ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಹರನಾಳ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಹಿಂದ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಮಹಿಳಾ ಸಂಘಟನೆ, ವಿವಿಧ ಪ್ರಗತಿಪರ ಸಂಘಟನೆಗಳಾಶ್ರಯದಲ್ಲಿ ನಡೆದ ಬಂದ್ನಲ್ಲಿ ನಮ್ಮ ಜಿಲ್ಲೆಯ ಈರ್ವರು ಸಚಿವರು, ನಾಲ್ವರು ಶಾಸಕರಿದ್ದರೂ ಭಾಗವಹಿಸದೇ ಇರುವುದು ಬೇಸರದ ಸಂಗತಿ. ಚುನಾವಣೆಯಲ್ಲಿ ಅಹಿಂದ ವರ್ಗದ ಮತಬೇಕು. ಆದರೆ ಅಹಿಂದ ವರ್ಗದ ಕಷ್ಟಗಳಿಗೆ ಸ್ಪಂದನೆಯಿಲ್ಲ. ಅಹಿಂದ ವರ್ಗದ ಜನಸಂಖ್ಯೆ ಹೆಚ್ಚಿಗಿದ್ದರು ಬೆರೆಳಣಿಕೆಯಷ್ಟು ಜನರು ಶಾಸಕರಾಗುತ್ತಾರೆ. ಕಾರಣ ಹಣದ ಬಲ. ಮುಂಬರುವ ದಿನಮಾನಗಳಲ್ಲಿ ನಮ್ಮ ಜನರು ಯಾರಿಗೂ ಗುಲಾಮರಾಗದೇ ಯಾವ ಹಣಕ್ಕೂ ಆಸೆ ಪಡದೆ. ಹಿಂದುಳಿದ ವರ್ಗದ ಜನರು ಒಗ್ಗಟ್ಟಾಗಿ ಇಂತಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಹರನಾಳ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಡಿ.೩೦ರಂದು ವಿಜಯಪುರ ಬಂದ್ಗೆ ಕರೆ ನೀಡಲಾಗಿತ್ತು. ಜಿಲ್ಲೆಯಲ್ಲಿ ೮ ಶಾಸಕರಲ್ಲಿ ೬ ಶಾಸಕರು, ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್ಸಿನವರು ಇದ್ದರೂ ಸಹ ಯಾರೊಬ್ಬರೂ ಭಾಗವಹಿಸದೇ ಇರುವುದು ಬೇಸರದ ಸಂಗತಿ.
ದೇವರ ಹಿಪ್ಪರಗಿಯ ಏಕೈಕ ಜೆಡಿಎಸ್ ಶಾಸಕರು ಭಾಗವಹಿಸಿಲ್ಲ. ಜೊತೆಗೆ ಸಿಂದಗಿ ನಗರದಲ್ಲಿ ಡಿ.೨೨ರಂದು ನಡೆದ ಹೋರಾಟ ಮೆರವಣಿಗೆಯಲ್ಲಿ ಸಿಂದಗಿ ಶಾಸಕರ ಹತ್ತಿರ ಹಾದು ಹೋದರು ಕೂಡ ಕನಿಷ್ಠ ಸೌಜನ್ಯಕ್ಕಾದರೂ ಬಂದು ಭಾಗವಹಿಸಿಲ್ಲ. ಇದೇ ನಮ್ಮ ಮತಕ್ಷೇತ್ರದ ದುರಾದೃಷ್ಟ ಸಂಗತಿ. ಇನ್ನು ಮುಂದೆ ನಮ್ಮ ಮತಕ್ಷೇತ್ರದಲ್ಲಿ ಬರುವಂತಹ ದಿನಮಾನಗಳಲ್ಲಿ ಯಾವುದೇ ಚುನಾವಣೆ ಬಂದರು ನಾವೆಲ್ಲರೂ ಒಂದಾಗಿ ಸಂಘಟನೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

