ಶ್ರೀ ಸಿದ್ಧೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದ ೭ ನೇ ಗೋಷ್ಠಿ `ಸೇವಾಭಾವ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಚಾರ ಕ್ರಾಂತಿಯ, ಜ್ಞಾನ ದಾಸೋಹದ ಮೂಲಕ ಕೋಟ್ಯಾಂತರ ಭಕ್ತ ಹೃದಯ ಗೆದ್ದ ವ್ಯಕ್ತಿ ಯಾರಾದರೂ ಇದ್ದರೆ ಅವರೇ ಶ್ರೀ ಸಿದ್ದೇಶ್ವರರು. ನಾವು ನಮ್ಮ ಕಾಯಕದೊಂದಿಗೆ ಪರೋಪಕಾರಿಯಾಗಿ ಜೀವನ ನಡೆಸಿದರೆ ಅಪ್ಪಾಜಿ ಸದಾ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ೭ ನೇ ಗೋಷ್ಠಿ `ಸೇವಾಭಾವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಸೇವೆ ಮಾಡಬೇಕಾದರೆ ಗಟ್ಟಿ, ಸ್ವಚ್ಛ ಹಾಗೂ ಅಂತಃಕರಣದ ಮನಸ್ಸನ್ನು ಹೊಂದಿರುವುದು ಅವಶ್ಯ. ಯಾವುದೇ ಕೆಲಸ ಮಾಡಿದರು ಅದರಲ್ಲಿ ಆಸೆ, ಆಕಾಂಕ್ಷೆ ಸ್ವಾರ್ಥತೆ ಇಲ್ಲದಿದ್ದರೆ ಅದು ನಿಜವಾದ ಸೇವಾಭಾವ. ಅಂತಹ ಸೇವೆಗಳು ಕೇವಲ ಆಶ್ರಮಗಳಲ್ಲಿ ಸಿಗುತ್ತದೆ. ಸಮಾಜದ ಅಸಹಾಯಕರಿಗೆ, ಬುದ್ಧಿಮಾಂಧ್ಯರಿಗೆ ಆಶ್ರಯ ನೀಡುವ ಸೇವೆಯನ್ನು ಮಾಡುತ್ತಿವೆ. ನಾವು ಆಶ್ರಮ ಸಂಸ್ಕೃತಿಯನ್ನು ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಅಜ್ಞಾನ ತೊಡೆದು ಹಾಕಿ ಸುಜ್ಞಾನದ ಹೊಳೆಯನ್ನು ಹರಿಸಿ ನಿರಾಭಾರಿಯಾಗಿ ಬದುಕಿದವರು ಶ್ರೀ ಸಿದ್ಧೇಶ್ವರ ಶ್ರೀಗಳು. ಕಾವಿಧಾರಿಗಳಾದ ಹಲವು ಸಂತರನ್ನು ನಾವು ನೋಡಿದ್ದೇವೆ. ಸನಾತನ ಪರಂಪರೆಯ ಸಂತ, ಈ ಕಾಲದ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಅಪ್ಪನವರ ನೋಡಿದ ನಮ್ಮ ಕಣ್ಣುಗಳೆ ಧನ್ಯ ಎಂದರು.
ಎಲ್ಲರಿಗೂ ಜ್ಞಾನ ದಾಹವನ್ನು ನಿಗಿಸಿ ನಮ್ಮ ಕಾಲದ ಅವಧೂತರಾಗಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಸನಾತನ ಪರಂಪರೆಯ ಉಳಿವಿಗೆ ಜಗತ್ತಿನ ಶಾಂತಿಗೆ ಆಧ್ಯಾತ್ಮ ಶಿಬಿರಗಳನ್ನು ನಡೆಸಿ ಜಗತ್ತಿನ ಒಳಿತನ್ನು ಬಯಸಿದ ನಿಸ್ವಾರ್ಥರು ಎಂದರು.
ಇದೆ ಸಂದರ್ಭದಲ್ಲಿ ಸತ್ಯಜೀತ ಶಿವಾನಂದ ಪಾಟೀಲ ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪನರು ಪ್ರವಚನಗಳ ಮೂಲಕ ನಮ್ಮ ನಿಮ್ಮೆಲ್ಲರ ಮಸ್ಸುಗಳನ್ನು ಅರಳಿಸುವ ಕೆಲಸ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಇಡೀ ಜೀವನದೂದ್ದಕ್ಕೂ ಜ್ಞಾನಾರ್ಜನೆಯನ್ನೆ ಪವಿತ್ರ ಕಾಯಕದಂತೆ ಪಾಲಿಸಿದರು. ಏಕೆಂದರೆ ದುಖದಿಂದ ನಮ್ಮನ್ನು ಕಾಪಾಡುವುದು ಯಾವುದೆಂದರೆ ಜ್ಞಾನ ಮಾತ್ರ ಎಂದರು.
ಅನ್ನದಾನಕ್ಕಿಂತ ದೊಡ್ಡ ದಾನ ವಿದ್ಯಾದಾನ ಅನ್ನದಿಂದ ಸ್ವಲ್ಪ ಸಮಯದ ತೃಪ್ತಿಯನ್ನು ಕೊಡಬಹುದು ಆದರೆ ವದ್ಯೆ ನಮ್ಮ ಇಡೀ ಜೀವನಕ್ಕೆ ತೃಪ್ತಿಯನ್ನು ಕೊಡುತ್ತದೆ. ಅಂತಹ ವಿದ್ಯೆ ಜ್ಞಾನವನ್ನು ನಮ್ಮ ಶ್ರೀ ಸಿದ್ದೇಶ್ವರ ಅಪ್ಪನವರು ನಮ್ಮೆಲ್ಲರಿಗೂ ಕೊಟ್ಟು ಹೋಗಿದ್ದಾರೆ. ಯಾರೂ ಕೂಡ ಕದಿಯಲು ಸಾಧ್ಯವಿರದಂತಹ ಕೊಡುಗೆಯನ್ನು ನಮಗೆ ಕೊಟ್ಟು ಹೋಗಿದ್ದಾರೆ ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರು ಕಡಿಮೆ ಎಂದು ಹೇಳಿದರು.
ಸುತ್ತೂರು ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜ್ಞಾನದ ಮತ್ತೊಂದು ಅರ್ಥವೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎನ್ನುವಂತೆ ಬದುಕಿದವರು ಶ್ರೀಗಳು. ಅತ್ಯಂತ ಸರಳ ಬದುಕನ್ನು ನಡೆಸುವ ಮೂಲಕ ಇಡೀ ಜಗತ್ತಿಗೆ ಸರಳತೆಯ ಬಗ್ಗೆ ಪಾಠ ಮಾಡಿದ ಮಹಾತ್ಮರು ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಸೇವೆ ಯಾವಾಗಲೂ ನಿಸ್ವಾರ್ಥವಾಗಿರಬೇಕು, ಬದುಕು ನಿಸ್ವಾರ್ಥವಾಗಿದ್ದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸದಾಕಾಲ ಹೇಳುತ್ತಿದ್ದರು. ತಮ್ಮ ಜೀವನವಿಡಿ ನಮ್ಮೆಲ್ಲರಿಗೂ ಜ್ಞಾನದಾಸೋಹ ಮಾಡುತ್ತಲೆ ಕಾಲ ಕಳೆದರು. ಒಂದಿಷ್ಟು ಸಮಯವನ್ನು ಹಾಳು ಮಾಡದೆ ಪ್ರತಿಕ್ಷಣವನ್ನೂ ನಮ್ಮೆಲ್ಲರ ಏಳಿಗೆಗಾಗಿ ಮೀಸಲಿಟ್ಟದ್ದರು ಎಂದು ಹೇಳಿದರು.
ಈ ಸಮಯದಲ್ಲಿ ವಿವಿಧ ಮಠಾಧೀಶರು, ರೈತರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಸಂಗಮೇಶ ಮೈತ್ರಿ ಸ್ವಾಗತಿಸಿದರು, ಉಪನ್ಯಾಸಕ ಅಮರೇಶ ಸಾಲಕ್ಕಿ ನಿರೂಪಿಸಿದರು.

