ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ ೧೩೩ ನೆಯ ಜಯಂತೋತ್ಸವ | ‘ಅಮರಸ್ವರ ಸಮಾರೋಹ’
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಗದಗ ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಕುರಿತಾಗಿ ಹುಬ್ಬಳಿ ಧಾರವಾಡ ಪ್ರದೇಶದಲ್ಲಿ ಯಾವುದೇ ಸ್ಮಾರಕವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗ ಬೇಕು ಎಂಬ ಬೇಡಿಕೆ ಈಡೇರಿಲ್ಲ. ಈಗ ನಾವು ಸ್ಮಾರಕ ಮತ್ತು ಅಧ್ಯಯನ ಪೀಠದೊಂದಿಗೆ ಗದುಗಿನಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಷ್ಟ ಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕಲಾವಿಕಾಸ ಪರಿಷತ್ ಸಂಸ್ಥಾಪಕ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ಹೇಳಿದರು.
ಅವರು ಕಲಾ ವಿಕಾಸ ಪರಿಷತ್ತು ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ೧೩೩ ನೆಯ ಜಯಂತೋತ್ಸವ ಅಮರಸ್ವರ ಸಮಾರೋಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ, ಹಿರಿಯ ರಂಗ ನಿರ್ದೇಶಕಿ, ಗಾಯಕಿ ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಕವಿವಿ ಲಲಿತಕಲಾ ಹಾಗೂ ಸಂಗೀತ ಮಾಹಾವಿದ್ಯಾಲಯ, ಪ್ರಾಧ್ಯಾಪಕ ಡಾ. ಎ. ಎಲ್. ದೇಸಾಯಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಜೀವನ ಸಾಧನೆ ಸಂದೇಶ ಕುರಿತಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ, ಬೆಂಗಳೂರಿನ ಡಾ. ಗೋಪಾಲ ಕೆ. ರಾಯಚೂರ. ಧಾರವಾಡದ, ಡಾ. ಪರಶುರಾಮ ಕಟ್ಟಿಸಂಗಾವಿ. ಹಳಿಯಾಳದ ಶ್ರೀಮತಿ ಸುಮಾ ಹಡಪದ, ಡಂಬಳದ ಬಸವರಾಜ ಎನ್. ಸಿದ್ದಣ್ಣನವರ ಜ್ಞಾನ ಜ್ಯೋತಿ ಕಲಾ ಬಳಗ, ಹುಬ್ಬಳ್ಳಿ. ಶ್ರೀ ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ, ಇಟ್ಟಿಗಿ. ಸುಸ್ವರ ಸಂಗೀತ ವಿದ್ಯಾ ಸಂಸ್ಥೆ, ದಾಂಡೇಲಿ. ಶ್ರೀ ದುರ್ಗಾದೇವಿ ನಾಟ್ಯ ಶಾಲೆ, ಹಳಿಯಾಳ. ಇವರುಗಳಿಗೆ, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ‘ಸುವರ್ಣ ಸಿರಿ ಸಮ್ಮಾನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಸವರಾಜ ಹಡಪದ ಸರ್ವರಿಗೂ ಸ್ವಾಗತಿಸಿದರು. ಸುಮಂಗಲಾ ಚಕ್ರಸಾಲಿ ಹಳಿಯಾಳ ನಿರೂಪಣೆ ಮಾಡಿ ವಂದನಾರ್ಪಣೆ ಸಲ್ಲಿಸಿದರು.
’ಅಮರಸ್ವರ ಸಮಾರೋಹ’ ಉದ್ಘಾಟನೆ
ಬೆಳಗ್ಗೆ, ‘ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ ೧೩೩ ನೆಯ ಜಯಂತೋತ್ಸವ ‘ಅಮರಸ್ವರ ಸಮಾರೋಹ’
ಉದ್ಘಾಟನೆಯನ್ನು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಡಾ. ಶಾಂತಾರಾಮ ಹೆಗಡೆ ಇವರು ತಬಲಾ ವಾದ್ಯ ನುಡಿಸುವ ಮೂಲಕ ಉದ್ಘಾಟನೆ ಮಾಡಿ, ಹಿಂದೂಸ್ಥಾನಿ ಶಾಸ್ತ್ರೀ ಯ ಸಂಗೀತ ಕ್ಷೇತ್ರಕ್ಕೆ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು ನೀಡಿದ ಕೊಡುಗೆ ಸ್ಮರಣೀಯ. ಕರ್ನಾಟಕಿ ಸಂಗೀತದ ಪ್ರಭಾವದ ಕಾಲದಲ್ಲಿ ಹಿಂದೂಸ್ತಾನಿ ಶಾಸ್ತ್ರೀ ಯ ಸಂಗೀತವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದವರು ಪಂ. ಪಂಚಾಕ್ಷರಿ ಗವಾಯಿಗಳವರು ಎಂದರಲ್ಲದೆ… ಪಂಚಾಕ್ಷರಿ ಗವಾಯಿಗಳವರಿಗೆ ಉಭಯ ಸಂಗೀತ ಶಿಕ್ಷಣ ಕೊಡಿಸುವಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಪಾತ್ರ ದೊಡ್ಡದಾಗಿದೆ. ದೇಶದ ಪ್ರಸಿದ್ಧ ಗಾಯಕರನ್ನು ಕರೆಸಿಕೊಂಡು ಶಿಕ್ಷಣವನ್ನು ಕೊಡಿಸುವ ಮೂಲಕ ತನ್ನಂತೆ ಇರುವ ಅಂದ ಅನಾಥರ ಬಾಳಿಗೆ ಬೆಳಕಾಗುವಂತೆ ಆಶಿರ್ವದಿಸಿದರು. ಅವರ ಕೃಪೆಯಿಂದ ಕರ್ನಾಟಕ ಮಾತ್ರವಲ್ಲ ದೇಶ ವಿದೇಶದಲ್ಲಿಯೂ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರಂಪರೆ ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಇವರು ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನು ನುಡಿಯುತ್ತ, ನಮ್ಮ ಸ್ವರ ಅಮರವಾಗ ಬೇಕು, ಸ್ವರ ಆರಾಧನೆಯಾಗ ಬೇಕು ನಮ್ಮ ಸ್ವರ ಅಮರತ್ವ ಪಡೆಯಬೇಕು ಎಂದರಲ್ಲದೆ; ಗಾನಯೋಗಿ ಪಂಚಾಕ್ಷರಿ ಗವಾಯಿಗಳವರು ನಡೆದಾಡುವ ಸಂಗೀತ ವಿಶ್ವವಿದ್ಯಾಲಯವಾಗಿದ್ದರು ಎಂದು ಹೇಳುತ್ತಾ ಧಾರವಾಡದಲ್ಲಿ ಸಂಗಿತ ಪರಂಪರೆಬೆಳಸಿದ ಭಾಸ್ಕರ ಬುವಾ, ಸಿತಾರ ರತ್ನ ರಹಿಮತ್ ಖಾನ್ ಭೀಮಸೇನ ಜೋಷಿ ಗಂಗೂಬಾಯಿ ಹಾನಗಲ್ ಇವರುಗಳ ಕೊಡುಗೆ ಸ್ಮರಿಸಿದರು.
ಧಾರವಾಡದ ಶ್ರೀ ಸಾಯಿ ಪ. ಪೂ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷರಾದ ಅತಿಥಿ, ಡಾ. ವೀಣಾ ಬಿರಾದಾರ ಮಾತನಾಡಿದರು. ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಸಂಸ್ಥಾಪಕರು ಕಲಾ ವಿಕಾಸ್ ಪರಿಷತ್, ಗದಗ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವಿಕಾ ಕೆ. ಜೋಗಿ, ಹೊಸಪೇಟೆ ಸರ್ವರಿಗೂ ಸ್ವಾಗತಿಸಿದರು. ಸ್ವರ ಸಂವಾದಿನ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಕುಮಾರಿ ಐಶ್ವರ್ಯ ಅಮೂಲ್ಯ ಹಡಪದ ಸಹೋದರಿಯರು ಸ್ವಾಗತ ನೃತ್ಯ ಸೇವೆ ಸಲ್ಲಿಸಿದರು.
ಪ್ರೊ. ಪಿ. ಆರ್. ನಾಗರಾಳ ನಿರೂಪಣೆ ಮಾಡುವರು ಡಾ. ಎ. ಎಲ್. ದೇಸಾಯಿ ವಂದನಾರ್ಪಣೆ ಮಾಡಿದರು. ಆಮಂತ್ರಿತ, ಆಹ್ವಾನಿತ ಮತ್ತು ಪ್ರಶಸ್ತಿ ಪುರಸ್ಕೃತ ಕಲಾವಿದರು ದಿನಪೂರ್ತಿ ಸಂಗೀತ ನೃತ್ಯ ಕಲಾ ಸೇವೆ ಸಲ್ಲಿಸಿದರು.
ರಾಷ್ಟೀಯ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ, ಖ್ಯಾತ ತಬಲಾ ವಾದಕರು ಧಾರವಾಡ ಆಕಾಶವಾಣಿ ನಿಲಯದ ಕಲಾವಿದರು ಆಗಿರುವ ಕಲಬುರ್ಗಿಯ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ) ಇವರಿಗೆ, ಹಾಗೂ ಧಾರವಾಡದ ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆಯಾದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಮತ್ತು ಶಿರಸಿಯ, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿಯಾದ ಯಕ್ಷ ಕಲಾಸಂಗಮ ಕಲಾ ಪೋಷಕ ಮತ್ತು ಕಲಾ ಶಿಕ್ಷಣ ಸಂಸ್ಥೆಗಳಿಗೆ ಕಲಾ ವಿಕಾಸ ಪರಿಷತ್ನ ೨೦೨೩-೨೪ ನೆಯ ಸಾಲಿನ ವಾರ್ಷಿಕ ಪ್ರಶಸ್ತಿ ‘ಗಾನಯೋಗಿ ಪಂಚಾಕ್ಷರಿ ಅನುಗ್ರಹ’ ರಾಷ್ಟೀಯ ಪ್ರಶಸ್ತಿ ಪ್ರದಾನಿಸಲಾಯಿತು.