ಸಿಂದಗಿಯಲ್ಲಿ ಅರ್ಧಕ್ಕೆ ನಿಂತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ
ವರದಿ: ರಶ್ಮಿ ನೂಲಾನವರ
ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ತಾಲ್ಲೂಕಿನಲ್ಲಿ ಪ್ರಾರಂಭಗೊಳ್ಳಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಆಟೊ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಊಟ, ತಿಂಡಿ ಅತೀ ಕಡಿಮೆ ದರದಲ್ಲಿ ಲಭ್ಯವಾಗಲೆಂಬ ಉದ್ದೇಶದಿಂದ ೨೦೧೭ರ ಆ.೧೬ರಂದು ಇಂದಿರಾ ಕ್ಯಾಂಟೀನ್ಗಳನ್ನು ರಾಜ್ಯದಲ್ಲಿ ಆರಂಭಿಸಲಾಯಿತು. ಆದರೆ ತಾಲ್ಲೂಕಿನ ಜನತೆಗೆ ಇನ್ನೂ ಈ ಯೋಜನೆ ಮರೀಚಿಕೆಯಾಗಿಯೇ ಉಳಿದಿದೆ. ಸದ್ಯ ಅಡುಗೆ ಅನಿಲ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹೊಸದಾಗಿ ಕ್ಯಾಂಟೀನ್ ಪ್ರಾರಂಭವಾದರೂ ಕೆಲಸ ಮಾತ್ರ ಅರ್ಧಕ್ಕೆ ನಿಂತಿದೆ. ಪ್ರಾರಂಭವಾಗುತ್ತೋ ಇಲ್ಲವೂ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕ್ಯಾಂಟೀನ್ ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ನಡೆದಿರುವುದೇ ಇದಕ್ಕೆ ಕಾರಣ. ತಾಲೂಕಿನ ಬಡವರು, ಕಾರ್ಮಿಕರು, ಶಾಲಾ-ಕಾಲೇಜು ಮಕ್ಕಳಿಗೆ, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟ್ಗೆ ಬರುವ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸರಕಾರದಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಳ್ಳುತ್ತಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.
ಸಿಂದಗಿ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಪ್ರತಿನಿತ್ಯ ಶಾಲಾ ಕಾಲೇಜು ಸಾವಿರಾರು ಮಕ್ಕಳು, ವಿವಿಧ ಕಾರ್ಯಗಳಿಗೆ ರೈತರು, ಕಾರ್ಮಿಕರು, ಆಸ್ಪತ್ರೆಗೂ ಸಾಕಷ್ಟು ಜನರು ಆಗಮಿಸುತ್ತಾರೆ, ಅವರಿಗೆಲ್ಲ ಕಡಿಎ ದರದಲ್ಲಿ ಊಟ, ಉಪಹಾರ ನೀಡುವ ಸಲುವಾಗಿ ಸರಕಾರ ಇಂದಿರಾ ಕ್ಯಾಂಟೀನ್ ತರೆಯಲು ಮುಂದಾಗಿದೆ. ಇನ್ನೇನು ನಗರದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತದೆ. ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ನೂರಾರು ಜನ ಆಸೆಯನ್ನುಟ್ಟುಕೊಂಡಿದ್ದಾರೆ. ಆದರೆ ಹಲವು ತಿಂಗಳುಗಳೇ ಕಳೆದರೂ ನಿರ್ಮಾಣ ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ. ಪ್ರತಿದಿನ ನೂರಾರು ಜನರು ಆಸೆಯಿಂದ ಅಪೂರ್ಣಗೊಂಡ ಕ್ಯಾಂಟೀನ್ನತ್ತ ಚಿತ್ತ ಹಾಯಿಸುತ್ತಲಿದ್ದಾರೆ.
ಕ್ಯಾಂಟೀನ್ ಕಟ್ಟಡದ ಹೊರಭಾಗದ ಕೆಲಸ ಮುಗಿದಿದ್ದು, ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಆದರೆ ಗುತ್ತಿಗೆದಾರರು ಬೇಗ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
” ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಂಗ್ರೆಸ್ ಸರಕಾರದ ಬಹುತೇಕ ಕಾಮಕಾರಿಗಳೇ ಹೀಗೆ ಇವೆ. ದೇವರ ಹಿಪ್ಪರಗಿ, ಆಲಮೇಲ ಹಾಗೂ ಸಿಂದಗಿಯಲ್ಲಿ ಯಾವಾಗ ಪ್ರಾರಂಭ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಯಾರು ಸಹ ವಿಚಾರಿಸಿಲ್ಲ. ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರು ಇದರ ಬಗ್ಗೆ ಕಾಳಜಿ ತೋರುತ್ತಿಲ್ಲ. ಜೊತೆಗೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಕೂಡಾ ಎದ್ದು ಕಾಣುತ್ತಿದೆ.”
– ಶಿವಕುಮಾರ ಬಿರಾದಾರ
ಬಿಜೆಪಿ ವಕ್ತಾರ, ಸಿಂದಗಿ
“ಸರಕಾರ ಕಡು ಬಡವರಿಗಾಗಿ ಯೋಜನೆ ರೂಪಿಸಿದ್ದು, ಅನುಷ್ಠಾನಗೊಳ್ಳುವಲ್ಲಿ ನಿರ್ಲಕ್ಷö್ಯ ಧೋರಣೆ ಅನುಸರಿಸುವುತ್ತಿರುವುದು ಬೇಸರದ ಸಂಗತಿ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬೇಗನೇ ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ನೀತಿ ಮುಂದುವರೆದರೆ ಹೋರಾಟ ಅನಿವಾರ್ಯ.”
– ಸಂತೋಷ ಮನಗೂಳಿ
ಜಯ ಕರ್ನಾಟಕ ತಾಲೂಕಾಧ್ಯಕ್ಷ

