ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಂದೆಲ್ಲಾ ಈ ಚರಗ ಹಬ್ಬದ ಸಂಭ್ರಮ ಸವಿಯಲು ರೈತರು ನಸುಕಿನಲ್ಲಿಯೇ ಎದ್ದು ಎತ್ತಿನಗಾಡಿಗೆ ಬಣ್ಣ ಬಳಿದು ಎತ್ತುಗಳ ಮೈತೊಳೆದು, ಗಾಡಿಯ ಗಾಲಿಯ ಕೀಲುಗಳಿಗೆ ಎಣ್ಣೆ ಬತ್ತಿ ಹಾಕಿ, ಗಾಡಿಗೆ ಕಮಾನು ಕಟ್ಟಿ ಹೂಗಳಿಂದ ಅಲಂಕಾರ ಮಾಡಿ ಬಣ್ಣ ಹಚ್ಚಿ, ಕೊಡುಗಳಿಗೆ ಹಣಸು ಹಾಕಿ ಜೂಲು, ಗೊಂಡೆ, ಬಣ್ಣದ ಗಾಜಿನ ತುಕ್ಕಡಿಗಳಿಂದ ಜೊಡಿಸಿದ ಬಾಸಿಂಗ್(ಹಣೆಪಟ್ಟಿ) ಕಟ್ಟುತ್ತಿದ್ದರು. ಎತ್ತುಗಳ ಕೊರಳಿಗೆ ಗಂಟೆಗಳ ಸರ ಕಟ್ಟಿ, ಬೆನ್ನ ಮೇಲೆ ಹಲವು ಬಣ್ಣ ಬಣ್ಣದ ಗಜ್ಜರಾ ಹೊದಿಸುತ್ತಿದ್ದರು.
ತಾಲೂಕಿನಲ್ಲಿ ರೈತರು ಪ್ರತಿವರ್ಷ ಎಳ್ಳು ಅಮವಾಸ್ಯೆ ದಿನದಂದು ತಮ್ಮ ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯಕ್ಕೆ ಈ ಬಾರಿ ಹೇಳಿಕೊಳ್ಳುವಷ್ಟು ಸಂಭ್ರಮ ಇರಲಿಲ್ಲ.
ಹೊಸ ಹೊಸ ಬಟ್ಟೆಗಳನ್ನು ತೊಟ್ಟ ಮಕ್ಕಳು, ಇಲಕಲ್ ಸೀರೆಗಳನ್ನು ಉಟ್ಟ ಹೆಣ್ಣು ಮಕ್ಕಳು, ಗಾಡಿಯಲ್ಲಿ ಬಗೆ ಬಗೆಯ ಅಡುಗೆ ಪದಾರ್ಥಗಳ ಬುಟ್ಟಿ, ಗಂಟುಗಳೊಂದಿಗೆ ಕುಳಿತು ಪ್ರತಿ ರೈತ ಕುಟುಂಬಕ್ಕೊಂದರಂತೆ ಬಂಡಿಗಳು ಸಾಲಾಗಿ ಹೊಲಗಳತ್ತ ಹೊರಟರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿ ಗೋಚರಿಸುತ್ತಿತ್ತು. ಆದರೆ ಇಂದು ಜನಪದ ಸೊಗಡನ್ನು ವಿಜೃಂಬಿಸುವ ಎಳ್ಳು ಅಮವಾಸ್ಯೆಯ ಈ ಸಂಭ್ರಮವು ಕೇವಲ ನೆನಪುಗಳಾಗಿ ಉಳಿದುಕೊಂಡಿವೆ.
ಇಂದು ಎತ್ತಿನ ಗಾಡಿಯ ಬದಲಾಗಿ ಟ್ರ್ಯಾಕ್ಟರ್, ಟಂಟಂ ಆವರಿಸಿಕೊಂಡಿವೆ ಧನ-ಕರುಗಳಿಗೆ ಮೇವನ್ನು ಪೂರೈಸಲು ರೈತ ಅಸಾಯಕರಾಗಿದ್ದರಿಂದ ಬಹುತೇಕ ದನ-ಕರುಗಳು ಕಟುಕರ ಪಾಲಾಗಿ ಕಸಾಯಿಖಾನೆ ಸೇರಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಎಳ್ಳು ಅಮವಾಸ್ಯೆ ಹಬ್ಬ ತನ್ನ ಹಿಂದಿನ ಗತ್ತನ್ನು ಕಳೆದುಕೊಂಡಿದ್ದರೂ ಆಚರಣೆಯ ವಿಷಯದಲ್ಲಿ ರೈತರ ಶ್ರದ್ಧಾ-ಭಕ್ತಿಗೆ ಕಿಂಚಿತ್ತೂ ಕುಂದು ಬಂದಿಲ್ಲ. ಹಬ್ಬದ ಅಡುಗೆಯ ವೈವಿಧ್ಯತೆಯಲ್ಲಿ ಸ್ವಲ್ಪವು ವ್ಯತ್ಯಾಸ ಕಂಡಿಲ್ಲ. ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಕುಟುಂಬ ಸಮ್ಮೇತ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ತಮ್ಮ ಬಂಧು ಮಿತ್ರರ ಹೊಲಗಳಿಗೆ ತೆರಳುವ ದೃಶ್ಯ ಎಲ್ಲೆಡೆ ಕಂಡುಬಂದಿತು.
ಆಯಾ ಹೊಲದಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಮನೆಯಿಂದ ತಂದ ಸಜ್ಜೆ ಕಡಬು, ಸಜ್ಜೆಯ ರೊಟ್ಟಿ, ಹೂರಣ ಹೋಳಿಗೆ, ಬದನೆಕಾಯಿ, ಕುಂಬಳಕಾಯಿ ಬರ್ಥ, ಶೆಂಗಾ ಚಟ್ನಿ, ಬಗೆ ಬಗೆಯ ಕಾಳಿನ ಪಲ್ಯೆ ಸೇರಿದಂತೆ ಎಲ್ಲ ಅಡುಗೆಯ ಪದಾರ್ಥಗಳನ್ನು ಒಂದೇ ತಟ್ಟೆಯಲ್ಲಿ ಮಿಶ್ರಣ ಮಾಡಿ ಚೌಂಗಿ ಬಲೌವೋ ಚಿಕ್ಕಡಿ ಕಲವೋ ಎಂದು ಹೆಂಗಳಿಯರು ಹೇಳುತ್ತ ಭೂ ತಾಯಿಗೆ ಚರಗ ಚಲ್ಲಿದರು. ನಂತರ ಎಲ್ಲರೂ ಸಾಮೂಹಿಕವಾಗಿ ಭಾರಿ ಭೋಜನದ ಸವಿ ಉಂಡು ಬಳಿಕ ಹೆಣ್ಣು ಮಕ್ಕಳು ಹರಟೆಯಲ್ಲಿ ಮಗ್ನರಾದರೆ, ಮಕ್ಕಳು ನಗೆ ಚಟಾಕೆಯಲ್ಲಿ ತೆಲಾಡಿದರು. ಹಿರಿಯರು ವಿಶ್ರಾಂತಿಗೆ ಜಾರಿದರೆ, ಯುವಕರು ಬೇರೆ ಬೇರೆ ಆಟಗಳಲ್ಲಿ ತೊಡಗಿ ಸಂಜೆಯಾಗುತ್ತಿದ್ದಂತೆ ಇಡೀ ದಿನದ ಸಂಭ್ರಮವನ್ನು ಮೇಲಕು ಹಾಕುತ್ತಾ ಎಲ್ಲ ರೈತ ಕುಟುಂಬಗಳು ಮನೆಯ ದಾರಿ ಹಿಡಿಯುತ್ತಿದ್ದುದು ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಎಂ.ಎಂ.ಹಂಗರಗಿ, ವಿ.ಬಿ.ಕುರುಡೆ, ಬಿಇಓ ಮಹಾಂತೇಶ ಯಡ್ರಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಸಂಗನಗೌಡ ಪಾಟೀಲ ಅಗಸಬಾಳ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಚಂದ್ರಶೇಖರ ನಾಗರಬೆಟ್ಟ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮಹಾಂತೇಶ ನೂಲಾನವರ, ಶಾಂತಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ ಡಾ.ರಾಹುಲ ಯಂಪೂರೆ, ಪರಮಾನಂದ ಪಟ್ಟಣಶೆಟ್ಟಿ, ರೂಪಾ ಪಟ್ಟಣಶೆಟ್ಟಿ, ಲಕ್ಷ್ಮಿ ಯಂಪೂರೆ, ರಶ್ಮೀ ನೂಲಾನವರ, ಶ್ರೀಲಿಲಾ ಯಂಪೂರೆ, ಮಂಜುಳಾ ಹತ್ತಳ್ಳಿ, ರೇಣುಕಾ ಭೀ.ಯಂಪೂರೆ, ನವೀನ ಶೆಳ್ಳಗಿ, ರಾಕೇಶ ಯಂಪೂರೆ, ಹೇಮಾ ಚಾಕರೆ, ರಂಜಿತ ಯಂಪೂರೆ ಸೇರಿದಂತೆ ಅನೇಕರು ಸಂಭ್ರಮದಲ್ಲಿ ತೊಡಗಿದ್ದರು.

