ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಕಮಲಾದೇವಿಯವರು 1903 ಏಪ್ರಿಲ್ ಮೂರರಂದು ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಗಿರಿಜಾಬಾಯಿ, ತಂದೆ ಮಂಗಳೂರಿನ ಜಿಲ್ಲಾ ಕಲೆಕ್ಟರ್ ಆಗಿದ್ದರು. ಕಮಲಾದೇವಿಯವರ ಮದುವೆ ಅವರ 14ನೇ ವಯಸ್ಸಿನಲ್ಲಿ ಆಯಿತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಎರಡು ವರ್ಷಗಳ ಬಳಿಕ ಅವರು ವಿಧವೆಯಾದರೂ ಕಮಲಾದೇವಿ ಧೃತಿಗೆಡಲಿಲ್ಲ. ಉನ್ನತ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳಿಗೆ ಬಹಿಷ್ಕೃ ತವಾದ ಅಭಿನಯವನ್ನು ಸ್ವೀಕರಿಸಿದ ಕಮಲಾದೇವಿ ಎರಡು ಮೂಕಿ ಚಿತ್ರಗಳಲ್ಲಿ ಸಹ ಅಭಿನಯಿಸಿದರು.
1920 ರಲ್ಲಿ ಕಮಲಾದೇವಿಯವರ ಮದುವೆ ಸರೋಜಿನಿ ನಾಯ್ಡು ಅವರ ಸೋದರರಾದ ಸುಪ್ರಸಿದ್ಧ ಕವಿ ಹಾಗೂ ನಾಟಕಕಾರರಾದ ಹರೀoದ್ರನಾಥ್ ಚಟ್ಟೋಪಾಧ್ಯಾಯ ಇವರೊಡನೆ ಜರುಗಿತು. ಕೆಲದಿನಗಳಲ್ಲಿಯೇ ಹರೀoದ್ರನಾಥರೊಡನೆ ಕಮಲಾದೇವಿ ಅಲ್ಲಿ ಬೆಡ್ ಫೋರ್ಡ್ ಕಾಲೇಜು ಸೇರಿಕೊಂಡು ಸಮಾಜಶಾಸ್ತ್ರದ ಅಧ್ಯಯನ ಮಾಡಿದರು.

1923ರಲ್ಲಿ ಭಾರತಕ್ಕೆ ಮರಳಿದ ದಂಪತಿಗಳು ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಕಮಲಾದೇವಿ ಸೇವಾದಳವನ್ನು ಸೇರಿದರು.
1926ರಲ್ಲಿ ಮಾರ್ಗಾರೇಟ್ ಕಜಿನ್ ಇವರ ಸಲಹೆ ಮೇರೆಗೆ ಮದ್ರಾಸ್ ಪ್ರಾಂತೀಯ ಶಾಸನಸಭೆಯ ಚುನಾವಣೆಗೆ ಸ್ಪರ್ಧಿಸಿದ ಕಮಲಾದೇವಿ ಅವರು ಕೇವಲ ಎರಡು ನೂರು ಮತಗಳ ಅಂತರದಲ್ಲಿ ಸೋತರು. 1930ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ ಪ್ರತಿಬoಧಿ ತ ಉಪ್ಪನ್ನು ಮುಂಬೈ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಮಾರಾಟ ಮಾಡಲು ಹೋಗಿ ಜೈಲಿಗೆ ತೆರಳಿದರು. 1936 ರಲ್ಲಿ ಕಮಲಾದೇವಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಜಯಪ್ರಕಾಶ್ ನಾರಾಯಣ್, ರಾಮನೋಹರ್ ಲೋಹಿಯಾ ಹಾಗೂ ಮೀನೂ ಮಸಾನಿಯವರ ಜೊತೆ ದುಡಿದರು.
ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ ಕಮಲಾದೇವಿಯವರು ಜಗತ್ತನ್ನೆಲ್ಲ ಸುತ್ತು ಹಾಕುತ್ತಾ ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನ ಪಟ್ಟರು. ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶ ವಿಭಜನೆಯಾಗಿ ಲಕ್ಷಾಂತರ ನಿರಾಶಿತರು ಭಾರತದಲ್ಲಿ ಬರತೊಡಗಿದಾಗ ಕಮಲಾದೇವಿ ಭಾರತೀಯ ಸಹಕಾರಿ ಒಕ್ಕೂಟವನ್ನು ಸ್ಥಾಪಿಸಿ ನಿರಾಶ್ರಿತರ ಪುನರ್ವಸತಿಗೆ
ಪ್ರಯತ್ನಿಸಿದರು. ಇದರ ಅಂಗವಾಗಿ ದಿಲ್ಲಿಯ ಹೊರವಲಯದಲ್ಲಿ ಕಮಲಾದೇವಿ ಹಾಗು ಸುಶೀಲಾ ನಯ್ಯರ್ ಜೊತೆಯಾಗಿ ದುಡಿದು ಫರೀದಾಬಾದ್ ಎನ್ನುವ ಗ್ರಾಮವನ್ನು ಸ್ಥಾಪಿಸಿದರು. ವಾಯುವ್ಯ ಗಡಿಭಾಗದಿಂದ ಬಂದ 30,000 ಪಠಾಣರು ಇಲ್ಲಿ ನೆಲೆಸಿದರು.
ಸ್ವಾತಂತ್ರ್ಯದ ನಂತರ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ರವರ ಯಾಂತ್ರಿಕಕರಣದ ಒಲವಿನಿಂದಾಗಿ ಕರಕುಶಲ ಕೈಗಾರಿಕೆಗಳಿಗೆ ವಿಶೇಷತಹ ಅಸಂಘಟಿತ ಹೆಣ್ಣು ಮಕ್ಕಳ ಕೈಗಾರಿಕೆಗಳಿಗೆ ಧಕ್ಕೆ ಬರುವ ಸಂಭಾವ್ಯತೆಯನ್ನು ಕಂಡ ಕಮಲಾದೇವಿಯವರು ಅನೇಕ ಕರಕುಶಲ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಇದರಲ್ಲಿ ದಿಲ್ಲಿಯಲ್ಲಿರುವ ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ ಪ್ರಮುಖವಾದದ್ದು. ಇದಲ್ಲದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾವನ್ನು ಸಹ ಇವರು ಸ್ಥಾಪಿಸಿದರು. ಸಂಗೀತ, ನಾಟಕ ಅಕಾಡೆಮಿಯ ಅಧ್ಯಕ್ಷರಾದರು. ಇದರಂತೆಯೇ ಹ್ಯಾಂಡಿಕ್ರಾಫ್ಟ್ ಬೋರ್ಡ್ ಸಹ ಸ್ಥಾಪನೆ ಮಾಡಿದರು. ಇದರ ಮೂಲಕ ಪ್ರತಿವರ್ಷ ಅನೇಕ ಕರಕುಶಲಕರ್ಮಿಗಳಿಗೆ ಸನ್ಮಾನ ನೀಡಲಾಗುತ್ತಿದೆ. ನಾವು ಕಂಡ ಅಪ್ರತಿಮ ಮಹಿಳೆಯರಲ್ಲಿ
ಕಮಲಾದೇವಿ ಚಟ್ಟೋಪಾಧ್ಯಾಯ ಸಹ ಒಬ್ಬರು ಎಂದು ಹೆಮ್ಮೆಯಿಂದ ಹೇಳಬಹುದು.


