ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿಭಾವಗಳನ್ನು ಜಾಗೃತಿಗೊಳಿಸುವುದರ ಜೊತೆಗೆ ಐಕ್ಯತೆಯನ್ನುಂಟು ಮಾಡುತ್ತವೆ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ ೧೧ ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಜಾತ್ರೆಯ ಅಂಗವಾಗಿ ಧರ್ಮಸಭೆ, ನಾಟಕ, ರಸಮಂಜರಿ, ಡೋಳ್ಳಿನ ಪದ, ಭಾರ ಎತ್ತುವ ಸ್ಪರ್ಧೆ ಸಹಿತ ಹತ್ತುಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ ಮಾತನಾಡಿ, ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಸತತ ೧೧ನೇ ವರ್ಷದಲ್ಲಿ ಯಶಸ್ವಿಯಾಗಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಸಮಯೋಚಿತ ಹಾಗೂ ಅನುಕರಣೀಯ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ಗಾಯಕ ಸಿದ್ಧಯ್ಯಸ್ವಾಮಿ ಪಡದಹಳ್ಳಿ, ತಬಲಾ ವಾದಕ ಮಲ್ಲಿಕಾರ್ಜುನ ಜೇವರಗಿ, ಸಂಘಟಕ ನಿಂಗು ಯಂಭತ್ನಾಳ, ಬಾಬು ಸೌದಿ, ಕಾಶೀನಾಥ ರಾಮಗೊಂಡ, ಬಸವರಾಜ ಕುಂಬಾರ ಶ್ರೀಶೈಲ ಸೌದಿ, ಜಟ್ಟೆಪ್ಪ ಪೂಜಾರಿ ಸಹಿತ ಮಾಲಾಧಾರಿಗಳು, ಭಕ್ತರು ಇದ್ದರು.