ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅನಿರೀಕ್ಷಿತ ದಾಳಿ | ಪುರಸಭೆಗೆ ಸಲ್ಲಬೇಕಾದ ಲಕ್ಷಾಂತರ ತೆರಿಗೆ ಅನ್ಯರ ಪಾಲು
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರಿ ಅಧಿಕಾರಿಯು ಗೌಪ್ಯವಾಗಿ ಇಟ್ಟುಕೊಳ್ಳಬೇಕಾದ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ್ ಸರ್ಕಾರಿ ಲಾಗಿನ್ನ್ನು ಖಾಸಗಿ ವ್ಯಕ್ತಿಗೆ ನೀಡಿದ್ದು ನೋಡಿದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಪುರಸಭೆ ಅಧ್ಯಕ್ಷರ ಮಾತಾಗಿದೆ. ಒಂದು ವೇಳೆ ಕೆಲಸದ ಒತ್ತಡವೇ ಇದ್ದರೆ ಅಧಿಕಾರಿ ಅಥವಾ ಸಿಬ್ಬಂದಿಗಳು ಕಛೇರಿಯಲ್ಲಿದ್ದುಕೊಂಡೆ ಕೆಲಸ ಮಾಡುಬೇಕಾಗಿತ್ತು. ಅದನ್ನು ಖಾಸಗಿ ವ್ಯಕ್ತಿ ಅಭಿಷೇಕ್ ಎಂಬಾತ ಮನೆಗೆ ಕೊಂಡ್ಯೂಯುವ ಜರೂರತ್ ಏನಿತ್ತು. ಈ ಖಾಸಗಿ ವ್ಯವಹಾರದಿಂದಾಗಿ ಪುರಸಭೆ ಆದಾಯಕ್ಕೆ ಕೋಟ್ಯಾಂತರ ಹಾನಿಯಾಗಿದೆ. ಪುರಸಭೆಯ ಕಾರ್ಮಿಕರಿಗೆ ಸಂಬಳ ಬಟವಾಡೆ ಮಾಡಲು ತೆರಿಗೆ ಹಾಗೂ ಇತರೆ ಆದಾಯಗಳನ್ನೆ ಅವಲಂಬಿಸಿದೆ. ಪುರಸಭೆಯ ಗಳಿಕೆ ಈ ರೀತಿ ಸೋರಿಕೆಯಾದರೆ ಸಿಬ್ಬಂದಿಗೆ ಸಂಬಳ ಕೋಡುವುದಾದರೂ ಹೇಗೆ ಮತ್ತು ನಗರವನ್ನು ಅಭಿವೃದ್ಧಿ ಮಾಡುವುದಾದರೂ ಹೇಗೆ?
ಪುರಸಭೆಗೆ ಹೋಗದೆ ಲೇಔಟ್ ಮಾಲೀಕರು ಅಬಿಷೇಕ ಕೊಡಗೆ ಎಂಬಾತನ ಮನೆಗೆ ಹೋಗಿ ಕೆಲಸ ಮಾಡಿಕೊಳ್ಳುವುದರಿಂದ ಪುರಸಭೆಗೆ ಸಲ್ಲಬೇಕಾದ ಲಕ್ಷಾಂತರ ತೆರಿಗೆ ಅನ್ಯರ ಪಾಲಾಗುತ್ತಿರುವುದು ಎದ್ದು ಕಾಣುತ್ತದೆ. ಖಚಿತ ಮಾಹಿತಿಯ ಮೇರೆಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ತಮ್ಮ ಸಿಬ್ಬಂದಿಗಳ ಜೊತೆಗೆ ಬುಧವಾರ ತಡರಾತ್ರಿ ಏಕಾಏಕಿ ದಾಳಿ ನಡೆಸಿದಾಗ ಸಿಂದಗಿ ಸಾರ್ವಜನಿಕರ ಆಸ್ತಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಪತ್ತೆಯಾಗಿವೆ. ಉತಾರಿಗಳು, ಖರೀದಿ ಪತ್ರಗಳು, ಲೇಔಟ್ಗೆ ಸಂಬಂಧಿಸಿದ ದಾಖಲಾತಿಗಳು, ಖಾತಾ ಬದಲಾವಣೆ ಪತ್ರಗಳು, ತೆರೆಗೆ ಕಟ್ಟಲು ಬಳಕೆಯಾಗುವ ಚಲನ್ಗಳು ಸೇರಿದಂತೆ ಸುಮಾರು ಎರಡು ಗೋಣಿ ಚೀಲಗಳಾಗುವಷ್ಟು ದಾಖಲಾತಿಗಳ ಜೊತೆಗೆ ಎರಡು ಗಣಕಯಂತ್ರ (ಕಂಪ್ಯೂಟರ್)ಗಳು, ಪ್ರಿಂಟರ್ಗಳು ಪುರಸಭೆಗೆ ಸೇರಿದ ಹಲವು ಸರಕಾರಿ ದಾಖಲೆಗಳು ಪತ್ತೆಯಾಗಿವೆ.
ಪುರಸಭೆಯ ಕಛೇರಿಯಲ್ಲಿದ್ದುಕೊಂಡು ಕೆಲಸ ಮಾಡಬೇಕಾದ ರಾಶಿಗಟ್ಟಲೇ ಕಛೇರಿಯ ಕಾಗದ ಪತ್ರಗಳು ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಪತ್ತೆಯಾದ ಘಟನೆ ಸಿಂದಗಿ ನಗರದಲ್ಲಿ ನಡೆದಿದೆ.
ಮೇಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆಯೆ?
ಪುರಸಭೆಯ ಆದಾಯಕ್ಕೆ ಕೊಕ್ಕೆ ಹಾಕುತ್ತಿರುವ ಸಿಬ್ಬಂದಿಗಳು ಹಾಗೂ ಪುರಸಭೆಯಲ್ಲಿದ್ದುಕೊಂಡೆ ಖಾಸಗಿ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಸದಸ್ಯರು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆಯೆ ಕಾದು ನೋಡಬೇಕಿದೆ. ಈ ದಾಳಿಯ ವೇಳೆ ಸ್ಪಂದಿಸದ ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆಯೆ?

ತಡರಾತ್ರಿ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳನ್ನು ಜಪ್ತಿ ಮಾಡುವಂತೆ ಪಿಎಸ್ಆಯ್ ಮತ್ತು ಸಿಪಿಆಯ್ ಅವರಿಬ್ಬರಿಗೂ ಕರೆ ಮಾಡಿದಾಗ ಸೂಕ್ತ ಸ್ಪಂದನೆ ಸಿಗಲಿಲ್ಲ. ಅವರ ನಿರ್ಲಕ್ಷ್ಯದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಒಂದು ವೇಳೆ ಸ್ಪಂದನೆ ಸಿಗದೆ ಹೋದಲ್ಲಿ ಹೋರಾಟ ಮಾಡುವೆ, ಇಲ್ಲವೇ ಇಂತಹ ಮಲೀನ ಅವ್ಯವಸ್ಥೆ ವಾತವರಣದಲ್ಲಿ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ಕೊಡುವುದೇ ಸೂಕ್ತ ಎಂಬುದು ನನ್ನ ಅಭಿಪ್ರಾಯ. “
– ಶಾಂತವೀರ ಬಿರಾದಾರ
ಪುರಸಭೆ ಅಧ್ಯಕ್ಷ, ಸಿಂದಗಿ
” ಅಭಿಷೇಕ್ ಕೊಡಗೆ ಎಂಬ ವ್ಯಕ್ತಿಯ ಕಡೆಯಿಂದಲೇ ಪುರಸಭೆಯ ಸದಸ್ಯರು ಈ ಕಾರ್ಯವನ್ನು ಕಛೇರಿಯಲ್ಲಿಯೇ ಮಾಡಿಸುತ್ತಿದ್ದರು. ಆದರೆ ಆ ವ್ಯಕ್ತಿ ಹಾಗೂ ಸದಸ್ಯರ ಮಧ್ಯದಲ್ಲಿ ಏನಾಗಿದೆ ಎಂಬುದು ನನಗೂ ತಿಳಿದಿಲ್ಲ. ಸದ್ಯ ಅವನನ್ನು ಪುರಸಭೆಯಿಂದ ಹೊರಹಾಕಿದ್ದಾರೆ. ಆಗಿನಿಂದ ಪುರಸಭೆಯ ಹಲವು ಸದಸ್ಯರು ಮನೆಯಿಂದಲೇ ಅವನ ಕಡೆಯಿಂದ ಕಾರ್ಯ ಮಾಡಿಸುತ್ತಿದ್ದಾರೆ. ನಾನು ಪುರಸಭೆಗೆ ಹಾಜರಾಗಿ ಎರಡು ದಿನವಾಯಿತು. ಕೆಲಸದ ಒತ್ತಡವಿರುವ ಕಾರಣ ಕೆಲಸ ಮಾಡಲು ಲಾಗಿನ್ ಕೊಟ್ಟಿದ್ದೇನೆ. ಕೂಲಂಕುಶವಾಗಿ ಪರಿಶೀಲಿಸಿ ತಪ್ಪು ಮಾಡಿರುವ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ.”
– ಸುರೇಶ ನಾಯಕ
ಪುರಸಭೆ ಮುಖ್ಯಾಧಿಕಾರಿ

“ನಾನು ಕಳೆದ ಎರಡು ದಿನಗಳಿಂದ ಊರಲ್ಲಿಲ್ಲ. ನಿನ್ನೆಯ ದಿನ ವಿಜಯಪುರದಲ್ಲಿದ್ದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿದ್ದೆ. ಊರಿಗೆ ಬಂದು ಏನಾಗಿದೆ ಎಂಬುದನ್ನು ವಿಚಾರಣೆ ಮಾಡಿ ತಪ್ಪಿತಸ್ಥರ ವಿರುಧ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡುವೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

