ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಅಧ್ಯಯನ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಬದಲಾಗಿ ಅವಕಾಶ ಮತ್ತು ಅವಶ್ಯಕತೆ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಬೆಳೆಯುತ್ತಿದೆ ಎಂದು ಪ್ರಾಚಾರ್ಯ ಪ್ರಭುಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಪರೀಕ್ಷೆಗಳ ಜೊತೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಳ್ಳಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನೌಕರಿಗಾಗಿ ಶಿಕ್ಷಣ ಎಂಬ ಭಾವನೆ ಮೂಡಿರುವುದು ದೊಡ್ಡ ದುರಂತ ಎಂದರು.
ಸಂಗನಬಸವ ಅಂತರರಾಷ್ಟ್ರೀಯ ಪ.ಪೂ. ಕಾಲೇಜು ಪ್ರಾಚಾರ್ಯ ಹೇಮಂತಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು. ಪರೀಕ್ಷಾ ವ್ಯವಸ್ಥೆಯ ತಿಳುವಳಿಕೆ, ಪಾಲ್ಗೊಳ್ಳುವಿಕೆಯಲ್ಲಿಯ ಜವಾಬ್ದಾರಿಗಳು ಮತ್ತು ಸೂಕ್ತ ಅಭಿವ್ಯಕ್ತಿ ಸಾಧಿಸಿಕೊಳ್ಳುವುದು ಸರಿಯಾದ ಅಧ್ಯಯನದಷ್ಟೇ ಮುಖ್ಯವಾದದ್ದು ಎಂದು ಮನವರಿಕೆ ಮಾಡಿದರು.
ಚಾಣಕ್ಯ ಕರಿಯರ್ ಅಕಾಡೆಮಿಯ ಉಪನ್ಯಾಸಕ ಶಿವುಕುಮಾರ ಹಿರೇಮಠ ಮಾತನಾಡಿ, ಜೀವನದಲ್ಲಿ ಎದೆಗುಂದದೇ ಸತತ ಪ್ರಯತ್ನಶೀಲರಾಗಬೇಕು. ಬದುಕಿನ ಯಶಸ್ಸು ಮಾತ್ರ ನಮ್ಮ ಪ್ರಯತ್ನವನ್ನು ಅವಲಂಬಿಸಿದೆ ಎಂದರು.
ಸ್ಥಳೀಯ ಉಪನ್ಯಾಸಕ ಪ್ರಕಾಶ ಜಾಧವ, ನಿವೃತ್ತ ಮುಖ್ಯಶಿಕ್ಷಕ ಎಸ್.ಬಿ.ಹೊಕ್ಕುಂಡಿ ಮಾತನಾಡಿದರು.
ಡಾ.ಕಾವೇರಿ ಕೆ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರಾದ ನೌಶಾದ್ ವಾಲೀಕಾರ, ಅರವಿಂದ ಜಾಧವ, ಸವಿತ ಬಿ.ಜೆ. ವೈ.ಬಿ.ಬಜಂತ್ರಿ, ಲಾಲು ರಾಠೋಡ ಸಹಿತ ಗುಂಡು ಬಿರಾದಾರ, ಶರಣಬಸಪ್ಪ ಬಂಡಿ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

