ಲೇಖನ
– ಎಸ್ ಎಂ ಹೆಗಡೆ
ಮುಖ್ಯ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆ
ಬಸಾಲೆ
ಉದಯರಶ್ಮಿ ದಿನಪತ್ರಿಕೆ
ವಿಕಾಸದ ಹಾದಿಯಲ್ಲಿ ಮಾನವ ಪ್ರಕೃತಿಯಿಂದ ಪಡೆದುಕೊಂಡ ಅದ್ಭುತವಾದ ವರಗಳೆಂದರೆ ಯೋಚನಾ ಶಕ್ತಿ ಮತ್ತು ಮಾತನಾಡೋ ಸಾಮರ್ಥ್ಯ. ಮಂಗ,ನಾಯಿಯಂತಹ ಕೆಲವು ಪ್ರಾಣಿಗಳಿಗೆ ಸ್ವಲ್ಪ ಮಟ್ಟಿಗೆ ಯೋಚನಾಶಕ್ತಿಯಿದೆ. ತನ್ನ ಯೋಚನೆಗಳನ್ನು, ವಿಚಾರಗಳನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ಇರುವದು ಮಾನವನಿಗೆ ಮಾತ್ರ. ಮಾನವನ ಈ ಗುಣಧರ್ಮ ಇತರ ಪ್ರಾಣಿಗಳಿಂದ ಆತನನ್ನು ಪ್ರತ್ಯೇಕಿಸಿದೆಯಲ್ಲದೆ ಸಮಾಜ ಜೀವಿಯಾಗಿರುವ ಅವನಿಗೆ ಒಂದು ಉತ್ತಮ ಸಂವಹನ ಮಾಧ್ಯಮವಾಗಿದೆ.
ಪ್ರಾಚೀನ ಕಾಲದಲ್ಲಿ ಮಾತಿಗೆ ತುಂಬಾ ಪ್ರಾಧಾನ್ಯತೆ ಇತ್ತು. ‘ಮಾತು ಕೊಡುವದು’ ಎನ್ನುವ ಪದ್ಧತಿ ರೂಢಿಯಲ್ಲಿತ್ತು. ಮದುವೆ, ನೆಂಟಸ್ತನದಂತಹ ಕೆಲವು ವ್ಯವಹಾರಗಳಲ್ಲಿ ಮಾತೇ ಪ್ರಧಾನವಾಗಿತ್ತು. ವೀಳ್ಯದೆಲೆಯಲ್ಲಿ ನಾಣ್ಯವನ್ನಿಟ್ಟು ಮಾತುಕೊಟ್ಟರೆಂದರೆ ಮುಗಿಯಿತು ದೇವರ ಮುಂದೆ ಪ್ರಮಾಣ ಮಾಡಿದಂತೆ ಎಂದು ಪರಿಗಣಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದರು. ವ್ಯವಹಾರ ಜ್ಞಾನದ ಜೊತೆಗೆ ಉತ್ತಮವಾದ ಮಾತಿನಕಲೆಯನ್ನು ಬಲ್ಲವರನ್ನು ಊರಿನ ಗ್ರಹಸ್ಥರು ಎನ್ನಲಾಗುತ್ತಿತ್ತು. ತಮ್ಮ ವ್ಯವಹಾರ ಸೂಕ್ಷ್ಮತೆ ಮಾತಿನ ಚಾತುರ್ಯದ ಮೂಲಕ ಊರಿನ ಎಷ್ಟೋ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು.
‘ಬಾಯಿ ಇದ್ದರೆ ತಾಯಿ ಇದ್ದಂತೆ’ ಹೇಳುವಂತೆ ಚೆನ್ನಾಗಿ ಮಾತನಾಡಬಲ್ಲವನು ಎಲ್ಲಿ ಬೇಕಾದರೂ ಹೋಗಿ ಬದುಕಬಲ್ಲ. ಸ್ವದೇಶೇ ಪೂಜ್ಯತೇ ರಾಜಾ, ವಿಧ್ವಾನ್ ಸರ್ವತ್ರ ಪೂಜ್ಯತೆ’ ಎನ್ನುವಂತೆ ರಾಜನಿಗೆ ತನ್ನ ಸಾಮ್ರಾಜ್ಯದಲ್ಲಿ ಮಾತ್ರ ಮನ್ನಣೆಯಿದ್ದರೆ ಉತ್ತಮ ಮಾತುಗಾರನನ್ನು ಲೋಕವೇ ಗೌರವಿಸುತ್ತದೆ.
ಚಿಕಾಗೋದಲ್ಲಿ ಮಾತನಾಡುವಾಗ ‘ಸಹೋದರ ಸಹೋದರಿಯರೇ..’ ಎಂದು ಸಂಬೋಧಿಸುವುದರಂದಿಗೆ ಆರಂಭಿಸಿ ಸ್ವಾಮಿ ವಿವೇಕಾನಂದರವರು ಇಡೀ ಅಮೇರಿಕಾವನ್ನು ತಮ್ಮ ಮಾತಿನಿಂದ ಮಂತ್ರಮುಗ್ಧಗೊಳಿಸಲಿಲ್ಲವೇ! “ನಾವಾಡುವ ಮಾತು ಹೀಗಿರಲಿ ಗೆಳೆಯ ಮೃದುವಚನ ಮೂರ್ಲೋಕ ಗೆಲ್ಲುವದು ತಿಳಿಯ…”ಎಂದು ಕವಿ ಚೆನ್ನವೀರ ಕಣವಿಯವರು ಹೇಳಿದಂತೆ ನಾವಾಡುವ ಮಾತಿನಲ್ಲಿ ನಯ ವಿನಯ ಮೇಳೈಸಿದ್ದರೆ ಅದು ಕೇಳುಗರ ಹೃದಯವನ್ನು ಗೆಲ್ಲುತ್ತದೆ.

‘ನುಡಿದರೆ ಮುತ್ತಿ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮನೆಂತೊಲಿವನಯ್ಯ’
ಎಂದು ಬಸವಣ್ಣನವರು ಹೇಳಿದಂತೆ ಆಡುವ ಮಾತುಗಳು ಅವಿಚ್ಛಿನ್ನವಾಗಿರಬೇಕು, ಆಡುವ ಪೂರ್ವದಲ್ಲಿ ಆ ವಿಷಯದ ಕುರಿತು ಆಳವಾದ ಜ್ಞಾನವಿರಬೇಕು. ಅಂದಾಗಲೇ ಹೇಳಬೇಕಾದ ವಿಷಯದ ಮೇಲೆ ಮಾಣಿಕ್ಯದಂತೆ ಸಾಕಷ್ಟು ಬೆಳಕನ್ನು ಚೆಲ್ಲಲು ಸಾಧ್ಯವಾಗುತ್ತದೆ.
ಆಡುವ ಮಾತು ಸ್ಫಟಿಕದಂತೆ ಪಾರದರ್ಷಕವಾಗಿರಬೇಕು, ಇಂತಹ ಮಾತುಗಳಿಂದ ಜನರು ನಮಗೆ ಹತ್ತಿರವಾಗುತ್ತ ಹೋಗುತ್ತಾರೆ. ‘ಹೇಳೋದೆಲ್ಲ ಕಾಶಿಕೆಂಡ ತಿನ್ನೋದೆಲ್ಲ ಮಸಿಕೆಂಡ’ ಎನ್ನುವ ನಾಣ್ಣುಡಿಯಂತೆ ನುಡಿ ನಡೆಯಲ್ಲಿ ವ್ಯತ್ಯಾಸವಿದ್ದರೆ ಜನರು ಮೆಚ್ಚಿಕೊಳ್ಳುವುದಿಲ್ಲ ಎನ್ನುವುದನ್ನು ಅರಿತಿರಬೇಕಾಗುತ್ತದೆ. ಅಷ್ಟೇ ಅಲ್ಲ ಅದು ಭಗವಂತನಿಗೂ ಪ್ರಿಯವಾಗಲಾರದು.
ಮಾತನಾಡಲು ಬರುತ್ತದೆ ಎಂದು ಹಿಂದು ಮುಂದೆ ವಿಚಾರಿಸದೆ ಬಾಯಿಗೆ ಬಂದಂತೆ ಮಾತನಾಡಿದರೆ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು.
” ಜಿಹ್ವಾಗ್ರೇ ವಸತೇ ಲಕ್ಷ್ಮಿ, ಜಿಹ್ವಾಗ್ರೇ ವಸತೇ ಮಿತ್ರ ಬಂಧುವಾಃ ಬಂಧನಂ ಕಾರಣಂ ಜಿಹ್ವಾಗ್ರೇ ಮರಣಂ ಪ್ರಾಪ್ತೇ’
ಎನ್ನುವ ಸುಭಾಷಿತದಂತೆ ಒಳ್ಳೆಯ ಮಾತುಗಳಿಂದ ಸಿರಿ ಸಂಪತ್ತು ಮಿತ್ರರು ಬಂಧು ಬಾಂಧವರನ್ನು ಹೇಗೆ ಸಂಪಾದಿಸಲು ಸಾಧ್ಯವಿದೆಯೋ ಅದೇ ರೀತಿ ವಿಚಾರ ಶೂನ್ಯ ಮಾತುಗಳಿಂದ ದಿನದಿಂದ ದಿನಕ್ಕೆ ಶತೃುಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಅಚ್ಚರಿಯಿಲ್ಲ. ಬಾಯಿಂದ ಹೊರಬಿದ್ದ ಮಾತು ನಮ್ಮದಾಗಿರುವದಿಲ್ಲ. ಕೆಲವೊಮ್ಮೆ ಬಾಯಿತಪ್ಪಿ ಆಡಿದ ಮಾತು ಕಲಹಕ್ಕೆ ಕಾರಣವಾಗಿ ಜೀವ ಹಾನಿಯಲ್ಲಿ ಅಂತ್ಯ ಕಾಣುವದೂ ಉಂಟು.
ಇನ್ನು ಮಾತನಾಡುವದು ಗೊತ್ತಿದ್ದರಷ್ಟೇ ಸಾಲದು, ಎಲ್ಲಿ ಹೇಗೆ ಮಾತನಾಡಬೇಕು ಎಷ್ಟು ಮಾತನಾಡಬೇಕು ಎನ್ನುವುದೂ ಮುಖ್ಯವಾಗಿರುತ್ತದೆ. ಮಂಗಳಕರವಾದ ಮದುವೆ ಮನೆಯಲ್ಲಿ ಸಾವಿನ ಸುದ್ಧಿಗಳನ್ನು ಹರಡಿಕೊಂಡಿದ್ದರೆ ಸರಿಯೇ ಎನ್ನುವುದನ್ನು ವಿಚಾರಿಸಬೇಕಾಗುತ್ತದೆ. . ಮಾತನಾಡುವುದನ್ನು ನಾವು ಹೇಗೆ ಬಲ್ಲೆವೋ ಮತ್ತೊಬ್ಬರ ಮಾತನ್ನು ಕೇಳುವ ತಾಳ್ಮೆಯನ್ನು ತೋರುವುದೂ ಅಷ್ಟೇ ಪ್ರಮುಖವಾಗುತ್ತದೆ. ಆಡುವ ಮಾತಿನಲ್ಲಿ ಸ್ಪಷ್ಟತೆಯಿರಬೇಕು. ಮಾತು ಮಾತಿಗೂ ತಡವರಿಸಿದರೆ ಹೇಳಿದ್ದನ್ನೇ ತಿರುವು ಹಾಕುತ್ತಿದ್ದರೆ ಅದು ಕೇಳುಗರಿಗೆ ಬೇಸರವನ್ನುಂಟುಮಾಡುತ್ತದೆ. ಅನಾವಶ್ಯಕವಾಗಿ ದೊಡ್ಡದಾಗಿ ಅರಚುವದು, ತನ್ನನ್ನೇ ತಾನು ಹೊಗಳಿಕೊಳ್ಳುವದು ಮಾಡಿದಲ್ಲಿ ಅಂತಹವರಿಗೆ ಜನ ‘ವಾಚಾಳಿ’, ‘ಬುಡಬುಡಿಕೆ’ ಇಂತಹ ಬಿರುದುಗಳನ್ನು ನೀಡಿದರೆ ಅಚ್ಚರಿಯಿಲ್ಲ.
ವೇದಿಕೆಯ ಮೇಲೆ ಮಾತಿನ ರಥವ ಹತ್ತಿಬಿಟ್ಟು ಇಳಿಯೋದು ಹೇಗೆ ಗೊತ್ತಾಗದೆ ಮಾತು ಎಲ್ಲೆಲ್ಲೋ ಹರಿವ ರೈಲಿನಂತಾದರೆ ನಗೆಪಾಟಿಲಿಗೆ ಈಡಾಗಬೇಕಾಗುತ್ತದೆ. ವೇದಿಕೆಯಲ್ಲಿ ಮಾತನಾಡುವ ಪೂರ್ವದಲ್ಲಿ ಮಾನಸಿಕವಾಗಿ ಸಿದ್ಧತೆಯನ್ನು ಮಾಡಿಕೊಂಡಿದ್ದರೆ ಮಾತಿನ ಮೇಲೆ ಹಿಡಿತವನ್ನು ಸಾಧಿಸಿಕೊಂಡು ಹೋಗುವುದು ಸಾಧ್ಯವಾಗುತ್ತದೆ. ಆಡುವ ಮಾತುಗಳೆಲ್ಲ ಮಾತಾಗಲಾರವು. ಬಾಯತುರಿಕೆಯಿಂದ ಮುಂದೆ ಚೆನ್ನಾಗಿ ಮಾತನಾಡಿ ಮರೆಯಾಗುತ್ತಿದ್ದಂತೆ ಆ ವ್ಯಕ್ತಿಯ ಬಗ್ಗೆ ಆಡಿಕೊಳ್ಳವುದು, ಪರರ ನಿಂದನೆ, ಚಾಡಿ ಮಾತುಗಳು, ಇತರರನ್ನು ಹಗುರಮಾಡುವ ಮಾತುಗಳು, ಕಿಚ್ಚಿನಿಂದ ಆಡುವ ಮಾತುಗಳು ಇವನ್ನು ಕಾಲಹರಣಕ್ಕಾಗಿ ಇರುವ ಅರ್ಥಹೀನ ಬಡಬಡಿಕೆ ಎನ್ನಬಹುದೇ ಹೊರತು ಇವುಗಳಿಂದ ಯಾರಿಗೂ ಪ್ರಯೋಜನವಿಲ್ಲ.
“ಮಾತು ಮಾತು ಮಥಿಸಿ ಬಂತು ನವನೀತ” ಎಂದು ವರಕವಿ ಬೇಂದ್ರೆ ಯವರು ಹೇಳಿದಂತೆ ನಾವಾಡುವ ಮಾತಿನಿಂದ ಒಳಿತೊಂದರ ಸೃಷ್ಟಿಯಾಗಬೇಕು, ಏನಾದರೂ ಪ್ರಯೋಜನಕ್ಕೆ ಬರುವಂತಿರಬೇಕು, “ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ” ಎನ್ನವಂತೆ ಕೇಳುಗರ ಮನಸ್ಸಿಗೆ ತಂಪೆರೆಯಬೇಕು ಅದು ನಿಜವಾದ ಮಾತು. ಇಂತಹ ಒಳ್ಳೆಯ ಮಾತುಗಳಿಂದ ನಮ್ಮ ಸ್ನೇಹ ಜಾಲ ವಿಸ್ತಾರವಾಗುತ್ತ ಹೋಗುವದು ಸಾಧ್ಯವಾಗುತ್ತದೆ.
ಏನುಂಟು ಬದುಕಿನಲಿ
ನಾಲ್ಕು ದಿನದ ಬಾಳು
ಅರ್ಥವಿಲ್ಲದ ಮಾತು
ಬರೀ ಹೂಳು
ಆಡುವ ಮಾತು ಮಾತಾಗಿರೆ ಚೆಂದ
ನಮ್ಮಯ ಬದುಕು ಶ್ರೀಗಂಧ.
ಮಾತನ್ನು ಮುತ್ತಿನ ಹಾಗೆ ಅಮೂಲ್ಯವೆಂದು ತಿಳಿದು ಇತಿ-ಮಿತಿಯಲಿ, ಅರ್ಥಪೂರ್ಣವಾಗಿ ಆಡಿದರೆ ನಮಗೂ ಮಾತು ಕೇಳಿಸಿಕೊಂಡವರೂ ನಮಗೆ ತೋರುವ ಗೌರವ ಸಕಾರಾತ್ಮಕವಾದದ್ದೇ ಆಗಿರುತ್ತದೆ.
ಒಳ್ಳೆಯ ಮಾತನಾಡೋಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣ ಒಳ್ಳೆಯ ನಡೆ ನುಡಿಯಿಂದ ಬದುಕು ಸಾರ್ಥಕಪಡಿಸಿಕೊಳ್ಳೋಣ..
