ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೨
ಉದಯರಶ್ಮಿ ದಿನಪತ್ರಿಕೆ
ಒಲವಿನ ರಾಧಾ
ನನ್ನ ಗೆಳೆಯರ ಬದುಕಿನಲ್ಲಿ ಆದ ದುಸ್ಥಿತಿಯನ್ನು ಕಂಡು ನನಗೆ ಪ್ರೀತಿ ಪ್ರೇಮ ಮದುವೆಯಲ್ಲಿ ಆಸಕ್ತಿಯೇ ಇರಲಿಲ್ಲ. ಅಪ್ಪ ಅವ್ವನಿಗೆ ಮೊಮ್ಮಕ್ಕಳನ್ನು ನೋಡಬೇಕೆಂಬ ಆಸೆ. ಪದೇ ಪದೇ ಅದೇ ವಿಷಯ ಕೇಳಬೇಡಿ ಎನ್ನುವ ನನ್ನ ನುಡಿಗಳಿಂದ ಅವರಿಗೆ ಬೇಸರವಾಗಿತ್ತು. ಸಾಲದ್ದಕ್ಕೆ ನಾನು ಏಕೈಕ ಪುತ್ರ ಅಮ್ಮನ ಮುದ್ದಿನ ಮಗ.. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ನಿನಗೆ ಹೆಣ್ಣು ಕೊಡಲು ಮುಗಿಬಿದ್ದಿದ್ದಾರೆ ಎಂದು ಅವ್ವ ಹೇಳುವಾಗ ಅವರ ಕಣ್ತುಂಬಿ ಬರುತ್ತಿತ್ತು. ಆದರೂ ನನ್ನ ಕಲ್ಲು ಹೃದಯ ಕರಗಿರಲಿಲ್ಲ. ಎಲ್ಲರಿಗೂ ಅವರವರ ಭಾವನೆಗಳೇ ಹೆಚ್ಚು ಅವರವರ ಯೋಚನೆಗಳೇ ಸರಿ. ಹೀಗಿರುವಾಗ ನನ್ನ ಹೆತ್ತವರ ಭಾವನೆಗಳಿಗೆ ನಾನು ಬೆಲೆ ಕೊಡದಾಗಿದ್ದೆ. ಆನೆ ನಡೆದಿದ್ದೆ ದಾರಿ ಎಂಬAತೆ ನನ್ನ ದಾರಿಯಲ್ಲಿ ನಡೆದಿದ್ದೆ. ಮನದಲ್ಲಿ ಸಣ್ಣ ತಲ್ಲಣವಿತ್ತು. ನಾ ನಡೆವ ದಾರಿ ಅದೆಲ್ಲಿಗೆ ಕರೆದೊಯ್ಯುತ್ತದೆಯೋ ಎಂದು ಸಣ್ಣಗೆ ನಡುಕವು ಶುರುವಾಗಿತ್ತು..
ಅದೇ ಸಮಯದಲ್ಲಿ ನಮ್ಮ ಆಫೀಸಿಗೆ ಕಾಲಿಟ್ಟವಳು ನೀನು. ಅದೊಂದು ದಿನ ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದೆ. ಆ ಕಡೆಯವರ ಮಾತಿಗೆ ಸಿಟ್ಟಿಗೆದ್ದು ಕರೆ ತುಂಡರಿಸಿದೆ. ಅದೇ ಸಮಯಕ್ಕೆ ನಿನ್ನ ಆಗಮನವಾಯಿತು. ನಿನ್ನನ್ನು ಗಮನಿಸದ ನಾನು ನಿನಗೆ ಢಿಕ್ಕಿ ಹೊಡೆದಿದ್ದೆ. ನಿನ್ನ ಭುಜಕ್ಕೆ ನನ್ನ ಭುಜ ತಾಗಿತ್ತು. ಹಿಂದೆAದೂ ಆಗಿರದ ಅನುಭವ ಅಂದು ನನಗಾಗಿತ್ತು. ಗೊತ್ತಿಲ್ಲದಂತೆ ನನ್ನ ಹೃದಯ ‘ಈ ಹುಡುಗಿಯನ್ನು ಬಿಡಬೇಡ ಪ್ರೀತಿಸು’ ಎಂದು ಮೊದಲ ಸಲ ಪ್ರೀತಿಯಿಂದ ಪಿಸುಗುಟ್ಟಿತ್ತು. ಸಾವರಿಸಿಕೊಂಡು, ‘ನನ್ನಿಂದ ತಪ್ಪಾಯಿತು’ ಎಂದೆ. ನೀನು ಏನನ್ನೂ ಹೇಳದೇ ಮುಗಳ್ನಕ್ಕೆ. ಮೆತ್ತಗೆ ಕಣ್ಣಲ್ಲೇ ಸಮಾಧಾನಿಸಿದೆ. ನನಗೆ ಜೀವದಲ್ಲಿ ಜೀವ ಬಂದAತಾಯಿತು. ಖುಷಿಮೊಗದಿಂದ ನನ್ನ ಕ್ಯಾಬಿನತ್ತ ಹೆಜ್ಜೆ ಹಾಕುತ್ತಿದೆ. ಆ ಮೌನದ ನಡುವೆ ತಣ್ಣಗೆ ಸೀಳಿಕೊಂಡು ಬಂದ ನಿನ್ನ ದನಿಯಲ್ಲಿ ’ಹಲೋ ಮಿಸ್ಟರ್ ನಿಮ್ಮ ನೇಮ್ ಎಂಬ ಪ್ರಶ್ನೆ ಬಂದಿತ್ತು. ತಡವರಿಸುತ್ತ ಕೃಷ್ಣ ಎಂದಿದ್ದೆ ನೋಟ ತಾಕಿಸದೆ. ಈ ಹಿಂದೆ ಹೀಗೆ ಯಾವ ಹೆಣ್ಣಿನೊಂದಿಗೆ ಮಾತನಾಡದೇ ಇರುವುದಕ್ಕೇನೋ ಹಣೆಯ ಮೇಲೆ ಬೆವರ ಹನಿಗಳು ಸಾಲುಗಟ್ಟಿದ್ದವು. ಮನದಲ್ಲಿ ಮೊದಲ ಸಲ ಪ್ರೀತಿಯ ಅಲೆಯೊಂದು ಮೂಡಿತ್ತು.
ಬರಬರುತ್ತ ಸ್ನೇಹ ಬೆಳೆಯಿತು. ನೀನು ರಜೆ ಹಾಕಿದರೆ ನನಗೆ ಆ ದಿನ ಒಂದು ಯುಗದಂತೆ ಭಾಸವಾಗುತ್ತಿತ್ತು. ಜೊತೆ ಇರುವಾಗ ದಿನ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ. ನನ್ನ ಹೃದಯದಲ್ಲಿ ಪ್ರೀತಿ ಮೊದಲೇ ಮೊಳಕೆ ಒಡೆದಿತ್ತು. ನಿನ್ನಲ್ಲಿ ಯಾವಾಗ ಪ್ರೀತಿ ಅಲೆ ಹೊಮ್ಮುತ್ತದೆಯೋ ಅಂತ ಕಾಯುತ್ತಿದ್ದೆ. ‘ಈ ಹಿಂದಿನ ಹುಡುಗ ನೀನಲ್ಲ ನಿನಗೀಗ ಪ್ರೇಮಜ್ವರ ಏರುತ್ತಿದೆ.’ ‘ನೀನು ಅವಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವೆ.’ ಎಂದು ಮನಸ್ಸು ಕಾಲೆಳೆಯುತ್ತಿತ್ತು. ಲಂಚ್ ಸಮಯದಲ್ಲಿ ನೇರವಾಗಿ ಹೇಳಿದರಾಯಿತೆಂದು ಅದೆಷ್ಟೋ ಸಲ ನಿರ್ಧರಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ‘ನಿನ್ನಿಷ್ಟದ ತಿಂಡಿ ಹದವಾಗಿ ಸಕ್ಕರೆ ಬೆರೆಸಿ ನಿನಗಾಗಿ ನಾನೇ ಮಾಡಿ ತಂದಿರುವೆ.’ ಎಂದು ಹೆಗಲ ಮೇಲೆ ಇಳಿಬಿದ್ದಿದ್ದ ರೇಷ್ಮೆ ಕೂದಲು ಹಿಂದಕ್ಕೆ ತಳ್ಳಿಕೊಂಡು, ಕಣ್ಮಿಟುಕಿಸುತ್ತ ನೀ ನುಡಿದಾಗಲೇ ಗೊತ್ತಾಗಿದ್ದು ನಿನ್ನ ಹೃದಯದಲ್ಲೂ ಪ್ರೀತಿಯ ನದಿಯು ಹರಿಯುತಿದೆ ಎಂದು.
ಅಂದು ಆಫೀಸ್ನಲ್ಲಿ ಹಿರಿಯ ಸಹೋದ್ಯೋಗಿ ಒಬ್ಬರ ನಿವೃತ್ತಿ ಫಂಕ್ಷನ್ ಗಂಟೆ ಒಂಭತ್ತಾಗಿತ್ತು. ಇನ್ನೂ ಯಾರೂ ಬಂದಿರಲಿಲ್ಲ. ಆಫೀಸಿಗೆ ಸಮಯಕ್ಕೆ ಮುಂಚೆ ಬರುವ ರೂಢಿ ನನ್ನಂತೆ ನಿನಗೂ ಇತ್ತು. ಅಚ್ಚ ಕೆಂಪಿನ ಸೆಲ್ವಾರ್, ತುಟಿಗೆ ತಿಳಿಗುಲಾಬಿ ಲಿಪ್ಸ್ಟಿಕ್, ಸೆಲ್ವಾರ್ ಕಲರ್ಗೆ ಹೊಂದುವಂತಹ ಕಿವಿಯೋಲೆ, ಕಣ್ಣಿಗೆ ಗಾಢವಾಗಿ ಹಚ್ಚಿದ ಕಾಡಿಗೆ, ನೀಳ ಕುತ್ತಿಗೆಗೆ ಒಪ್ಪುವ ಚಿಕ್ಕ ಡೈಮಂಡ್ ಇರುವ ತಿಳುವಾದ ಚೈನ್, ಲೂಸ್ ಬಿಟ್ಟ ಕಪ್ಪಾದ ಕೂದಲು, ತೇಟ್ ಗೊಂಬೆ ತರ ಕಾಣುತ್ತಿದ್ದೆ. ಮೊದಲೇ ಮುದ್ದು ಮುಖದ ಸುಂದರಿ ಒಂದು ಚೆಂದದ ನಗು ಬಿಸಾಕುತ್ತ ಓಡುವ ನಡಿಗೆಯಲ್ಲಿ ನನ್ನತ್ತ ಬಂದು ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ನೀನು ಸನಿಹ ಬಂದಾಗ ಏಕೋ ಹೃದಯ ಒಂದೇ ಸಮನೆ ಬಡಿದುಕೊಳ್ಳಲಾರಂಭಿಸಿತ್ತು.
ಅದೇ ಸಮಯದಲ್ಲಿ ಮೆಲ್ಲನೆ ಕೈ ಹಿಡಿದೆ. ಆ ಕ್ಷಣ ಅದೇನೋ ಅರಿಯದ ಭಾವವೊಂದು ಮೂಡಿತು. ನಿನ್ನನ್ನೇ ನೋಡುತ್ತ ನಿಂತುಬಿಟ್ಟೆ. ಮಮತೆಯಿಂದ ನನ್ನ ತಲೆ ನೇವರಿಸಿದೆ ಕೆನ್ನೆ ಹಿಂಡಿದೆ. ಮೊಗವನ್ನು ಬೊಗಸೆಯಲ್ಲಿ ಹಿಡಿದು ಹಣೆಗೆ ಅಕ್ಕರೆಯಿಂದ ನಿನ್ನ ಕೆಂದುಟಿಗಳಿಂದ ಮುದ್ರಿಸಿದೆ. ನನಗೇ ಅರಿವಾಗದಂತೆ ನಾನೂ ನಿನ್ನ ಕೆನ್ನೆ ಕೆಂಪಾಗಿಸಿದ್ದೆ. ಮೆಲ್ಲನೇ ನನ್ನ ತೋಳಿನಿಂದ ಬಿಡಿಸಿಕೊಂಡು ಯಾರಿಗೂ ಗೊತ್ತಾಗಬಾರದೆಂದು ಸರಸರನೆ ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋದೆ. ಆಗ ಮನಸ್ಸು ಎಷ್ಟು ಚೂಟಿ ಇವಳು ಎಂದಿತ್ತು. ಆ ಕ್ಷಣದಲ್ಲಿ ನನ್ನೆದೆ ಬಡಿತ ಏರು ಪೇರಾಗಿದ್ದು ಸುಳ್ಳಲ್ಲ. ಏನೋ ಒಂದು ತರ ರೋಮಾಂಚನವಾಯಿತು. ಸಹೋದ್ಯೋಗಿಯೊಬ್ಬರು ಹಲೋ ಕೃಷ್ಣ ಎಂದು ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದೆ.
ಆಫೀಸಿನಲ್ಲಿ ನಿನ್ನ ಗಮನ ಸೆಳೆಯಲು ಬೇಕೆಂದೇ ಎರಡು ಬಾರಿ ಕೆಮ್ಮುತ್ತಿದ್ದೆ. ಆಗಾಗ ನನ್ನ ನಿನ್ನ ನಡುವೆ ಪಾರ್ಕಿನಲ್ಲಿ ಕೋಳಿ ಜಗಳ ಇರುತ್ತಿತ್ತು. ಆಗೆಲ್ಲ ಸಮಾಧಾನಿಸಲು ನೋಡಿದಾಗ ಮೂಕವೂದಿಸಿಕೊಂಡು ಕೂಡುತ್ತಿದ್ದೆ. ’ಸ್ಸಾರಿ ಪ್ರಿನ್ಸಸ್’ ಎಂದು ಕ್ಷಮೆ ಕೇಳಿ ರಮಿಸುತ್ತಿದ್ದೆ. ಕೊನೆಗೆ ನೀನು ತೋರಿಕೆಯ ಮುನಿಸಿನಲ್ಲಿ ರೇಗಿಸುತ್ತ ಮುದ್ದಾಗಿ ನಕ್ಕು ಬಿಡುತ್ತಿದ್ದೆ. ನಾನು ಫುಲ್ ಫಿದಾ ಆಗಿ ಹಿಂದಿನಿಂದ ಬಾಚಿ ತಬ್ಬುತ್ತಿದ್ದೆ. ಆ ತಬ್ಬುವಿಕೆಯಲ್ಲಿ ವಿವರಿಸಲಾಗದ ಹಿತವಿತ್ತು. ಇನ್ನು ನೀನು ಮೂರು ಹೊತ್ತು ನನ್ನೊಂದಿಗೆ ಹೀಗೆಯೇ ಇರಬೇಕು. ನಿನ್ನನ್ನೇ ಪ್ರಪಂಚವಾಗಿಸಿಕೊಳ್ಳಬೇಕು ಅನ್ನೋದು ನನ್ನಾಸೆ ಎಂದು ಕಣ್ಣು ಹೊಡೆಯುತ್ತ ನಿನ್ನನ್ನು ಚೇಡಿಸುತ್ತಿದ್ದೆ. ಆಗೆಲ್ಲ ನೀನು ಸಂಕೋಚದ ಮುದ್ದೆಯಾಗುತ್ತಿದ್ದೆ. ಆಗಾಗ ನಿನ್ನ ಕಾಲೆಳೆಯುವುದು ನನಗೆ ಖುಷಿ ನೀಡುತ್ತಿತ್ತು. ಜಗತ್ತಿನಲ್ಲಿ ಬರಿ ಮೋಸ ಮಾಡುವವರಿಲ್ಲ. ಪ್ರೀತಿಯ ಬುತ್ತಿಯನ್ನು ಹಂಚುವವರು ಇದ್ದಾರೆ ಎಂಬುದು ನಿನ್ನನ್ನು ಭೇಟಿಯಾದ ಮೇಲೆ ನನಗೆ ತಿಳಿದಿತ್ತು.
ಅಮ್ಮನಿಗೆ ನನ್ನಲ್ಲಿ ಆದ ಬದಲಾವಣೆ ತಿಳಿದುಕೊಳ್ಳಲು ಬಹಳ ದಿನ ಹಿಡಿಯಲಿಲ್ಲ. ನಿನ್ನ ಬಗ್ಗೆ ತಿಳಿದಾಗಿನಿಂದ ದಿನವೂ ಹೊಸ ಹೊಸ ರುಚಿ ಅಮ್ಮನ ಕೈಯಿಂದ ತಯಾರಾಗುತ್ತಿತ್ತು. ನೀನೇ ತಿಂದು ಬಿಡಬೇಡ. ನನ್ನ ಮುದ್ದು ಸೊಸೆಗೆ ತಿನ್ನಿಸು ಎಂದು ತಾಕೀತು ಮಾಡುತ್ತಿದ್ದಳು. ನನ್ನಮ್ಮ ನೀಡಿದ್ದ ಬಳೆಗಳನ್ನು ನಾನೇ ನಿನ್ನ ಕೈಗೆ ತೊಡೆಸಿದ್ದೆ. ಆಗ ನನಗಾದ ಖುಷಿಗೆ ಪಾರವೇ ಇರಲಿಲ್ಲ. ಅಂದು ಅಂದದ ಕೈಗೆ ಚೆಂದದ ಘಲ್ ಘಲ್ ಸದ್ದಿನ ಬಳೆಗಳು ನನ್ನನ್ನು ನಿನ್ನತ್ತ ಇನ್ನಿಲ್ಲದಂತೆ ಸೆಳೆಯುತ್ತಿದ್ದವು. ಆ ಬಳೆಗಳೊಂದಿಗೆ ಎಷ್ಟೋ ಹೊತ್ತು ಆಡುತ್ತಲೇ ಇದ್ದೆ. ಅದರಲ್ಲಿ ನಿನ್ನ ನವಿರಾದ ಕೈ ಸ್ಪರ್ಷಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಯಾವ ಜನುಮದ ಅನುಬಂಧವೋ ಏನೋ ಮದುವೆ ಬೇಡ ಎನ್ನುತ್ತಿದ್ದವನು ನಿನ್ನ ಪ್ರೀತಿಯಲ್ಲಿ ಸಿಲುಕಿದೆ. ಮೂರು ಗಂಟಿನ ನಂಟಿನಲ್ಲಿ ಒಂದಾಗಿರುವೆವು. ‘ಕೈಯಲ್ಲಿ ಕುಣಿಯುವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ ಪ್ರತಿ ರಾತ್ರಿ ಸರಸ ಸಲ್ಲಾಪದ ಎದೆಯ ತಂನಂ ಸೇರಿಸೋಣ.’ ಅಪ್ಪ ಅವ್ವನ ಆಸೆಯಂತೆ ವರುಷದೊಳಗಡೆ ಕೈಗೆ ಮೊಮ್ಮಗು ನೀಡೋಣ. ಸತಾಯಿಸದೇ ಬೇಗ ಬಂದು ಬಿಡು ರಾಧಾ ಸರಸದ ಮಂಚಕೆ..
ಇಂತಿ ನಿನ್ನ ಕೃಷ್ಣ


