ಲೇಖನ
– ಡಾ.ರಾಜಶೇಖರ ನಾಗೂರ ✍
(’ನಮ್ಮ ಕಥಾ ಅರಮನೆ’ ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ಕತ್ತಿಯ ಗಾಯಕ್ಕಿಂತ ಮಾತಿನ ಗಾಯ ತುಂಬಾ ಕೆಟ್ಟದ್ದು ಎನ್ನುವ ಮಾತಿನಂತೆ ಮಾತಿನ ಹರಿತ ಎಷ್ಟು ಎಂದು ಎಲ್ಲರಿಗೂ ತಿಳಿದಿರುವಂತದ್ದು. ಇದನ್ನೇ ಹನ್ನೆರಡನೇ ಶತಮಾನದಲ್ಲಿ ನಮ್ಮ ಶರಣರು ಮಾತಿನ ಕುರಿತು “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” ಎಂದಿಲ್ಲವೇ.
ಶರಣರು, ಸಂತರು, ಜ್ಞಾನಿಗಳು, ಅನುಭಾವಿಗಳು ಮಾತಿನ ಮಹತ್ವವನ್ನು ಅರಿತು ನಾಲಿಗೆಯಿಂದ ಒಳ್ಳೆಯ ನುಡಿಗಳನ್ನಾಡಿ ಜಗತ್ತಿನ ತುಂಬಾ ಜ್ಞಾನಸೌರಭವನ್ನು ಹರಡಿದ್ದಾರೆ. ಅವರ ಮಾತುಗಳು ಮಾನವ ಕುಲದ ನಂದಾ ದೀಪಗಳು.
ಬಸವಣ್ಣನ “ದಯವೇ ಧರ್ಮದ ಮೂಲವಯ್ಯಾ”,
ಬುದ್ಧನ “ಸರ್ವಂ ಕ್ಷಣಿಕಂ”,
ಮಹಾವೀರನ “ಅಹಿಂಸಾ ಪರಮೋಧರ್ಮ”,

ಶಂಕರನ “ಬ್ರಹ್ಮ ಸತ್ಯ ಜಗನ್ಮಿಥ್ಯ” ಎಂಬ ದಿವ್ಯ ನುಡಿಗಳು ನಮಗೆ ಮುತ್ತಿನಂತೆ ಅಲ್ವಾ!
ಸೂರ್ಯನ ಕಿರಣಗಳು ಮೊಗ್ಗನ್ನು ಅರಳಿಸುವಂತೆ, ದಾರ್ಶನಿಕರ ನುಡಿಗಳು, ನಮ್ಮವರ ಪ್ರೋತ್ಸಾಹಿಕ ನುಡಿಗಳು ಮೊಗ್ಗಿನಂತ ಸಂಕುಚಿತ ಮನಸ್ಸನ್ನು ಅರಳಿಸಬಲ್ಲವು. ಅಂದರೆ ಮನಸು ಅರಳಲು ಸುಂದರ ಮಾತುಗಳ ಕಾವು, ಬೆಳಕು ಬೇಕೇ ಬೇಕು. ಆಗ ಮಾತು ಮುತ್ತಾಗುತ್ತದೆ.
ನಾವಾಡುವ ಮಾತುಗಳು ನಮ್ಮ ಸುತ್ತಲೂ ಸ್ವರ್ಗವನ್ನು ಸೃಷ್ಟಿಸುವ ಹಾಗಿರಬೇಕು. ನರಕವನ್ನಲ್ಲ. ಕೆಲವರಂತೂ ಇನ್ನೊಬ್ಬರ ಬಗ್ಗೆ ಮಾತನಾಡುವುದರಲ್ಲೇ ಜೀವನ ಕಳೆದು ಶೂನ್ಯವನ್ನು ಸಂಪಾದಿಸುತ್ತಾರೆ. ಈ ಸಾಹಿತ್ಯಕ ವೇದಿಕೆಗಳಲ್ಲಿ ಅನೇಕರು ನಿಮ್ಮನ್ನು ದಾರಿ ತಪ್ಪಿಸುವ ಮಾತನಾಡಿರಬಹುದು. ಅಲ್ಲಿ ಬರೆಯಬೇಡಿ, ಇಲ್ಲಿ ಬರೆಯಬೇಡಿ ಎಂದು ಹೇಳುತ್ತಾ ನಮ್ಮ ವೇದಿಕೆಯಲ್ಲಿ ಮಾತ್ರ ಬರೆಯಿರಿ ಎಂಬ ಮಾತುಗಳು ನಿಮ್ಮ ಅನುಭವಕ್ಕೆ ಬಂದಿರಬಹುದು. ಇಂತವರ ಮಾತುಗಳು ಸಾಹಿತ್ಯಾಸಕ್ತರ ಸೃಜನಶೀಲತೆಯನ್ನು ಸಾಯಿಸುತ್ತವೆ. ಇದು ಸಾಹಿತ್ಯದ ಸೋಲು. ಯಾವ ಬರಹಗಾರ ಸ್ವತಂತ್ರವಾಗಿ ಚಿಂತನೆಯನ್ನು ಬಿತ್ತಲು ಇನ್ನೊಬ್ಬರ ಮಾತಿನ ಆದಿನಕ್ಕೆ ಒಳಪಡುತ್ತಾನೋ ಅವನ ಸಾಹಿತ್ಯದ ಸೊಗಡು ಸೊರಗಿದಂತೆಯೇ. ಇಂತಹ ನಕಾರಾತ್ಮಕ ಮಾತುಗಳು ಮೃತ್ಯುವಿಗೆ ಸಮ. ದೇವರು ಕೊಟ್ಟ ನಾಲಿಗೆಯನ್ನು ಬಿರುನುಡಿಗಳಾಡುವುದಕ್ಕೆ ಉಪಯೋಗಿಸದೇ ‘ಸೂಳ್ನೂಡಿ’ಗೆ ಅಂದರೆ ಬೆಳಕಿನಂತಹ ನುಡಿಗೆ ಉಪಯೋಗಿಸಿದರೆ ಮಾನವ ಜನ್ಮ ಸಾರ್ಥಕ.
ಈ ಕಾರಣಕ್ಕೆ ಅಲ್ಲಮರು ಮಾತೆಬುಂದು “ಜ್ಯೋತಿರ್ಲಿಂಗ” ಎಂದರೆ ಬಸವಣ್ಣನವರು “ಲಿಂಗನುಡಿ” ಎಂದಿದ್ದಾರೆ.
ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಕೊಲೆಯು
ಮಾತಿನಿಂ ಸರ್ವ ಸಂಪದವು | ಲೋಕಕ್ಕೆ
ಮಾತೇ ಮಾಣಿಕ್ಯ ಸರ್ವಜ್ಞ ||
ಎಂಬ ಮೇಲಿನ ಸರ್ವಜ್ಞನ ವಚನ ಸಾರುವುದಿಷ್ಟೇ ಮಾತೇ ಮುತ್ತು, ಮಾತೇ ಮೃತ್ಯು. ಹಾಗಾದರೆ ಮುತ್ತಿನಂತ ಮಾತುಗಳನ್ನಾಡೋಣ.
