ಭಾವರಶ್ಮಿ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಶ್ರೇಷ್ಠ ವಿಜ್ಞಾನಿ ಅಲ್ಬರ್ಟ ಐನಸ್ಟೀನ್ ಅವರು, “ಐiಜಿe is ಟiಞe ಡಿiಜiಟಿg ಚಿ biಛಿಥಿಛಿಟe. ಖಿo ಞeeಠಿ ಥಿouಡಿ bಚಿಟಚಿಟಿಛಿe, ಥಿou musಣ ಞeeಠಿ moviಟಿg” ಎಂದು ಹೇಳಿದ್ದಾರೆ. ಜೀವನವೆಂದರೆ ಅದೊಂದು ಬದುಕಿನ ವ್ಯಾಪಾರದ ಸಂತೆ. ಜೀವನ ಜೀವಿಸುವುದು ಮುಖ್ಯವಲ್ಲ. ನಾವು ಈ ರೀತಿ ಬದುಕು ನಡೆಸುತ್ತೇವೆ ಎಂಬುದು ಮುಖ್ಯ. ಜೀವನ ಎಂದರೆ ಒಂದು ಸಾಗರವಿದ್ದಂತೆ. ಅಲ್ಲಿ ಸವಾಲೆಂಬ ಅಲೆಗಳನ್ನು ದಾಟಿ ದಡ ಸೇರುವವನು ಮಾತ್ರ ಯಶಸ್ವಿಯಾಗುತ್ತಾನೆ. ನಮ್ಮ ಜೀವನದಲ್ಲಿ ಈಗ ಏನು ಇದೆಯೋ ಅದು ನನ್ನ ಪಾಲಿನ ಪಂಚಾಮೃತ ಅಥವಾ ಮಹಾಪ್ರಸಾದವೆಂದು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಅಂದಾಗ ಮಾತ್ರ ಆ ಜೀವನ ಅರ್ಥಪೂರ್ಣ ಮತ್ತು ನೆಮ್ಮದಿಯುಕ್ತ ಆಗಿರಲು ಸಾಧ್ಯ. ಸದಾ ಸಿಗಲಾರದ ವಸ್ತುವಿಗಾಗಿ ಅಥವಾ ಈಡೇರದ ಅಸೆಗಾಗಿ ಅದೇಷ್ಟೋ ಜನರು ಕೊರಗುತ್ತಾ, ದುಃಖಿತರಾಗಿ ತಮ್ಮ ಜೀವನವನ್ನೇ ವೃಥಾ ಹಾಳು ಮಾಡಿಕೊಳ್ಳುತ್ತಾರೆ. ಶ್ರೀಮಂತರನ್ನು ಕಂಡು ಅವರಂತೆ ನಮಗೂ ಮನೆ, ಹಣ, ಆಸ್ತಿ ಮತ್ತು ವೈಭೋಗದ ಜೀವನ ಬೇಕು. ಬಿಸಿಲ್ಗುದುರೆಯ ಬೆನ್ನತ್ತಿ ಇರುವ ಜೀವನವನ್ನು ಸಾರ್ಥಕಪಡಿಸಿಕೊಳ್ಳದೇ ಮತ್ತು ಕ್ಷಣಿಕ ಸುಖಕ್ಕಾಗಿ ಏನೆಲ್ಲವನ್ನೂ ಮಾಡುತ್ತಾ, ಬದುಕಿನಲ್ಲಿ ನೋವು-ನಲಿವು, ಸಂಕಷ್ಟ, ಸಮಸ್ಯೆ, ತೊಂದರೆ ಮತ್ತು ಸಮಾಜದಿಂದ ಟೀಕೆ ಮತ್ತು ಹೀಯಾಳಿಕೆಗೆ ಗುರಿಯಾಗುತ್ತಾರೆ ಮತ್ತು ಇಡೀ ಜೀವನವನ್ನು ದುಃಖದಾಯಕವಾಗಿ ಅನುಭವಿಸುತ್ತಾರೆ. ನಾವು ಸರಿಯಾದ ಮಾರ್ಗದಲ್ಲಿ ಜೀವನ ನಡೆಸಿದ್ದೇ ಆದರೆ ಅದುವೇ ನಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಅಲ್ಪತೃಪ್ತಿಗಾಗಿ ಅಮೂಲ್ಯವಾದ ಜೀವನ ಹಾಳಾಗದಿರಲಿ

ನಾವು ಅಲ್ಪತೃಪ್ತಿಗಾಗಿ ಯಾಕೆ ನಮ್ಮ ಇಡೀ ಜೀವನವನ್ನು ದುರಂತವನ್ನಾಗಿಸಬಾರದು. ನಮಗೆ ಅದಿಲ್ಲ, ಇದಿಲ್ಲ, ಹಣ, ಅಂತಸ್ತು ಮತ್ತು ಆಸ್ತಿ-ಪಾಸ್ತಿಯಿಲ್ಲ ಎಂಬ ಈ ಮಾನಸಿಕ ಕೊರಗನ್ನು ತ್ಯಜಿಸಿ ಕಷ್ಟದ ಜೀವನವನ್ನು ಸಹ ಸರಳವಾಗಿ ನಿರ್ವಹಿಸುತ್ತಾ, ಹಿರಿಯರ ಮಾತಿನಂತೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ನಾವೆಲ್ಲರೂ ಇದ್ದುದ್ದರಲ್ಲಿಯೇ ನೆಮ್ಮದಿಯಿಂದ ಬದುಕುವುದನ್ನು ಕಲಿತುಕೊಳ್ಳಬೇಕು. ನಾವು ಯಾವಾಗಲೂ ನಮ್ಮಕ್ಕಿಂತಲೂ ಕಷ್ಟ ಅಥವಾ ತೊಂದರೆಯಲ್ಲಿದ್ದವರನ್ನು ನೋಡಿ ಜೀವನ ಮಾಡಬೇಕು. ಅಂದಾಗ ಮಾತ್ರ ನಾವು ಸುಖೀ ಸಂಸಾರವನ್ನು ನಡೆಸಬಹುದು. ಇಲ್ಲದಿದ್ದರೆ ಅವೆಲ್ಲ ಈಡೇರದ ಆಸೆಗಳಿಗಾಗಿ ಮುಂದೆ ದುಃಖ, ಅಸಂತೋಷಕ್ಕೆ ಕಾರಣವಾಗುತ್ತದೆ ಎಂಬ ಅರಿವು ನಮ್ಮಲ್ಲಿರಬೇಕು. ನಮ್ಮೆಲ್ಲ ಕೆಲಸಗಳನ್ನು ನಿರ್ಮಲ ಹಾಗೂ ನಿಸ್ವಾರ್ಥ ಮನೋಭಾವ ಮತ್ತು ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಮಚಿತ್ತ, ಏಕಾಗ್ರತೆ, ಸದ್ವಿಚಾರ, ಸದ್ವಿವೇಕ, ಗುರಿಯ ಸಾಧನೆಯತ್ತ ಲಕ್ಷ್ಯ ಮತ್ತು ಪರಿಶ್ರಮ ವಹಿಸುತ್ತಾ ಮುನ್ನಡೆದರೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಮತ್ತು ಹೀಗೆ ಪಡೆದ ಯಶಸ್ಸಿನಿಂದ ಜೀವನದಲ್ಲಿ ತೃಪ್ತಿ ಮತ್ತು ನೆಮ್ಮದಿಯನ್ನು ಪಡೆಯುತ್ತೇವೆ. ಹೀಗೆ ನಂಬಿಕೆ ಎನ್ನುವದು ನಮ್ಮ ಬದುಕಿನ ಕೈಗನ್ನಡಿ ಇದ್ದಂತೆ.
ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನೋಭಾವದೊಂದಿಗೆ ಬದುಕುವ ನೆಮ್ಮದಿಯುಕ್ತ ಜೀವನ ನಮ್ಮದಾಗಲಿ
ಜೀವನ ಅನ್ನೋದು ಅಂದುಕೊಂಡ ಹಾಗೆ ಇರಲ್ಲ. ಕೆಲವೊಮ್ಮೆ ಖುಷಿ, ಕೆಲವೊಮ್ಮೆ ದುಃಖವೆಂಬುದೇ ಇದ್ದೇ ಇರುತ್ತದೆ. ಶ್ರೀಮಂತಿಕೆ ಮತ್ತು ಬಡತನವೆಂಬುದು ಮಧ್ಯಾನ್ಹದ ಬಿಸಿಲು. ಆ ಬಿಸಿಲು ಹೋಗ ನಂತರ ನೆರಳು ಬಂದೇ ಬರುತ್ತದೆ ಎಂಬ ಆಶಾಭಾವ ನಮ್ಮಲ್ಲಿರಬೇಕು. ಎಲ್ಲರೂ ಎಲ್ಲವನ್ನೂ ಪಡೆದುಕೊಂಡಿರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ನೋವು ಇರುತ್ತದೆ. ಒಬ್ಬನ ಹತ್ರ ಹಣ, ಆಸ್ತಿ-ಸಂಪತ್ತು ಎಲ್ಲವೂ ಇದ್ದರೆ ಜೀವನದಲ್ಲಿ ನೆಮ್ಮದಿ ಎಂಬುದೇ ಇರುವುದಿಲ್ಲ. ಇನ್ನು ಹಲವರಲ್ಲಿ ಇವತ್ತು ತುತ್ತಿನ ಚೀಲವನ್ನು ಹೇಗೆ ತುಂಬಿಸಬೇಕು ಮತ್ತು ಇಂದಿನ ಒಂದು ದಿನದ ಸಂಸಾರದ ನೌಕೆಯನ್ನು ಹೇಗೆ ಸಾಗಿಸಬೇಕು ಎಂಬ ಚಿಂತೆ ಇರುತ್ತದೆ. ಇನ್ನು ಕೆಲವರು ಯಾವುದೇ ಅತಿಯಾಸೆ ಅಥವಾ ಇನ್ನು ಬೇಕೆಂಬ ವ್ಯಾಮೋಹದ ಬದುಕು ನಮ್ಮದಾದರೆ, ಅವೆಲ್ಲವೂ ಈಡೇರದೇ ಹೋದಾಗ ಜೀವನದಲ್ಲಿ ನೆಮ್ಮದಿಯೆಂಬುದು ಮರೀಚಿಕೆಯಂತಾಗಿ ಸಂತೋಷವೇ ಇಲ್ಲದಂತಾಗುತ್ತದೆ. ಆದ್ದರಿಂದ ನಾವು ಆಸೆಯೆಂಬ ಕಡಲ್ಗುದುರೆಯನ್ನು ಹತ್ತದೇ ಇದ್ದುದ್ದರಲ್ಲಿಯೇ ತೃಪ್ತಿಪಟ್ಟುಕೊಂಡು ಈ ಜೀವನವು ನನ್ನ ಪಾಲಿಗೆ ಒದಗಿ ಬಂದ ದೇವರ ಅನುಗ್ರಹವೆಂದು ತಿಳಿದು ಬಾಳಿ ಬದುಕಬೇಕು. ಯಾವುದಕ್ಕೂ ಇತಿಮಿತಿಯಿರಲಿ. ನಮ್ಮ ಆಸೆಗಳು ಮಿತಿಯಲ್ಲಿರಲಿ. ಆಗ ಮಾತ್ರ ನಮ್ಮ ಜೀವನ, ಸಂಸಾರ ನೌಕೆಯೆಂಬುದು ಸುಲಭವಾಗಿ ದಡ ಸೇರಲು ಸಾಧ್ಯವಾಗುತ್ತದೆ ಮತ್ತು ಅದು ಆನಂದಮಯ ನೆಮ್ಮದಿಯುತವಾಗಿ ಕೂಡಿರುತ್ತದೆ.
ಬದುಕೆಂಬುದು ಒಂದು ಸಂಘರ್ಷಮಯ ಮತ್ತು ಹೋರಾಟವೇ ಸರಿ

ಆದ್ದರಿಂದ ಜೀವನ ಇರುವುದು ಕೇವಲ ಕೆಲವೇ ವರ್ಷಗಳ ಕಾಲ ಮಾತ್ರ ಎಂಬುದನ್ನು ಅರಿತು ನನಗೆ ಅಸಾಧ್ಯವಾದುದು ಯಾವುದೂ ಇಲ್ಲ. ಎಲ್ಲವೂ ಸಾಧ್ಯ, ನಾನು ಎಂತಹ ಸಮಸ್ಯೆ ಬಂದರೂ ಎದುರಿಸಬಲ್ಲೆ ಎಂಬ ದೃಢ ನಂಬಿಕೆಯೊಂದಿಗೆ ನಿಮ್ಮ ಕೆಲಸವನ್ನು ಮಾಡುತ್ತಾ ಮುಂದೆ ಸಾಗಿ ವಿಜಯಮಾಲೆ ನಿಮ್ಮ ಕೊರಳಿಗೆ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೀವನ-ಬದುಕು ಎನ್ನುವುದು ಒಂದು ಸಂಘರ್ಷಮಯವಾದ ಹೋರಾಟವೇ ಸರಿ. ಬದುಕಿನಲ್ಲಿ ನಾವು ಏನನ್ನಾದರೂ ಮಾಡಲು ಅಥವಾ ಸಾಧಿಸಲು ಹೊರಟಾಗ ಮೊದಲು ನಾವು ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯ, ಪ್ರತಿಭೆ, ಚಾಣಾಕ್ಷತನ, ಕ್ರೀಯಾಶೀಲತೆಗಳ ಬಗ್ಗೆ ಸ್ಪಷ್ಟತೆ ಇರಬೇಕು.
ಕೊನೆಯ ವಾಣಿ
ಡಿ.ವ್ಹಿ.ಜಿ ಅವರ “ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ ಮಂಕುತಿಮ್ಮ” ಎಂಬ ಅನುಭವದ ಸಾರದಂತೆ, ಬರೀ ಇಲ್ಲವೆನ್ನುವುದರಲ್ಲಿಯೇ ಎಷ್ಟೋ ಜನ್ಮದ ಬಳಿಕ ದೊರೆತ ಈ ಮನುಷ್ಯ ಜನ್ಮ-ಬದುಕನ್ನು ಕಳೆದುಕೊಳ್ಳುವವರು ನಾವಾಗಬಾರದು. ಇಲ್ಲದಿರುವುದನ್ನು ನೆನೆದು ಇರುವ ಸುಖವನ್ನು ಮರೆಯದೇ ದೊರಕಿದಷ್ಟರಲ್ಲಿಯೇ ಸಂತೋಷದಿಂದ ಬಾಳಿ ಬದುಕುವುದು ಜಾಣತನದ ದಾರಿಯೆಂದು ಅರಿತುಕೊಳ್ಳಬೇಕು. ಅತ್ತರೆ ನಾಟಕ ಆಡ್ತೀವಿ ಅಂತಾರೆ, ನಕ್ಕರೆ ನೋವೇ ಇಲ್ಲ, ಮೌನವಾಗಿದ್ದರೆ ತಪ್ಪು ಮಾಡದೀವಿ, ಮಾತಾಡಿದರೆ ಕೆಟ್ಟವರು, ಮಾತಾಡದಿದ್ದರೆ ಅಹಂಕಾರ, ಬದುಕಿದ್ದರೆ ಯಾವಾಗ ಸಾಯ್ತಾರೋ ಅಂತಾರೆ, ಸತ್ತರೆ ಅಯ್ಯೋ ಪಾಪ ಅಂತಾರೆ, ನೀನೇನು ಮಾಡು, ಬಿಡು ಅನ್ನೋದಂತೂ ಅಂದೇ ಅಂತಾರೆ, ಬಾಯಿಗೆ ಬಂದಂತೆ ಅನ್ನುವವರನ್ನು ಬಿಟ್ಟು ನಾವು ನಮ್ಮಷ್ಟಿದಂತೆ ಬದುಕಿ ಇತರರಿಗೆ ಮಾದರಿಯಾಗಿ ಬದುಕಬೇಕು. ಅವರು ಹೀಗೆ ಅಂತಾರೆ, ಇವರು ಹೀಗೆ ಅಂತಾರೆ ಅನ್ನೋದನ್ನು ಬದಿಗಿರಿಸಿ ಸಾರ್ಥಕತೆಯೊಂದಿಗೆ ಬದುಕಬೇಕು. ಅದು ನಮ್ಮ ದಾರಿಯಲ್ಲಿ ಬಂದೆರಗುವ ಕಠಿಣ ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಶ್ರದ್ಧೆ, ನಿಷ್ಠೆ ಮತ್ತು ಪರಿಶ್ರಮ ವಹಿಸಿ ದುಡಿಯುತ್ತಾ, ಜೀವನದ ಪ್ರತಿಯೊಂದು ಕಹಿ-ಸಹಿ ಅನುಭವವನ್ನು ಸಮನಾಗಿ ಸ್ವೀಕರಿಸುವ ಮನೋಧೋರಣೆ ನಮ್ಮದಾಗಬೇಕು. ಇನ್ನಷ್ಟು ಬಲಶಾಲಿಯನ್ನಾಗಿಸುವಂತೆ ದೇವರ ಮೇಲೆ ಭವರಸೆಯನ್ನಿಟ್ಟು ಮುನ್ನಡೆದರೆ ಬಾಳು ನಂದಾದೀಪವಾಗುವಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಬದುಕು ಒಂದು ಸುಂದರ ಪಯಣವಿದ್ದಂತೆ. ಆ ಜೀವನ ಪಥದಲ್ಲಿ ಕಾಣಸಿಗುವ ನೋವು-ನಲಿವು, ಅದರ ಚಿಂತನ, ಪ್ರತಿ ಹೆಜ್ಜೆಯು ಹೊಸ ಪಾಠ ಕಲಿತು, ಸದ ನಗು-ನಗುತ್ತಾ ಸಾಗಬೇಕು ನಮ್ಮ ಬಾಳ ಹಾದಿಯಲಿ..


