ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿವನು ಯಜ್ಞವನ್ನು ಮಾಡುತ್ತಿರುವಾಗ ಯಜ್ಞ ಕುಂಡದ ಅಗ್ನಿ ಶಿವನ ಮುಖಕ್ಕೆ ಸ್ಪರ್ಶಿಸಿ, ಶಿವನ ಮುಖವು ಅಶುಚಿಯಾಗಿ ಕಾಣಿಸುತ್ತದೆ, ಅದನ್ನು ಗಮನಿಸಿದ ಪಾರ್ವತಿ ಅಶುಚಿಯಾಗಿರುವುದನ್ನು ಸರಿಪಡಿಸಿಕೊಳ್ಳಲು ತಿಳಿಸುತ್ತಾಳೆ, ಆಗ ಶಿವನು ತನ್ನ ಬಲಗಣ್ಣಿನಿಂದ ವಿವಿಧ ಸಲಕರಣೆಗಳೊಂದಿಗೆ ಒಬ್ಬ ಮಹಾಪುರುಷನನ್ನು ಸೃಷ್ಟಿಸುತ್ತಾನೆ. ಆತ ಆಯುಷ್ಕರ್ಮದಿಂದ ಶಿವನ ಮುಖವನ್ನು ಸುಂದರಗೊಳಿಸುತ್ತಾನೆ. ಆತನೇ ಸವಿತಾ ಮಹರ್ಷಿ ಹುಣಸಗಿಯ ಮೊರಾರ್ಜಿ ದೇಸಾಯಿ ವಸತಿಶಾಲೆ ಶಿಕ್ಷಕ ಅಶೋಕ ರಾಜನಕೋಳೂರ ಹೇಳಿದರು.
ಸಿಂದಗಿ ತಾಲೂಕು ಆಡಳಿತ ಸಭಾಂಗಣದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಾತನಾಡಿದ ಅವರು, ಶಿವನು ಸಂತುಷ್ಟನಾಗಿ ಮೂರು ವರಗಳನ್ನು ಕೊಡುತ್ತಾನೆ. ಆಯುಷ್ಕರ್ಮ, ಸಂಗೀತ, ಆಯುರ್ವೇದ ವೈದ್ಯ ಪದ್ಧತಿ. ವೇದಗಳಲ್ಲಿ ಸವಿತೃ ಎಂಬ ಪದ ಉಲ್ಲೇಖಿಸಲಾಗಿದೆ. ಸೂರ್ಯನಿಗೆ ಇನ್ನೊಂದು ಹೆಸರೇ ಸವಿತೃ, ಸವಿತಾ ಮಹರ್ಷಿ ಸಾಕ್ಷಾತ್ ಸೂರ್ಯನಾರಾಯಣವೆಂದೆ ಹೇಳಲಾಗುತ್ತದೆ. ಸಾಮವೇದದ ಕರ್ತೃ ಸವಿತಾ ಮಹರ್ಷಿ ಹಾಗೂ ಸವಿತಾ ಮಹರ್ಷಿಯ ಮಗಳು ಗಾಯತ್ರಿದೇವಿ ಎಂದು ನಂಬಲಾಗಿದೆ. ಸೂರ್ಯನಾರಾಯಣನ ಉಪಾಸಕರಿಗೆ ಸವಿತಾ ಜನಾಂಗದವರು ಎನ್ನುತ್ತಾರೆ. ಮನುಷ್ಯರ ಪಾಪ ಕರ್ಮಗಳು ಕೇಶದಲ್ಲಿ ವಾಸವಾಗಿರುತ್ತವೆ, ಹಿಂದೂಗಳು ತೀರ್ಥ ಕ್ಷೇತ್ರಗಳಿಗೆ ಹೋಗಿ ಕೇಶ ಮುಂಡನ ಮಾಡಿಕೊಳ್ಳುವುದು ವಾಡಿಕೆ. ಸವಿತಾ ಸಮಾಜದವರ ಸೇವೆ ಅನನ್ಯ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಸವಿತಾ ಸಮಾಜದ ತಾಲೂಕಾಧ್ಯಕ್ಷ ಮಹಾಂತೇಶ ನಾವಿ, ನೀಲಕಂಠ ನಾವಿ, ಪರಶುರಾಮ ನಾವಿ, ಚಂದ್ರಶೇಖರ ದೇವರೆಡ್ಡಿ, ಸಿದ್ದಲಿಂಗ ನಾವಿ, ಅರವಿಂದ ನಾವಿ, ರಾಘವೇಂದ್ರ ಹಡಪದ, ಶಿವಕುಮಾರ ನಾವಿ, ಸಂಜು ಹಡಪದ, ಶರಣಪ್ಪ ಹಾರಣಗೇರಾ ಸೇರಿದಂತೆ ಸಮಾಜದ ಮುಖಂಡರು, ಯುವಕರು ಮತ್ತು ಮಹಿಳೆಯರು ಇದ್ದರು.

