ಲೇಖನ – ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ದಿನದಿಂದ ದಿನಕ್ಕೆ ಬದುಕಿನ ರೈಲು ಓಡಿಸುವುದು ಕಷ್ಟವೆನಿಸುತ್ತಿದೆ. ಜಗತ್ತು ಹಾರುವ ರಾಕೆಟ್ ವೇಗದ ಗತಿಗೆ ನಮ್ಮ ಗತಿ ತುಂಬಾ ಕಡಿಮೆಯೆನಿಸುತ್ತಿದೆ. ಹೀಗಾಗಿ ನಿತ್ಯ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ವಿಲ ವಿಲ ಒದ್ದಾಡುತ್ತಿದ್ದೇವೆ. ಬದುಕಿಗೆ ಆತುಕೊಂಡಿರುವ ಹಲವಾರು ಕೆಲಸ ಕಾರ್ಯಗಳ ನಿರ್ವಹಣೆಯ ಅಗತ್ಯತೆ ಅನಿವಾರ್ಯತೆ ಬಿಡದೇ ಕಾಡುತ್ತಿದೆ. ಪಡೆದಿರುವ ಜ್ಞಾನ, ಮಾಡಿರುವ ಅಧ್ಯಯನ ಸಾಲದು ಅನಿಸುತ್ತಿದೆ. ಯಾವೆಲ್ಲ ಅನುಭವಗಳಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಹೊಸ ಹೊಸ ಅವಕಾಶಗಳು ವಿಪುಲವಾಗಿದ್ದರೂ, ಪದವಿ ಪಡೆದಿದ್ದರೂ ಇಂದಿನ ಅನೇಕ ಹೆಂಗಳೆಯರಿಗೆ ಉದ್ಯೋಗ ಗಿಟ್ಟಿಸಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಹುಡುಕುತ್ತ ನಡೆದಾಗ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ಮೊದಲಿನಂತೆ ಈಗ ಕೇವಲ ಪಡೆದ ಅಂಕಗಳ ಮೇಲೆ ನೌಕರಿ ದೊರೆಯುತ್ತಿಲ್ಲ. ಕೇವಲ ಜ್ಞಾನಾನುಭವವೂ ಹೆಚ್ಚು ಪ್ರಯೋಜನಕ್ಕೆ ಬರುತ್ತಿಲ್ಲ. ಉದ್ಯೋಗಾಕಾಂಕ್ಷಿಗಳು ಎಷ್ಟು ಅಂಕ ಗಳಿಸಿದ್ದಾರೆ? ಯಾವ ಸಂಸ್ಥೆಯಲ್ಲಿ ಓದಿದ್ದಾರೆ ಇವೆಲ್ಲವುಗಳು ಗಣನೆಗೆ ಬಾರವು. ಹೀಗಿರುವಾಗ ಓದಿದ ಓದು, ಪಡೆದ ಪದವಿ, ಗಳಿಸಿದ ಅಂಕಗಳು ಎಲ್ಲ ನಿಷ್ಪಯೋಜಕ ಎಂಬ ಭಾವನೆ ಉದ್ಯೋಗದ ಹುಡುಕಾಟದಲ್ಲಿರುವ ಹೆಣ್ಣು ಮಕ್ಕಳಿಗೆ ಕಾಡದೇ ಇರದು. ಶಾಲೆ ಕಾಲೇಜಿನಲ್ಲಿ ತಾವು ಕಲಿತಿದ್ದೇನು ಜೀವನೋಪಾಯಕ್ಕೆ ಸಾಥ್ ನೀಡುತ್ತಿಲ್ಲ ಎಂಬ ವಿಷಯ ತಲೆ ತಿನ್ನುತ್ತದೆ. ಅಂದರೆ ಶಿಕ್ಷಣ ಬೇಕೆಂದಿಲ್ಲ ಅಂತ ಅರ್ಥವಿಲ್ಲ. ಉದ್ಯೋಗಕ್ಕೆ ಕೇವಲ ಜ್ಞಾನಾನುಭವವಿದ್ದರೆ ಸಾಲದು. ಕೌಶಲ್ಯವೂ ಬೇಕೇ ಬೇಕು. ಇಂದು ನಾವು ‘ಜ್ಞಾನಿ ನಾಗರಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ.’ ಅಂದರೆ ಪ್ರತಿಯೊಬ್ಬರೂ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ಉದ್ದನೆಯ ಓದು ಇಂದು ಕೆಲಸಕ್ಕೆ ಬಾರದು.
ಕೌಶಲ್ಯ ಅಭಿವೃದ್ಧಿ

ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಕೌಶಲ್ಯ ಹಾಗೂ ಜ್ಞಾನವು ಸಹಕಾರಿಯಾಗಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ ೬೦ ರಿಂದ ಶೇ ೯೦ ನಡುವಿನ ನುರಿತ ಉದ್ಯೋಗಿಗಳ ಕಾರ್ಯಪಡೆ ಇರುತ್ತದೆ. ಅತಿ ಕಡಿಮೆ ಔಪಚಾರಿಕ ಅಂದರೆ ಶೇ ೫ ರಷ್ಟು ವೃತ್ತಿಪರ ಕೌಶಲ್ಯದ ಕಾರ್ಯಪಡೆಯನ್ನು ಭಾರತ ದಾಖಲಿಸಿದೆ. ಕೌಶಲ್ಯ ಅಭಿವೃದ್ಧಿ ಪ್ರಾಮುಖ್ಯತೆಯನ್ನು ಅರಿತುಕೊಂಡು ೭೦ ಕ್ಕೂ ಹೆಚ್ಚು ಯೋಜನೆಗಳನ್ನು ದೇಶದಲ್ಲಿ ನಡೆಸಲಾಗುತ್ತಿದೆ. ೨೦೧೫ ರ ಜುಲೈ ೧೫ ರಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಕೌಶಲ್ಯ ತರಬೇತಿ ಚಟುವಟಿಕೆಗಳ ಗುರಿಯಾಗಿಸಿಕೊಂಡು ಕೌಶಲ್ಯ ಅಭಿವೃದ್ಧಿ ಮತ್ತು ನೈಪುಣ್ಯ ಯೋಜನೆ ರಚಿಸಿತ್ತು. ಗಮನಾರ್ಹ ತರಬೇತಿ ಫಲಿತಾಂಶದ ಚೌಕಟ್ಟನ್ನು ರಚಿಸುವುದರ ಮೂಲಕ,ವೇಗವಾಗಿ ಸಮರ್ಥನೀಯ ಜೀವನೋಪಾಯಕ್ಕಾಗಿ ವೃತ್ತಿ ಜೀವನದ ಪ್ರಗತಿಗೆ ಗುಣಮಟ್ಟದ ದೀರ್ಘ ಮತ್ತು ಅಲ್ಪಾವಧಿಯ ಕೌಶಲ್ಯ ತರಬೇತಿಯ ಅವಕಾಶಗಳನ್ನು ಒದಗಿಸುತ್ತದೆ. ಜನ ಸಮೂಹ ಕಾರ್ಯಕ್ರಮ ಹಾಗೂ ಗುರಿ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳ ಮೂಲಕ ಹೆಂಗಳೆಯರಿಗೆ ಹಾಗೂ ಸಮಾಜದ ದುರ್ಬಲ ವಿಭಾಗಗಳಿಗೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಹಳ್ಳಿಗಾಡಿನ ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ನಗರದ ಹೆಣ್ಮಕ್ಕಳು ಪಡೆದುಕೊಳ್ಳಲು ಮುಂದಾಗಬೇಕಿದೆ. ತನ್ಮೂಲಕ ಆರ್ಥಿಕವಾಗಿ ಸಬಲರಾಗಬೇಕಿದೆ.
ಸಾಮರ್ಥ್ಯ ವರ್ಧನೆ
ಬಹುತೇಕ ಎಲ್ಲ ಕ್ಷೇತ್ರಗಳು ಕೌಶಲ್ಯವನ್ನು ಬೇಡುತ್ತವೆ. ಆದ್ದರಿಂದ ಕೌಶಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಲಿಕೆಯ ಸಾಮರ್ಥ್ಯ ಹೇಗಿದೆ? ಕಲಿಕಾ ಫಲವನ್ನು ಸಮಸ್ಯೆ ಪರಿಹಾರದಲ್ಲಿ ಹೇಗೆ ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುತ್ತೀರಿ? ಅಂದರೆ ಸಮಸ್ಯೆಗಳ ಪ್ರತಿ ನಿಮಗಿರುವ ಮನೋಭಾವ ಎಂಥದು? ಉದ್ಯೋಗದಲ್ಲಿರುವ ಸಮಸ್ಯೆ ಹೇಗೆ ಪರಿಹರಿಸುತ್ತೀರಿ? ಎಂಬುದರ ಬಗ್ಗೆ ಹೆಚ್ಚಿಗೆ ಗಮನ ನೀಡುಲಾಗುತ್ತಿದೆ. ವಹಿಸಿದ ಕೆಲಸವನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು ಎನ್ನುವ ತಿಳುವಳಿಕೆ ಇದೆಯೋ ಎಂಬುದನ್ನು ಪರೀಕ್ಷೆಗೆ ಒಡ್ಡಲಾಗುವುದು. ಕೆಲಸವನ್ನು ಔಪಚಾರಿಕವಾಗಿ ತಾರ್ಕಿಕವಾಗಿ ಯಾವ ರೀತಿಯಲ್ಲಿ ಮಾಡಿದರೆ ಉತ್ಕೃಷ್ಟ ಫಲಿತಾಂಶ ನೀಡಬಹದು ಎಂದು ತಿಳಿದುಕೊಳ್ಳಲು ಮಹಾ ಜ್ಞಾನಿ ಆಗಬೇಕೆಂದಿಲ್ಲ. ಕೌಶಲ್ಯ ಕಲಿತರೆ ಸಾಕು. ಉತ್ಪಾದಕತೆ ಹೆಚ್ಚಿಸುವಲ್ಲಿ ಸಹಕಾರಿಯಗುತ್ತದೆ. ತರಬೇತಿ ಪಡೆದವರಿಗೆ, ಕೌಶಲ್ಯ ನೈಪುಣ್ಯತೆ ಹೊಂದಿದವರಿಗೆ, ಉದ್ಯೋಗದಲ್ಲಿ ಮಣೆ ಹಾಕಲಾಗುತ್ತಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಹಾಗಿದ್ದರೆ ಉದ್ಯೋಗ ಬಯಸುವ ಮಹಿಳೆಯರು ಕೌಶಲ್ಯ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಅಂಶಗಳ ಕಡೆ ಹೆಚ್ಚು ಗಮನವಹಿಸಿದರೆ, ದುಡಿಯುವ ಕೈಗಳು ಬಲಗೊಳ್ಳುವುದರಲ್ಲಿ ಎರಡು ಮಾತಿಲ್ಲ.
ಸ್ವಾವಲಂಬಿ ಬದುಕು
ಸಣ್ಣ ಪುಟ್ಟ ಅಗತ್ಯ ವಸ್ತುಗಳ ಕೊಳ್ಳುವುದಿದ್ದರೂ ಮತ್ತೊಬ್ಬರ ಮುಂದೆ ಕೈ ಚಾಚಬೇಕು. ಮನೆಯ ಗಂಡಸರ ದುಂಬಾಲು ಬೀಳಬೇಕು. ಎಂಬುದು ಮನ ನೊಂದ ಮಹಿಳೆಯರ ಅಳಲು. ಕ್ಷಣ ಕ್ಷಣಕ್ಕೂ ಕಿತ್ತು ತಿನ್ನುವ ನೋವು. ಈ ನೋವು ಅನೇಕ ಹೆಂಗಳೆಯರ ಮನಸ್ಸಿನಲ್ಲಿ ಅಚಲವಾದ ಗುಡ್ಡದಂತೆ ಕುಳಿತು ಬಿಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯದ ಜೊತೆ ಜೊತೆಗೆ ಸ್ತ್ರೀ ಶಕ್ತಿ ಸಂಘಗಳಿಗೆ ಬ್ಯಾಂಕಿನಿಂದ ನೀಡುವ ಸಾಲ ಸೌಲಭ್ಯವನ್ನು ಪಡೆಯಬೇಕು. ಆರ್ಥಿಕವಾಗಿ ಪ್ರಬಲರಾಗುವ ನಿಟ್ಟಿನಲ್ಲಿ ಸರಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಇದಷ್ಟೇ ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸ್ವ ಉದ್ಯೋಗ ನಡೆಸಲು ಸಾಲ- ಸೌಲಭ್ಯಗಳನ್ನು ಕನಿಷ್ಟ ಬಡ್ಡಿ ದರಗಳಲ್ಲಿ ಕೊಡಲು ಮುಂದೆ ಬರುತ್ತಿದೆ. ಮಹಿಳಾ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆಯಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು.
ಸ್ವ ಉದ್ಯೋಗ ತರಬೇತಿ
ಉದ್ಯೋಗದಲ್ಲಿ ನಿರತರಾಗಲು ಮಹಿಳಾ ಸಂಘಗಳು ಸಹಕಾರಿಯಾಗಿವೆ. ಹಾಗೆಯೇ ಉದ್ಯೋಗದ ಸ್ಥಳದಲ್ಲಿ ಶೋಷಣೆ, ಕಿರುಕುಳ ಅನುಭವಿಸುವುದಕ್ಕಿಂತ, ಸ್ವ ಉದ್ಯೋಗ ಲೇಸು ಎನ್ನುವ ಮನೋಭಾವ ಉಳ್ಳವರು ಸ್ವ ಉದ್ಯೋಗ ತರಬೇತಿಗೆ ಸೇರಿಕೊಳ್ಳಬೇಕು. ಇಂದಿನ ಅತ್ಯಂತ ಬೇಡಿಕೆಯ ಕಂಪ್ಯೂಟರ್ ಮೂಲ ಜ್ಞಾನದ ತರಬೇತಿ, ಫ್ಯಾಶನ್ ಉದ್ಯಮದ ಬ್ಯೂಟಿ ಪಾರ್ಲರ್, ಹೊಲಿಗೆ, ಕಸೂತಿ ಕೆಲಸಗಳು, ವಿವಿಧ ತರಕಾರಿ, ಹಣ್ಣು ಹಂಪಲು, ಹೂ ಗಿಡಗಳ ಬೆಳೆಸುವಿಕೆ, ಸಿದ್ಧ ಉಡುಪು ತಯಾರಿಕೆ, ಹಪ್ಪಳ, ಉಪ್ಪಿನಕಾಯಿ, ಸಾಂಬಾರು ಪದಾರ್ಥಗಳು, ನಾನಾ ನಮೂನೆಯ ತಿಂಡಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ, ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ತಯಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಹೀಗೆ ಹತ್ತು ಹಲವು ಸ್ವಯಂ ಉದ್ಯೋಗದ ವೃತ್ತಿ ತರಬೇತಿ ನೀಡಲಾಗುತ್ತಿದೆ. ಉತ್ತಮವಾಗಿ ಕಾರ್ಯ ನಿರ್ವಹಣೆ ಕುರಿತು ಆತ್ಮವಿಆಶ್ವಾಸ ತುಂಬಲಾಗುತ್ತಿದೆ. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಚಾರಿ ವಾಹನದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ವಿಶೇಷ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯವಾಗಿ ಹೆಚ್ಚಿನ ಬೇಡಿಕೆಯಲ್ಲಿರುವ ಮತ್ತು ಲಾಭದಾಯಕವಾಗಿರುವ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಜಾಣತನ ಮೆರೆಯಬೇಕಿದೆ. ಸಿದ್ಧ ವಸ್ತುಗಳ ಮಾರಾಟದಲ್ಲೂ ಮುಂದಾಗಬೇಕಿದೆ.
ಬಾಳಿಗೆ ಬೆಳಕು
ಉನ್ನತ ಶಿಕ್ಷಣ ಪಡೆಯುವವರು ಸಾಕಷ್ಟು ಜನ ಇದ್ದಾರೆ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತಿ ಕೌಶಲ್ಯ ತರಬೇತಿ ಅವಶ್ಯಕವಾಗಿದೆ. ಓದಿನ ನಂತರ ನಿರ್ಧಿಷ್ಟ ಗುರಿ ತಲುಪಲು ಕೌಶಲ್ಯ ನೆರವಾಗುತ್ತದೆ. ಮಹಿಳೆಯರು ತಮಗಿಷ್ಟವಾದ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ತರಬೇತಿ ಪಡೆಯಬೇಕು. ಕಠಿಣ
ಪರಿಶ್ರಮದಿಂದ ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಆರ್ಥಿಕ ಸಂಕಷ್ಟದಿಂದ ಹೊರಗೆ ಬರಲು ಸಾಧ್ಯ. ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಅನೇಕ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ‘ಕೈಗಾರೀಕರಣ ಇಲ್ಲವೇ ವಿನಾಶ.’ ಎಂದು ಉದ್ಘೋಷಿಸಿ ಕೈಗಾರಿಕರಣಕ್ಕೆ ಮುನ್ನುಡಿ ಬರೆದಿದ್ದ ಸರ್ ಎಮ್ ವಿಶ್ವೇಶ್ವರಯ್ಯನವರ ಮಾತಿನಂತೆ ನಡೆದುಕೊಳ್ಳಲು ಮನಸ್ಸನ್ನು ಹದಗೊಳಿಸಬೇಕಿದೆ. ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದರೆ ನುರಿತ ಮಾನವ ಸಂಪನ್ಮೂಲ ನಾವಾಗಬಹುದು. ಸರಕಾರಿ ಉದ್ಯೋಗಗಳು ಮರೀಚಿಕೆಯಾಗುತ್ತಿರುವ ಈ ಕಾಲದಲ್ಲಿ ವೃತ್ತಿ ಕೌಶಲ್ಯ ತರಬೇತಿ ಪಡೆಯುವುದು ಇಂದಿನ ಅನಿವಾರ್ಯವಾಗಿದೆ. ಕೌಶಲ್ಯಾಧಾರಿತ ತರಬೇತಿ ಪಡೆದ ಮಹಿಳೆಯರು ಸ್ವಂತ ಕಾಲಲ್ಲಿ ನಿಂತು ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಇತರೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸಿ ಅವರ ಬಾಳಿಗೂ ಬೆಳಕಾಗಬಹುದಾಗಿದೆ. ‘ತುಳಿಯಲ್ಪಟ್ಟ ದಾರಿಗಳು ಸೋತವರಿಗೆ ಮಾತ್ರ.’ ಎನ್ನುವ ನುಡಿಮುತ್ತನ್ನು ಮನದಲ್ಲಿಟ್ಟುಕೊಂಡು ಮುನ್ನುಗ್ಗೋಣ ಆರ್ಥಿಕ ಸಬಲತೆ ಹೊಂದೋಣ.


