ವಿಜಯಪುರ ಪೋಲೀಸರ ಸಾಹಸ | ಮೂವರು ದರೋಡೆಕೋರರ ಬಂಧನ | ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ | ಜನರಿಂದ ವ್ಯಾಪಕ ಪ್ರಶಂಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಮತ್ತು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿ ಜನರ ನಿದ್ದೆಗೆಡಿಸಿದ್ದ ಸುಲಿಗೆ / ದರೋಡೆ ಆರೋಪಿತರನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಐಪಿಎಸ್ ಅವರು ಶನಿವಾರ ಮಾಹಿತಿ ನೀಡಿದ್ದಾರೆ.
ಸುಲಿಗೆ/ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ
ಬಂಧಿತ ಮೂವರು ಆರೋಪಿತರೂ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತದ ಏಕತಾ ನಗರದವರಾಗಿದ್ದಾರೆ.
೧) ಸುರೇಶ ವಿಶ್ವಲ ತಂದೆ ಮದುಕರ ಚವ್ಹಾಣ (42 ವರ್ಷ), ೨) ಸೂರಜ್ ತಂದೆ ತುಳಸಿರಾಮ್ ಚವ್ಹಾಣ (32 ),೩) ಆಕಾಶ ಅಕ್ಷಯ ತಂದೆ. ಸುಖದೇವ ರಾವತ್ (31 ವರ್ಷ) ಬಂಧಿತ ಆರೋಪಿತರು.
ದಿನಾಂಕ: 16.01.2025 ರಂದು ರಾತ್ರಿ 00.45 ಗಂಟೆಯಿಂದ 01.00 ಗಂಟೆಯ ನಡುವಿನ ಅವಧಿಯಲ್ಲಿ ವಿಜಯಪುರ ನಗರದ ಜೈನಾಪುರ ಲೇಔಟ್ನಲ್ಲಿ ಒಂದು ಮನೆಗೆ 04 ಜನ ಸುಲಿಗೆಕೋರರು ನುಗ್ಗಿ ಮನೆಯ ಮುಖ್ಯ ಬಾಗಿಲನ್ನು ಮುರಿದು, ಒಳಗೆ ನುಗ್ಗಿ ಮನೆಯ ಮಾಲೀಕರಾದ ಸಂತೋಷ ಕಾನಾಳ ಎಂಬುವವರಿಗೆ ಚಾಕುವಿನಿಂದ ಇರಿದು, ಒಂದನೇಯ ಅಂತಸ್ತಿನಿಂದ ಕೆಳಗೆ ಕೆಡವಿ ಗಾಯಪಡಿಸಿ, ನಂತರ ಅವರ ಪತ್ನಿಯ ಕೊರಳಿನಲ್ಲಿದ್ದ 15 ಗ್ರಾಂ. ಬಂಗಾರದ ತಾಳಿಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಭಾಗ್ಯಜ್ಯೋತಿ ಸಂತೋಷ ಕಾನಾಳ, ಸಾ: ವಿಜಯಪುರ ಇವರು ನೀಡಿದ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆಯ ಗುನ್ನಾ ನಂ: 07/25 ಕಲಂ: 311 ಬಿ.ಎನ್.ಎಸ್-2023 ಅಡಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಗಾಂಧಿಚೌಕ ಪೊಲೀಸ್ ಠಾಣೆ ಗುನ್ನಾ ನಂ: 02/25 ಕಲಂ: 309(4) ಬಿಎನ್ಎಸ್-2023 ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 15/25 ಕಲಂ: 309(4) ಸಹ ಕಲಂ. 3(5) ಬಿ.ಎನ್.ಎಸ್-2023 ಆಡಿ ಒಟ್ಟು 03 ಸುಲಿಗೆ ಪ್ರಕರಣಗಳು ದಾಖಲಾಗಿದ್ದವು.
ನಗರದ ಜನತೆರಲ್ಲಿ ತಲ್ಲಣ ಸೃಷ್ಟಿಸಿದ್ದ ಈ ಪ್ರಕರಣಗಳ ಪತ್ತೆ ಕುರಿತು ಲಕ್ಷ್ಮಣ ನಿಂಬರಗಿ, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ, ಬಸವರಾಜ ಯಲಿಗಾರ, ಡಿಎಸ್ಪಿ ವಿಜಯಪುರ ನಗರ ಉಪ-ವಿಭಾಗ, ಶ್ರೀ ಸುನೀಲ ಕಾಂಬಳೆ, ಡಿಎಸ್.ಪಿ ಸಿಇಎನ್ ಪಿಎಸ್, ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ, ಪಿಎಸ್.ಐ ಗಳಾದ ರಾಜು ಮಮದಾಪೂರ, ಸೋಮೇಶ ಗೆಜ್ಜಿ, ವಿನೋದ ಪೂಜಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.
ಸುಲಿಗೆ/ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮೂವರೂ ಆರೋಪಿತರನ್ನು ಬಂಧಿಸಿ, ದಿನಾಂಕ: 29.01,2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣವು ಪ್ರಸ್ತುತ ತನಿಖೆಯಲ್ಲಿದ್ದು, ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ & ಕಳ್ಳಭಟ್ಟಿ ಸರಾಯಿ ವಶ | ಮೂವರು ವಶಕ್ಕೆ
ವಿಜಯಪುರ: ನಗರದಲ್ಲಿ ಗಾಂಜಾ ಮತ್ತು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಇವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 60.000/- ಮೌಲ್ಯದ 600 ಗ್ರಾಂ, ದಷ್ಟು ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಫೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಐಪಿಎಸ್ ಅವರು ಶನಿವಾರ ಮಾಹಿತಿ ನೀಡಿದ್ದು, ದಿನಾಂಕ: 01.02.2025 ರಂದು ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹರಣಶಿಖಾರಿ ಕಾಲೊನಿಯಲ್ಲಿ ಆಕ್ರಮವಾಗಿ ಗಾಂಜಾ ಹಾಗೂ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಸುನೀಲ ಕಾಂಬಳೆ, ಡಿಎಸ್ಪಿ ಸಿಇಎನ್, ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್, ರಮೇಶ ಆವಜಿ, ಪಿಐ ಸಿಇಎನ್, ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ರವರ ನೇತೃತ್ವದಲ್ಲಿ, ಗೋಲಗುಂಬಜ್ ಠಾಣೆಯ ಪಿಎಸ್ಐ ಎಂ.ಡಿ ಫೋರಿ, ಎಚ್.ಡಿ ವಾಲಿಕಾರ, ಆದರ್ಶನಗರ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಜನರು ಹರಣಶಿಖಾರಿ ಕಾಲೋನಿಯಲ್ಲಿ ದಾಳಿ ನಡೆಸಿ ಅನಧೀಕೃತವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿತರಾದ
1) ಆನಂದ ಮೊಹನ ಚವ್ಹಾಣ, 37 ವರ್ಷ, ಸಾ: ಹರಣತಿಕಾರಿ ಕಾಲೋನಿ, ವಿಜಯಪುರ 2 ) ರಿಯಾಜ ಅಬ್ದುಲ್ ನರಸಣಗಿ, 23 ವರ್ಷ, ಸಾ: ಚಪ್ಪರಬಂದ ಓಣಿ, ರಿಮ್ಯಾಂಡ ಹೊಮ್ ಹತ್ತಿರ, ವಿಜಯಪುರ ಇವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 60.000/- ಮೌಲ್ಯದ 600 ಗ್ರಾಂ, ದಷ್ಟು ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ.
ಅಲ್ಲದೇ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ 3) ವಾಸು ರಾಜು ಚವ್ಹಾಣ, 25 ವರ್ಷ, ಸಾ: ಹರಣಶಿಕಾರಿ ಕಾಲನಿ, ವಿಜಯಪುರ ಈತನಿಂದ ಸುಮಾರು 110 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಹಾಗೂ ಅಬಕಾರಿ ಕಾಯ್ದೆ ಅಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.