ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ, ವ್ಹಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಮ್ಮ ಹಿರಿಯರು ಪ್ರಾಂಜಲ ಮನಸ್ಸಿನಿಂದ ಎಲ್ಲರಿಗೂ ನೆರವಾಗುವ ಉದ್ದೇಶದಿಂದ ಸಹಕಾರ ಸಂಘಗಳನ್ನು ಬೆಳೆಸಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಪಡೆಯುವ ಸಾಲದಿಂದ ಕಿರುಕುಳ ತಪ್ಪಿಸಿಕೊಳ್ಳಲು ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕೆಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ, ವ್ಹಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಜರುಗಿದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಅನೇಕ ಜನರು ಬಿದ್ದು ಜೀವ ಕಳೆದುಕೊಳ್ಳುತ್ತಿರುವದನ್ನು ನಾವು ಕಾಣುತ್ತಿದ್ದೇವೆ. ಸಾಲ ಸಿಗುತ್ತದೆ ಎಂದು ಎಂದಿಗೂ ಯಥೇಚ್ಛವಾಗಿ ತೆಗೆದುಕೊಳ್ಳಬಾರದು. ಸಾಲದಲ್ಲಿ ಇರುವ ಸ್ಥಿತಿ ಇರಬಾರದು. ನಾವುಗಳೇ ಸಾಲ ನೀಡುವಂತಾಗಬೇಕಿದೆ. ಸಹಕಾರಿ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.65 ಸಾವಿರದಿಂದ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹಕಾರಿಗಳು ಸಹಕಾರ ನೀಡುತ್ತವೆ. ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯಲ್ಲಿ ೬೩ ಸಾವಿರ ರೂ. ಬಂಡವಾಳದೊಂದಿಗೆ ಆರಂಭವಾದ ಡಿಸಿಸಿ ಬ್ಯಾಂಕು ಇಂದು ೧೨ ಸಾವಿರ ಕೋಟಿ ಬಂಡವಾಳ ದುಡಿಯುತ್ತಿದೆ. ಆರಂಭದಲ್ಲಿ ಸಹಕಾರಿಗಳಿಂದ ರೈತರಿಗೆ ಕೇವಲ ೪ ರಿಂದ ೫ ಸಾವಿರ ಸಾಲ ನೀಡಲಾಗುತ್ತಿತ್ತು. ಹಿಂದೆ ೩೭ ಸಾವಿರ ರೈತರಿಗೆ ಸಾಲ ನೀಡಲಾಗಿತ್ತು. ಇಂದು ನಾಲ್ಕೂವರೆ ಲಕ್ಷ ರೈತರಿಗೆ ಸಾಲ ನೀಡಲಾಗಿದೆ. ಇಂದು ಕನಿಷ್ಠ ೬೫ ಸಾವಿರದಿಂದ ಗರಿಷ್ಠ ೩ ಲಕ್ಷ ರೂ. ಸಾಲ ನೀಡಲಾಗುತ್ತಿದೆ. ೧೯೯೭ ರಲ್ಲಿ ಅವಳಿ ಜಿಲ್ಲೆಯಲ್ಲಿ ೧೯೨ ಕೋಟಿ ಸಾಲ ನೀಡಲಾಗಿತ್ತು. ಇಂದು ನಾಲ್ಕೂವರೆ ಸಾವಿರ ಕೋಟಿ ಸಾಲ ನೀಡಲಾಗಿದೆ. ನಮ್ಮ ಸಹಕಾರಿಯಲ್ಲಿ ಜನರು ಇಟ್ಟಿರುವ ಠೇವಣೆಯಲ್ಲಿಯೇ ಸಾಲ ನೀಡುವ ಮೂಲಕ ಸಹಕಾರಿಗಳು ಲಾಭದತ್ತ ಸಾಗುತ್ತಿವೆ. ಇದನ್ನು ರೈತ ಬಾಂಧವರು ಅರಿತುಕೊಂಡು ಸಹಕಾರಿ ಸಂಘಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
೨೦೦೬ ರಲ್ಲಿ ಆರಂಭವಾದ ಮಣೂರ ಗ್ರಾಮದ ಪಿಕೆಪಿಎಸ್ ಬ್ಯಾಂಕು ಅಲ್ಪಾವಧಿಯಲ್ಲಿಯೇ ಈ ಭಾಗದ ರೈತರಿಗೆ ಕಾಮಧೇನು ಕಲ್ಪವೃಕ್ಷವಾಗಿ ಬೆಳೆಯುತ್ತಿರುವುದು ಶ್ಲಾಘನೀಯ. ಇಂದು ಸ್ವಂತ ಕಟ್ಟಡ ಹೊಂದಿ ಕಾರ್ಯನಿರ್ವಹಿಸಲು ಮುಂದಾಗಿರುವದು ಸಂತಸದಾಯಕ ಸಂಗತಿ. ಜಿಲ್ಲೆಯಲ್ಲಿ ೨೭೨ ಪಿಕೆಪಿಎಸ್ಗಳಿವೆ. ಇದರಲ್ಲಿ ಈಗಾಗಲೇ ೨೫೧ ಪಿಕೆಪಿಎಸ್ ಸ್ವಂತ ಕಟ್ಟಡಗಳನ್ನು ಹೊಂದುವಲ್ಲಿ ವ್ಹಿಡಿಸಿಸಿ ಬ್ಯಾಂಕು ನೆರವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಬ್ಯಾಂಕುಗಳು ಸಹ ಸ್ವಂತ ಕಟ್ಟಡ ಹೊಂದುವಲ್ಲಿ ನೆರವು ನೀಡಲಾಗುವುದು ಎಂದ ಅವರು ನ್ಯಾಯವಾದಿ ಬಿ.ಕೆ. ಕಲ್ಲೂರ ಅವರು ಈ ಭಾಗದ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಮನವಿಗೆ ಸಚಿವರು ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಜೆಪಿಯ ಒಬ್ಬ ನಾಯಕರು ಅಡ್ಡಗಾಲು ಹಾಕಿದ್ದರಿಂದಲೇ ಇದು ನೆನೆಗುದಿಗೆ ಬಿದ್ದಿದೆ. ತಾವು ಮಾಡುವುದಿಲ್ಲ. ನಮಗೂ ಮಾಡಲು ಬಿಡುವುದಿಲ್ಲ. ಇವರು ಗೌಡರ ಕೋಣವಿದ್ದಂತೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ತಿವಿದರು.
ಬಸವನಬಾಗೇವಾಡಿ ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಇಲ್ಲಿನ ಬ್ಯಾಂಕಿನಲ್ಲಿ ೧೮೦೦ ಸದಸ್ಯರಿದ್ದರೂ ಕೇವಲ ೭೮೦ ಸದಸ್ಯರು ಸಾಲ ಪಡೆದುಕೊಂಡಿದ್ದಾರೆ. ಉಳಿದವರು ಸ್ಥಿತಿವಂತರಿದ್ದರೆ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುವ ಮೂಲಕ ಸಹಕಾರಿ ಅಭಿವೃದ್ಧಿಗೆ ಕೈಜೋಡಿಸಬೇಕು. ಸಹಕಾರಿ ರಂಗದಲ್ಲಿ ಯಾವುದೇ ಜಾತಿ, ರಾಜಕೀಯ ಮಾಡದೇ ಸಹಕಾರಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಅಂದಾಗ ಲಾಭಾಂಶದತ್ತ ಸಾಗಲು ಸಾಧ್ಯವಿದೆ. ಗೊಬ್ಬರ ಮಾರಾಟ ಮಾಡಲು ನಾವು ನಮ್ಮ ಸಂಘದಿಂದ ನೆರವು ನೀಡಲಾಗುವದು. ಈ ಗ್ರಾಮಕ್ಕೆ ಬರುವ ರಸ್ತೆಯನ್ನು ಶೀಘ್ರದಲ್ಲಿಯೇ ಸುಧಾರಿಸಲಾಗುವುದು ಎಂದರು.
ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿದರು.
ಸಾನಿಧ್ಯವನ್ನು ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಮಣೂರದ ಸಂಗಯ್ಯ ಹಿರೇಮಠ, ಜೈನಾಪೂರದ ಸಿದ್ದಲಿಂದ ಸ್ವಾಮೀಜಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಮಣೂರ ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಬಸಪ್ಪ ಕಾರಜೋಳ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಸುರೇಶ ಹಾರಿವಾಳ, ನೀಲು ನಾಯಕ, ಜಗದೀಶ ಕೊಟ್ರಶೆಟ್ಟಿ, ಕಲ್ಲು ಸೊನ್ನದ, ಪಿ.ವೈ. ಡೆಂಗಿ, ಎಸ್.ಎಂ.ಹಂಗರಗಿ, ಎಸ್.ಬಿ.ಹೊಸಮನಿ, ಜಿ.ಎ.ಈಳಗೇರ, ಯಲ್ಲಪ್ಪ ತಳೇವಾಡ, ಸಿದ್ದಣ್ಣ ಜುಗತಿ, ಸುಭಾಸಗೌಡ ಪಾಟೀಲ, ರಾಮಣ್ಣ ಹೊಸಮನಿ, ಸಂತೋಷ ಲಮಾಣಿ, ರಾಘವೇಂದ್ರ ಲಮಾಣಿ, ಸಹಕಾರಿ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಉಣ್ಣಿಭಾವಿ, ನಿರ್ದೇಶಕರಾದ ಮಲ್ಲಿಕಾರ್ಜುನ ಜುಗತಿ, ನಾಮದೇವ ಲಮಾಣಿ, ಹಣಮಂತ ಜುಗತಿ, ನಾನಪ್ಪ ಲಮಾಣಿ, ವಿಜಯಲಕ್ಷ್ಮೀ ಹಿರೇಮಠ, ರೇಣುಕಾ ಕಲಬುರ್ಕಿ ಇತರರು ಇದ್ದರು. ವೈ.ಸಿ.ಕಾರಜೋಳ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ಪ್ರಾಸ್ತವಿಕವಾಗಿ ಮಾತನಾಡಿ, ನಿರೂಪಿಸಿದರು. ರಾಜು ಹೊಸಮನಿ ವಂದಿಸಿದರು.

