ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಮಾಧ್ಯಮರಂಗ ಫೌಂಡೇಶನ್ ೨ನೇ ವರ್ಷಾಚರಣೆ ನಿಮಿತ್ತ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಡಾ.ಇಲಿಯಾಸ್ ಜಾಲಿಗೇರಿ ಅವರ ಜಾಲಿಗೇರಿ ಆಸ್ಪತ್ರೆ, ಡಾ.ಅರ್ಜುನ ಗೊಟಗುಣಕಿ ಅವರ ಪಾರ್ವತಿ ಲೈಫ್ ಲೈನ್ ಆಸ್ಪತ್ರೆ ಹಾಗೂ ಡಾ.ಚನ್ನಬಸವ ಗೊಟಗುಣಕಿ ಅವರ ಮುಗುಳ್ನಗೆ ಹಲ್ಲಿನ ದವಾಖಾನೆ ಅವರ ಸಹಕಾರೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.
ಪಟ್ಟಣದ ಬಸವ ಮಂಟಪದಲ್ಲಿ ಫೆ.೨೮, ಶುಕ್ರವಾರ ಬೆಳಿಗ್ಗೆ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ತಪಾಸಣೆ ನಡೆಯಲಿದೆ. ಬಿಪಿ, ಶುಗರ್, ಹೃದಯ ಸಂಬಂಧಿತ ಸಮಸ್ಯೆ, ಸೊಂಟ, ಮೊಳಕಾಲು ನೋವು, ಹಲ್ಲು ಮತ್ತು ವಸಡಿನ ಸಮಸ್ಯೆ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ತೊಂದರೆಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆಯಬೇಕೆಂದು ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ, ಪತ್ರಕರ್ತ ನಾಗೇಶ ತಳವಾರ ತಿಳಿಸಿದ್ದಾರೆ.
ಆರೋಗ್ಯ ಶಿಬಿರವನ್ನು ಶ್ರೀ ಮಾತಾ ಆಸ್ಪತ್ರೆಯ ಡಾ.ಶಿವಕುಮಾರ ಪಶುಪತಿಮಠ ಉದ್ಘಾಟಿಸಲಿದ್ದಾರೆ. ಸಂಗಮೇಶ್ವರ ಆಸ್ಪತ್ರೆಯ ಡಾ.ಶಿವಾನಂದ ಹೊಸಮನಿ, ಸಂಜೀವಿನಿ ಆಸ್ಪತ್ರೆಯ ಡಾ.ಹಬೀಬ್ ನಾಗರಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಪೀರು ಕೆರೂರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪ್ರತಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನವರ, ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಪುಂಡಲೀಕ ಬಿರಾದಾರ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
