ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜೀವನ ಹಣೆಬರಹದ ಮೇಲೆ ನಿಲ್ಲದೇ ಅದು ನಮ್ಮ ಹಣೆಬೆವರಿನ ಮೇಲೆ ನಿಂತಿದೆ. ಸಾಧನೆಯನ್ನು ಯಾರೂ ಬೇಕಾದರೂ ಮಾಡಬಹುದು. ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ತಾಳದೇ ತಮ್ಮ ಕೆಲಸವನ್ನು ತೃಪ್ತಿಯಿಂದ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ವೈದ್ಯಭೂಷಣ ಪ್ರಶಸ್ತಿ ಪುರಸ್ಕ್ರತ, ಪ್ರೇರಣದಾಯಕ ಭಾಷಣಕಾರ ಡಾ.ರಾಹುಲ್ ದೇವರಾಜ ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ನಂದಿ ಶಿಕ್ಷಣ ಸಂಸ್ಥೆಯ ನಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ(ಆಂಗ್ಲ ಮತ್ತು ಕನ್ನಡ ಮಾಧ್ಯಮ) ಹಾಗೂ ನಂದಿ ಸಂಸ್ಕ್ರತ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳಿಗೂ ಯಾವದರಲ್ಲಿ ಕುಗ್ಗದಂತೆ ಬೆಳೆಸಬೇಕು. ಜೀವನದಲ್ಲಿ ಕಷ್ಟ ಇರುತ್ತದೆ. ಇದನ್ನು ಜಯಿಸಬೇಕು. ಮಕ್ಕಳಲ್ಲಿ ಸದೃಢ ವರ್ತನೆ ಬೆಳೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಬೇಕು. ಮಕ್ಕಳು ದೊಡ್ಡವರಿಗೆ ಗೌರವ ಕೊಡುವುದನ್ನು ಕಲಿಸಬೇಕೆಂದರು.
ಜಗತ್ತಿನಲ್ಲಿ ಸಂಪತ್ತನ್ನು ಕಳ್ಳರು ಕದಿಯುತ್ತಾರೆ. ಅದೇ ನಮ್ಮಲ್ಲಿರುವ ವಿದ್ಯೆಯನ್ನು ಯಾರೂ ಕಲಿಯಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾದ ವಿದ್ಯೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ದುಡ್ಡಿನ ಹಿಂದೆ ನಾವು ಹೋಗದೆ ದುಡ್ಡು ನಮ್ಮನ್ನು ಹುಡುಕಿಕೊಂಡು ಬರುವಂತಹ ಕೌಶಲ್ಯ ಮಕ್ಕಳಿಗೆ ಕಲಿಸುವಂತಾಗಬೇಕು. ಮಕ್ಕಳು ಯಾವುದೇ ದುಶ್ಚಟಗಳಿಗೆ ಒಳಗಾದಂತೆ ಪಾಲಕರು ನೋಡಿಕೊಳ್ಳಬೇಕಿದೆ. ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿಯನ್ನು ತಾಳುತ್ತಾರೋ ಅವರಿಗೆ ಅದರಲ್ಲಿ ಅವಕಾಶ ನೀಡಬೇಕು. ನಗುವೇ ಜೀವನದ ಪರಮಔಷಧಿಯಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲ ಸಮಸ್ಯೆಗಳು ಕಳೆದುಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪೂಜಾರಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಮ್ಮ ಸಂಸ್ಥೆಯ ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕೆ ಪಾಲಕರ ಸಹಕಾರ ಬಹಳ ಮುಖ್ಯ. ಮಕ್ಕಳ ಮುಂದೆ ಶಿಕ್ಷಕರನ್ನು ಎಂದಿಗೂ ಪಾಲಕರು ಸಣ್ಣವರನ್ನಾಗಿಸಬಾರದು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ, ಪಾಲಕರ ಪಾತ್ರ ಪ್ರಮುಖವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮಗೆ ಜನ್ಮಕೊಟ್ಟ ತಂದೆ-ತಾಯಿ ಮೊದಲ ಗುರುವಾದರೆ, ನಮಗೆ ಶಿಕ್ಷಣ ಕೊಡುವ ಶಿಕ್ಷಕರು ಎರಡನೇ ಗುರು, ಸಮಾಜವನ್ನು ಧಾರ್ಮಿಕವಾಗಿ ಸನ್ಮಾರ್ಗದಲ್ಲಿ ನಡೆಸುವ ಮಠ-ಮಾನ್ಯಗಳ ಪೂಜ್ಯರು ಮೂರನೇ ಗುರುವಾಗಿದ್ದಾರೆ. ಸಮಾಜಕ್ಕೆ ಈ ಮೂರು ಗುರುಗಳ ಕೊಡುಗೆ ಮರೆಯುವಂತಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಾಗಬೇಕು. ಮೂಢನಂಬಿಕೆಗಳಿಗೆ ಆದ್ಯತೆ ನೀಡದೇ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ಅನುದಾನ ರಹಿತ ಶಾಲೆಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಅನುದಾನ ರಹಿತ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ, ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪೂಜಾರಿ ಅವರ ಕಾರ್ಯ ಶ್ಲಾಘನೀಯ ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಸವರಾಜ ಹಾರಿವಾಳ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವನಗೌಡ ಬಿರಾದಾರ, ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಶಾಲೆಯ ಮುಖ್ಯಗುರುಮಾತೆ ವೀಣಾ ಪೂಜಾರಿ, ಗಂಗಾಧರ ಬಡಿಗೇರ ಇತರರು ಇದ್ದರು. ಶಿವಾನಿ ಸ್ವಾಗತಿಸಿದರು. ವಿಜಯಮಾಲಾ ಹಿರೂರ ನಿರೂಪಿಸಿದರು. ಸೌಮ್ಯ ವಂದಾಲ ವಂದಿಸಿದರು. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ಸ್ವಚ್ಛತೆಯ ಕಾಯಕದಲ್ಲಿ ನಿರತರಾಗಿರುವ ಮಹಿಳಾ ಪೌರಕಾರ್ಮಿಕರನ್ನು ಸಂಸ್ಥೆಯಿಂದ ಸನ್ಮಾನಿಸಿದ್ದು ವಿಶೇಷ ಗಮನ ಸೆಳೆಯಿತು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

