ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಎಳ್ಳ ಅಮವಾಸ್ಯೆದಂಗವಾಗಿ ರೈತ ಬಾಂಧವರು ತಮ್ಮ ಹೊಲ, ತೋಟಗಳಲ್ಲಿ ಬೆಳೆದು ನಿಂತ ಬೆಳೆಗೆ ಹಾಗೂ ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸುವ ಎಳ್ಳ ಅಮವಾಸ್ಯೆಯನ್ನು ಆಚರಿಸಿದರು.
ಕೆಲ ರೈತ ಬಾಂಧವರು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಹೊಲಗಳಿಗೆ ತೆರಳಿದರೆ, ಅಲ್ಪಸ್ವಲ್ಪ ಬೆಳೆ ಇದ್ದ ರೈತ ಬಾಂಧವರು ಮನೆಯ ಸದಸ್ಯರೊಂದಿಗೆ ತಮ್ಮ ಜಮೀನಿಗೆ ತೆರಳಿ ಚೆರಗ ಚೆಲ್ಲುವ ಹಬ್ಬ ಆಚರಿಸಿದರು.
ಬೆಳಗ್ಗೆಯಿಂದಲೇ ಮನೆಗಳಲ್ಲಿ ಮಹಿಳೆಯರು ಎಳ್ಳ ಅಮವಾಸ್ಯೆ ಹಬ್ಬಕ್ಕಾಗಿ ಸಜ್ಜಿ ಕಡಬು, ಹೂರಣದ ಕಡಬು, ಹೂರಣದ ಹೋಳಗಿ, ಶೇಂಗಾ ಹೋಳಗಿ, ಸಜ್ಜಿ ರೊಟ್ಟಿ, ಚಪಾತಿ, ವಿವಿಧ ತರಹದ ಕಾಳು, ತರಕಾರಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನಂತರ ಊರ ದೇವರಿಗೆ ನೈವೇದ್ಯ ಕೊಟ್ಟ ನಂತರ ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ಸೇರಿದಂತೆ ಇತರೇ ವಾಹನಗಳ ಮೂಲಕ ಕುಟುಂಬ ಸದಸ್ಯರು ಹಾಗೂ ತಮ್ಮ ಬಂಧು ಬಳಗದೊಂದಿಗೆ ಹೊಲಗಳಿಗೆ ತೆರಳಿದರು. ಹೊಲದಲ್ಲಿ ಬೆಳೆದು ನಿಂತ ಬೆಳೆಗೆ , ಹೊಲದ ಬನ್ನಿ ಮರದ ಕೆಳಗಿರುವ ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಿಂದ ತಂದ ನೈವೇದ್ಯವನ್ನು ಎಡೆ ಹಿಡಿದು ನಂತರ ಭೂತಾಯಿಗೆ ಸಾಮೂಹಿಕ ಚೆರಗ ಚೆಲ್ಲಿದರು. ನಂತರ ಸಾಮೂಹಿಕ ಭೋಜನದಲ್ಲಿ ಎಲ್ಲರೂ ಎಳ್ಳ ಅಮವಾಸ್ಯೆಯ ಊಟದ ಸವಿಯನ್ನು ಸವಿದರು.
ಊಟದ ನಂತರ ಮಕ್ಕಳು ವಿವಿಧ ರೀತಿಯ ಆಟಗಳನ್ನು ಆಡುವದರೊಂದಿಗೆ ಸಂತಸ ಪಟ್ಟರು. ಹಿರಿಯರು ಮಳೆ, ಬೆಳೆ ಕುರಿತಾಗಿ ಚರ್ಚಿಸುವುದರೊಂದಿಗೆ ಹಿಂದೆ ಅಚರಿಸುತಿದ್ದ ಎಳ್ಳ ಅಮವಾಸ್ಯೆ ಸಂಭ್ರಮವನ್ನು ನೆನಪಿಸಿಕೊಂಡರು.
ಸಂಜೆ ಸೂರ್ಯಾಸ್ತ ಸಮಯ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಭೂತಾಯಿಗೆ ನಮಸ್ಕರಿಸಿ ತಮ್ಮ ತಮ್ಮ ಮನೆ ಕಡೆಗೆ ತೆರಳಿದ ದೃಶ್ಯ ಕಂಡು ಬಂದಿತು. ಎಳ್ಳ ಅಮವಾಸ್ಯೆ ಪ್ರಯುಕ್ತ ಸೋಮವಾರ ಸಂತೆ ದಿನ ಇದ್ದರೂ ಅಷ್ಟಾಗಿ ಜನರು ಮಾರುಕಟ್ಟೆಯಲ್ಲಿ ಕಂಡುಬರಲಿಲ್ಲ. ಮಾರುಕಟ್ಟೆಯಲ್ಲಿನ ಅಂಗಡಿ-ಮುಂಗಟ್ಟುಗಳು ಸ್ವಯಂ ಘೋಷಿತ ಮುಚ್ಚಲ್ಪಟ್ಟಿದ್ದವು. ಸಂಜೆಯಾಗುತ್ತಿದ್ದಂತೆ ಅಂಗಡಿ-ಮುಂಗಟ್ಟುಗಳು ತೆರೆಯಲ್ಪಟ್ಟವು.

