ತುಮಕೂರಿನ ವಿನಯ್ರಾಮ ಹಳೇಮನಿ ಸಂಕಲ್ಪ | ೧೦೮ ಕ್ಷೇತ್ರಗಳಲ್ಲಿ ಪ್ರದರ್ಶನದ ಇರಾದೆ | ಹಿರಿಯ ಜೀವಿಗಳಿಗೆ, ಬಡವರಿಗೆ ದರ್ಶನದ ಭಾಗ್ಯ
ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ಭಕ್ತಿಗೆ ಜಾತಿ, ಮತ, ಪಂಥ ಬೇಧ ಇಲ್ಲ. ಭಕ್ತರು ತಮ್ಮ ಭಕ್ತಿಯನ್ನು ವಿವಿಧ ರೀತಿಯಲ್ಲಿ ತೋರಿಸಿರುವದು ನೋಡಿದ್ದೇವೆ ಕೇಳಿದ್ದೇವೆ. ಅದರಂತೆ ಇಲ್ಲೊಬ್ಬ ಭಕ್ತರು ಹಿರಿಯ ಜೀವಿಗಳಿಗೆ, ಅಯೋಧ್ಯೆಗೆ ತೆರಳಿ ದರ್ಶನ ಪಡೆಯಲಾಗದ ಬಡವರಿಗೆ ಸಾಕ್ಷಾತ್ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನೇ ತಯಾರಿಸಿ, ಪ್ರದರ್ಶಿಸಿ, ಎಲ್ಲರಿಗೂ ದರ್ಶನದ ಭಾಗ್ಯ ಕಲ್ಪಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಓದುಗರೆ, ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಲ್ಲಿನ ಜನತೆ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನು ರಾಮ ಮಂದಿರವನ್ನು ತಯಾರಿಸಿ ಪ್ರದರ್ಶಿಸುತ್ತಿರುವವರು ತುಮಕೂರಿನ ವಿನಯ್ರಾಮ ಹಳೇಮನಿ. ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡ ಇವರ ಕುಟುಂಬದಲ್ಲಿರೋದು ಸಧ್ಯ ತಾಯಿ ಮಾತ್ರ. ಶ್ರೀ ರಾಮರ ಆದರ್ಶಗಳನ್ನು ಇಡೀ ವಿಶ್ವಕ್ಕೆ ಹರಡುವ ಹಂಬಲ ಇವರದಾಗಿದ್ದು, ಥರ್ಮಾಕೋಲ್ ನಿಂದ ಅದ್ಬುತವಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರದ ಸಾಕ್ಷಾತ್ ಪ್ರತಿರೂಪವನ್ನು ತಯಾರಿಸಿ ವಿವಿಧ ಕ್ಷೇತ್ರಗಳಲ್ಲಿ ಪ್ರದರ್ಶಿಸಿ ಹಿರಿಯ ಜೀವಿಗಳಿಗೆ, ಅಯೋಧ್ಯೆಗೆ ತೆರಳಿ ಶ್ರೀ ರಾಮ ಮಂದಿರದ ದರ್ಶನ ಪಡೆಯಲು ಸಾಧ್ಯವಾಗದ ಬಡವರಿಗೆ ರಾಮ ಮಂದಿರದ ದರ್ಶನದ ಭಾಗ್ಯವನ್ನು ಕಲ್ಪಿಸುವ ವಿಶೇಷ ಸಂಕಲ್ಪವನ್ನು ಹೊಂದಿದ್ದಾರೆ.
ಸಧ್ಯ ೧೦೮ ಕ್ಷೇತ್ರಗಳಲ್ಲಿ ಇವರು ತಮ್ಮ ಕೈಯಾರೆ ತಯಾರಿಸಿ ಶ್ರೀ ರಾಮ ಮಂದಿರವನ್ನು ಪ್ರದರ್ಶಿಸಲಿದ್ದಾರೆ. ಅದರಂತೆ ೨೦೨೨ ನೇ ಸಾಲಿನಿಂದ ನಿರಂತರವಾಗಿ ಈಗಾಗಲೇ ರಾಜ್ಯದಾದ್ಯಂತ ೧೧ ಜಿಲ್ಲೆಗಳು ಸೇರಿದಂತೆ ಒಟ್ಟು ೭೮ಕ್ಷೇತ್ರಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಒಂದು ಕ್ಷೇತ್ರದಲ್ಲಿ ಇಂತಿಷ್ಟೇ ದಿನ ಎಂದು ಇವರು ನಿಗದಿ ಮಾಡಿಲ್ಲ. ಆಯಾ ಭಾಗದ ಭಕ್ತರ ಬೇಡಿಕೆಯಂತೆ ಮಂದಿರವನ್ನು ಪ್ರದರ್ಶಿಸುತ್ತ ಬಂದಿದ್ದು, ಪ್ರತೀ ಕ್ಷೇತ್ರದಲ್ಲೂ ಶ್ರೀ ರಾಮನ ಆದರ್ಶಗಳನ್ನು ಬಿತ್ತರಿಸುತ್ತ ಸಾಗಿದ್ದಾರೆ. ಇವರಿಗೆ ರಾಮ ಮಂದಿರವನ್ನು ತಯಾರಿಸಲು ಸ್ಥಳಾವಕಾಶ ಕಲ್ಪಿಸಿದರೆ ಸಾಕು. ಅಲ್ಲಿನ ಭಕ್ತರಿಗೆ ಮಂದಿರದ ದರ್ಶನ ಪಡೆಯುವ ಸೌಭಾಗ್ಯವನ್ನು ಕಲ್ಪಿಸಿಕೊಡುತ್ತಾರೆ.

ರಾಮಾಯಣದ ಘಟನೆಗಳ ಚಿತ್ರಗಳು
ಮಂದಿರವನ್ನು ಅಯೋಧ್ಯೆಯಲ್ಲಿರುವಂತೆಯೇ ಮೂರು ಮಹಡಿಯಲ್ಲಿ ರಚಿಸಿದ್ದು ನೆಲಮಹಡಿಯಲ್ಲಿ ಶ್ರೀ ಬಾಲರಾಮನ ಮೂರ್ತಿ ಬಲಭಾಗದಲ್ಲಿ ಗಣಪ, ಎಡಭಾಗದಲ್ಲಿ ದೇವಿ, ಮುಂಭಾಗದಲ್ಲಿ ಲಕ್ಷ್ಮಣ, ಭರತ, ಶತೃಘ್ನರನ್ನು ಪ್ರತಿಷ್ಟಾಪಿಸಿದ್ದಾರೆ. ಒಂದನೇ ಮಹಡಿಯಲ್ಲಿ ಸೀತಾ ಸಹಿತ ಪಟ್ಟಾಭಿರಾಮನನ್ನು ಪ್ರತಿಷ್ಟಾಪಿಸಿ ಆಸ್ಥಾನ ನಿರ್ಮಿಸಿ, ರಾಮಾಯಣದ ಘಟನೆಗಳ ಕೆಲ ಚಿತ್ರಗಳನ್ನು ಅಳವಡಿಸಿದ್ದಾರೆ. ಎರಡನೇ ಮಹಡಿ ಅಯೋಧ್ಯೆ ಮಂದಿರದ ಪ್ರಕಾರ ಖಾಲಿ ಬಿಟ್ಟಿದ್ದು ಪೂರ್ಣ ಮಂದಿರಕ್ಕೆ ಬಂಗಾರದ ಬಣ್ಣವನ್ನು ಬಳಸಿದ್ದಾರೆ. ಸುಂದರವಾಗಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದು ಪ್ರತಿದಿನ ದರ್ಶನ ಪಡೆದು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
“ಶ್ರೀರಾಮರ ಆದರ್ಶ ತತ್ವಗಳು ಯಾವುದೇ ಜಾತಿ, ಧರ್ಮ, ಪಕ್ಷಕ್ಕೇ ಸೀಮಿತವಲ್ಲ. ಶ್ರೀರಾಮ ಸೂರ್ಯವಂಶದವನು. ಸೂರ್ಯ ಹೇಗೆ ಸರ್ವರಿಗೂ ಬೆಳಕು ಕೊಡುತ್ತಾನೋ ಹಾಗೆ ರಾಮನ ಆದರ್ಶ ಗುಣಗಳು ಸರ್ವರಲ್ಲಿ ಬರಬೇಕು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಸನ್ ೨೦೨೨ ರಿಂದ ನಿರಂತರ ಪಯಣ ಮಾಡುತ್ತ ಸಾಗುತ್ತಿದ್ದೇನೆ.”
– ವಿನಯ್ರಾಮ್ ಹಳೇಮನಿ
ಮಾದರಿ ಶ್ರೀರಾಮ ಮಂದಿರ ತಯಾರಕರು
“ಮಂದಿರ ನೋಡಲು ಎರಡು ಕಣ್ಣುಗಳು ಸಾಲದು. ಸಾಕಷ್ಟು ಅದ್ಭುತವಾಗಿ ತಯಾರಿಸಿದ್ದಾರೆ. ಎರಡು ವರ್ಷಗಳಿಂದ ಮನೆ ಮಠ ಎನ್ನದೇ ನಿರಂತರ ಪಯಣ ಬೆಳೆಸಿ ಶ್ರೀ ರಾಮ ಮಂದಿರದ ದರ್ಶನ ಭಾಗ್ಯ ಕಲ್ಪಿಸುತ್ತಿರುವ ವಿನಯ್ರಾಮ್ ಅವರ ಭಕ್ತಿ ಮತ್ತು ಸೇವೆ ಮೆಚ್ಚುವಂಥದ್ದು. ಕಳೆದ ೭ದಿನಗಳಿಂದ ನಮ್ಮಲ್ಲಿ ಪ್ರದರ್ಶಿನ ನೀಡಿದ್ದು ಸಾಕಷ್ಟು ಜನ ದರ್ಶನ ಪಡೆದು ಪುನೀತರಾಗಿದ್ದಾರೆ. ಶುಕ್ರವಾರ ಕೊನೆಯ ದಿನವಾಗಿ ಪ್ರದರ್ಶಿಸುತ್ತಿದ್ದು, ಇನ್ನೂ ಭೇಟಿ ನೀಡದವರು ಭೇಟಿ ನೀಡಿ ದರ್ಶನ ಪಡೆಯಬಹುದು.”
– ಸಂಗಣ್ಣ ಮೇಲಿನಮನಿ
ಭಕ್ತರು, ಮುದ್ದೇಬಿಹಾಳ

