್ಕೂ ಆನೂರ ಭಕ್ತರ ಭಕ್ತಿಯ ಉತ್ಸವ ಕಂಡು ಇದೇ ನಿಜವಾದ ಭೂ ಕೈಲಾಸವಾಗಿದೆ ಎಂದ ಅವರು ಭಕ್ತರ ಭಾವನೆ ಶುದ್ದವಾಗಿರಬೇಕು, ದುಶ್ಚಟಗಳಿಂದ ದೂರವಾಗಿರಬೇಕು. ಪತ್ನಿ ಬರೀ ಭೋಗದ ವಸ್ತುವೆಂದು ತಿಳಿಯಬಾರದು, ಮಹಿಳೆಯರನ್ನು ರೇಗಿಸುವುದು ಮಾಡಬಾರದು, ಊರಿನ ಎಲ್ಲಾ ಹೆಣ್ಣು ಮಕ್ಕಳನ್ನು ಪತ್ನಿ ಹೊರತು ಪಡಿಸಿ ಉಳಿದವರನ್ನು ತಾಯಿ ಸ್ವರೂಪದಲ್ಲಿ ನೋಡಬೇಕು. ಇಂತಹ ಸತ್ಕರ್ಮಗಳನ್ನು ಮಾಡಿದಾಗ ನಿಮ್ಮ ಬದುಕು ಸಾರ್ಥಕವಾಗಲಿದೆ ಎಂದರು.
ಬಡದಾಳ ತೇರಿನ ಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಅಫಜಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡುತ್ತಾ ಧರ್ಮ, ಧಾರ್ಮಿಕತೆ ನಮ್ಮ ರಕ್ತದ ಕಣಕಣದಲ್ಲೂ ಅವಿತಿದೆ. ಹೀಗಾಗಿಯೇ ಇಂತಹ ವೈಭವದ ದೇವಸ್ಥಾನಗಳ ನಿರ್ಮಾಣ, ಜಗದ್ಗುರುಗಳ ಮೇರವಣಿಗೆ, ಸಾವಿರಾರು ಜನ ಭಾಗಿಯಾಗಿ ಭಕ್ತಿ ಭಾವ ಸಮರ್ಪಣೆ ಮಾಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತದೆ. ಜೊತೆ ಜೊತೆಗೆ ಶುದ್ದ ಮನಸ್ಸಿನಿಂದ ಭಕ್ತಿ ಮಾಡಿದ್ದೇ ಆದಲ್ಲಿ ಚಂದ್ರಗಿರಿ ದೇವಿಯೂ ಪ್ರಸನ್ನವಾಗಿ ನಿಮ್ಮನ್ನು ಉದ್ದರಿಸಲಿದ್ದಾಳೆ, ಆನೂರ ಗ್ರಾಮದಲ್ಲಿ ನಿರಂತರವಾಗಿ ಧರ್ಮಾ ಕಾರ್ಯಗಳನ್ನು ಮಾಡಿ ಎಂದು ಸಲಹೆ ನೀಡಿದರು.
ಮದರಿಯ ಗವಾಯಿಗಳಿಂದ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಲೂರಿನ ಶರಣಯ್ಯ ಸ್ವಾಮಿಗಳು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಸ್ಟೇಷನ್ ಗಾಣಗಾಪೂರ, ಸೀತಿಮನಿ, ಸಿದ್ದರಾಮ ಶಿವಾಚಾರ್ಯರು, ದೇವಸ್ಥಾನದ ಅರ್ಚಕರಾದ ರಾಹುಲ್ ಭಂಡಾರಿ ಅವರು, ಶಾಖಾಪುರ, ಶ್ರೀನಿವಾಸ ಸರಡಗಿ ಶ್ರೀಗಳು, ಗ್ರಾ.ಪಂ ಅಧ್ಯಕ್ಷೆ ಭಾಗಮ್ಮ ಉಮ್ಮನಗೋಳ, ಪ್ರಮುಖರಾದ ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್, ಎಸ್.ಬಿ ಪಾಟೀಲ್ ಬಡದಾಳ ಪುಣೆ, ಶಿವಾನಂದ ಶಿತನೂರ, ಸಿದ್ದಣ್ಣ ಜಿರೋಳಿ, ಅಪ್ಪಾಸಾಬಗೌಡ ಪಾಟೀಲ್, ಸಿದ್ದಣ್ಣ ಜಿರೋಳಿ, ಸಿದ್ದಾರ್ಥ ಬಸರಿಗಿಡ, ರಾಜಕುಮಾರ ಜಿರೋಳಿ, ಅಂಬರೀಷ ಪಟ್ಟಣ ಸೇರಿದಂತೆ ಆನೂರ, ಬಿಲ್ವಾಡ, ಮಲ್ಲಾಬಾದ, ಮಾತೋಳಿ ಸೇರಿದಂತೆ ಹತ್ತು ಹಲವು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಭಕ್ತಿಭಾವ ಸಮರ್ಪಣೆ ಮಾಡಿದರು.

