ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವ ಇದೇ ದಿ:೧೦.೧೧.೧೨ ರಂದು ಜರುಗಲಿದೆ.
ನಗರದ ಉಕ್ಕಲಿ ರಸ್ತೆಯಲ್ಲಿರುವ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಬೃಹನ್ಮಠ ಮತ್ತು ವಿಶ್ವಶಾಂತಿ ಪೀಠದಲ್ಲಿ ದಿ:೧೦ ರಂದು ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶ್ರೀಗಳು ಮಹಾಸಂಸ್ಥಾನ ಬೃಹನ್ಮಠ ಜಾಲಹಳ್ಳಿ , ವಿಜಯಪುರ ಇವರ ಸನ್ನಿಧಾನದಲ್ಲಿ ಸೋಮವಾರ ಬೆಳಿಗ್ಗೆ ದ್ವಾದಶ ಜ್ಯೋತಿರ್ಲಿಂಗ, ನವಗ್ರಹ ಹಾಗೂ ನವದುರ್ಗೆಯರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು.
ಬೆಳಿಗ್ಗೆ ೧೦ ಗಂಟೆಗೆ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ನಂತರ ೧೧.೩೦ ಗಂಟೆಗೆ ಶಾಲಾ ಮಕ್ಕಳಿಗಾಗಿ ರಂಗೋಲಿ ಹಾಗೂ ಹಗ್ಗದ ಆಟದ ಸ್ಪರ್ಧೆ ಜರುಗಲಿವೆ. ಸಾಯಂಕಾಲ ೬ ಗಂಟೆಗೆ ಓಂಕಾರ ಧ್ವಜಾರೋಹಣ. ಸಂಜೆ ೭.೩೦ ಗಂಟೆಗೆ ಜೀವನ ಜಾಗೃತಿ ಸಂಗೋಷ್ಠಿ ನಡೆಯಲಿದೆ.
ದಿ:೧೧ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳು. ಸಾಯಂಕಾಲ ೩ ಗಂಟೆಗೆ ಜಾಗೃತಿ ಕಾಲೋನಿಯಿಂದ ಶ್ರೀಮಠದವರೆಗೆ ಜಯಶಾಂತಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ. ಸಂಜೆ ೭ ಗಂಟೆಗೆ ಧರ್ಮಸಭೆ ಜರುಗಲಿದೆ.
ದಿ:೧೨ ರಂದು ಬುಧವಾರ ಬೆಳಿಗ್ಗೆ ೭.೩೦ ಗಂಟೆಗೆ ಮಹಾರುದ್ರಯಜ್ಞ , ೮.೩೦ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ದೀಕ್ಷೆ ೧೦.೩೦ಕ್ಕೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ಮಧ್ಯಾಹ್ನ ೨ ಗಂಟೆಗೆ ಶಿವಾನುಭವಗೋಷ್ಠಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ. ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಲಾಭಾರ ಸೇವೆ ನಡೆಯಲಿವೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲೆ ಹಾಗೂ ನಾಡಿನ ಪ್ರಮುಖ ಮಠಾಧೀಶರು, ರಾಜಕೀಯ ಚಿಂತಕರು, ಧುರೀಣರು, ಖ್ಯಾತ ವೈದ್ಯರು, ವಿವಿಧ ರಂಗಗಳ ಮಹನೀಯರು, ಭಕ್ತವೃಂದದವರು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

