ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತ ದೇಶದ ಭವಿಷ್ಯ ರೂಪಿಸುವವರು ಯುವ ಜನತೆ, ಯುವ ಜನತೆಯ ಭವಿಷ್ಯ ರೂಪಿಸುವವರು ಶಾಲಾ ಕೊಠಡಿಯಲ್ಲಿ ಶಿಕ್ಷಕರು ಎಂದು ಎಚ್.ಜಿ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲೆ ಹಾಗೂ ಡಿ.ಎಸ್. ಪಾಟೀಲ್ ಪಪೂ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭದಲ್ಲಿ ಎಚ್.ಜಿ ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವ-ಹಿತಾಸಕ್ತಿಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತಂದೆ-ತಾಯಿಯ ಕನಸು, ಶಿಕ್ಷಕರ ಮಾರ್ಗದರ್ಶನ ಮೈಗೂಡಿಸಿಕೊಂಡು ಮುನ್ನುಗ್ಗಿ ಬೆಟ್ಟದಂತ ಕಷ್ಟ ಮೇಣದ ಬತ್ತಿಯಂತೆ ಕರಗಿ ಹೋಗುತ್ತದೆ. ನಿಮ್ಮ ಜೀವನದ ಯಶಸ್ಸು ತಾನಾಗಿಯೇ ಒದಗಿಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕುರಿ ಕಾಯುವ ಕುರಿಗಾಹಿ ತೇನಸಿಂಗ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿ ಸಾಧನೆಗೈದದ್ದು ಇಲ್ಲಿ ಸ್ಮರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಲಭೀಮ ಹೀರೊಳ್ಳಿ, ಸದಸ್ಯರಾದ ಸಿದ್ದಯ್ಯ ಸ್ಥಾವರಮಠ ಪ್ರಾಚಾರ್ಯ ಈರಣ್ಣ ಪಡಶೆಟ್ಟಿ, ಪ್ರೌಢಶಾಲಾ ಮುಖ್ಯಗುರು ರಮೇಶ ಬಿರಾದಾರ, ರಾಜಶೇಖರ್ ಕೊಲ್ಲೂರ್, ಕಾಲೇಜ್ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ವರ್ಷಾ ನಂದ್ಯಾಳ, ಹೈಸ್ಕೂಲ್ ಪ್ರತಿನಿಧಿ ಲಕ್ಷ್ಮಿ ಚೌದರಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಪನ್ಯಾಸಕ ಮಂಜುನಾಥ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.

