ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಾರ್ವಜನಿಕರ ಏಳಿಗೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಒಳಗೊಂಡ ಪಂಚ ಗ್ಯಾರಂಟಿ ಯೋಜನೆಗಳು ಜನಪರ ಕಾರ್ಯಕ್ರಮಗಳಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶ್ರೀಶೈಲ ಕವಲಗಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸರಕಾರದ ೫ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಕಾರ್ಯಕ್ರಮಗಳಾದ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆ ವ್ಯಕ್ತಿಗಳಿಗೂ ತಲುಪಬೇಕು. ಜೊತೆಗೆ ಅರ್ಹರಾದ ಎಲ್ಲ ಫಲಾನುಭವಿಗಳಿಗೆ ತಲುಪಿಸುವ ಅಗತ್ಯ ಕ್ರಮಕೈಕೊಳ್ಳಬೇಕು ಎಂದರು.
ಈ ವೇಳೆ ಸಮಿತಿ ಸದಸ್ಯ ರಜತ ತಾಂಬೆ, ಎಸ್.ಬಿ.ಖಾನಾಪೂರ, ಸುನಂದಾ ಯಂಪೂರೆ, ಎಮ್.ಎ.ಬೀಳಗಿ ಮಾತನಾಡಿ, ಅನ್ನಭಾಗ್ಯದಲ್ಲಿ ಅಕ್ಕಿ ಮಾಫಿಯಾ ನಡೆಯುತ್ತಿದ್ದು, ಅದರೆಡೆಗೆ ಗಮನವಿರಲಿ. ಬಸ್ಸನಲ್ಲಿ ಪ್ರಯಾಣಿಸುವ ಜನರಿಗೆ ನಿರ್ವಾಹಕರು ಮತ್ತು ಚಾಲಕರು ಮಹಿಳೆಯರಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ರಾಜ್ಯ ಸರಕಾರ ಘೋಷಣೆ ಮಾಡಿರುವ ಪಂಚ ಗ್ಯಾರಂಟಿಗಳು ಕೆಲವರ ಖಾತೆಗಳಿಗೆ ಬರುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಜೊತೆಗೆ ನಿಯಂತ್ರಕ ಬಸ್ಸಿನ್ ಮಾಹಿತಿ ಕೇಳಲು ಹೋದ ಪ್ರಯಾಣಿಕರಿಗೂ ಸರಿಯಾದ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ ಇದಕೆಲ್ಲ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸುವಂತೆ ಎಚ್ಚರಿಗೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಶೇ.೯೯.೨೮ರಷ್ಟು ಮಹಿಳೆಯರಿಗೆ ಗೃಹಲಕ್ಷಿö್ಮ ಯೋಜನೆಯ ಲಾಭ ದೊರೆತಿದೆ. ೩೭೧೬೬ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೩೬೧೧೬ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ೨೫೨ ಫಲಾನುಭವಿಗಳ ತಾಂತ್ರಿಕ ದೋಷವಿದೆ. ೪೫ ಜನರ ಖಾತೆಗಳಲ್ಲಿ ಐಟಿ, ಜಿಎಸ್ಟಿ ಇದ್ದ ಬಗ್ಗೆ ತೋರಿಸುತ್ತಿದೆ. ಅದನ್ನು ಪರಿಶೀಲಿಸಿ ಸರಿ ಪಡಿಸುವುದಾಗಿ ತಿಳಿಸಿದರು.
ಈ ವೇಳೆ ಅಹಾರ ಇಲಾಖೆಯ ಎಫ್.ಐ ವಿದ್ಯಾ ಹಿಪ್ಪರಗಿ ಮಾತನಾಡಿ, ಅಹಾರ ಇಲಾಖೆಯಲ್ಲಿ ಅಕ್ಕಿ ಮಾಫಿಯಾ ನಡೆಯುತ್ತಿರುವುದು ಗಮನಕ್ಕೆ ಬಂದರೆ ಸೂಕ್ತಕ್ರಮ ಕೈಗೊಳ್ಳುವೆ. ನ್ಯಾಯಬೆಲೆ ಅಂಗಡಿಕಾರರ ಸಭೆ ಕರೆದು ಡಿಜಿಟಲ್ ತೂಕದ ಮಶೀನ್ ಅಳವಡಿಸುವಂತೆ ಸೂಚನೆ ನೀಡುತ್ತೇನೆ ಎಂದು ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಎಎಸ್ ಸಂತೋಚ ವಿ.ಎಚ್. ಮಾತನಾಡಿ, ತಾಲೂಕಿನಲ್ಲಿ ೯೫ಲಕ್ಷಕ್ಕೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದು, ಇದರಿಂದ ಈ ಬಾರಿ ನಮ್ಮ ಸಿಂದಗಿ ಘಟಕಕ್ಕೆ ೩೫ಕೋಟಿ ಲಾಭವಾಗಿದೆ. ಜೊತೆಗೆ ವಿವಿದೆಡೆ ಬಸ್ಸಿನ ಸೌಲಭ್ಯವನ್ನು ಒದಗಿಸಲಾಗಿದೆ. ಬೆಂಗಳೂರಿಗೆ ಮಹಿಳೆಯರು ತೆರಳಲು ಮುಂಗಡ ೨೦ ಬರಣಾ ಮಾಡಿ ಟಿಕೆಟ್ ಪಡೆದುಕೊಂಡರೆ ಉಚಿತವಾಗಿ ಪ್ರಾಯಾಣಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ತಾಪಂ ಇಒ ರಾಮು ಅಗ್ನಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ಎಸ್.ಬಿ.ಖಾನಾಪೂರ, ಎಮ್.ಎ.ಬೀಳಗಿ, ಸುನಂದಾ ಯಂಪೂರೆ, ಆರ್.ಎ.ಪಾಟೀಲ, ಸಾಹೇಬಪಟೇಲ್ ಅವಟಿ, ಪರಶುರಾಮ ಗೌಂಡಿ, ರಜತ ತಾಂಬೆ, ಸಿದ್ದಲಿಂಗಪ್ಪ ಗುಂಡಾಪೂರ, ಸಿದ್ರಾಮಪ್ಪ ಕಲ್ಲೂರ, ತಾಪಂ ಐಇಸಿ ಸಂಯೋಜಕ ಭೀಮರಾಯ ಚೌಧರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

