ಲೇಖನ
– ಹೇಮಲತಾ
ಉದಯರಶ್ಮಿ ದಿನಪತ್ರಿಕೆ
ಹಳೇ ವಿದ್ಯಾರ್ಥಿಗಳ ಅಲ್ಲುಮಿನಿ ಕಾರ್ಯಕ್ರಮ ಜೂನ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿಗಳು ಅದೇ ಶಾಲೆಗೆ ಬಂದು ನಲಿದಿದ್ದರು, ಹಳೇ ನೆನಪುಗಳಲ್ಲಿ ಕೊಚ್ಚಿ ಹೋಗಿದ್ದರು, ತಮ್ಮ ಆಗಿನ ಉಪಾಧ್ಯಾಯರನ್ನು ನೆನೆದು ಭಾವುಕರಾಗಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹರೀಶನಿಗೆ ಅವನ ಗುರುಗಳಾದ ಸ್ವಾಮಿ ಮೇಷ್ಟ್ರನ್ನು ನೆನೆದು ಅವರ ಭೇಟಿಗೆ ಮನಸ್ಸು ಹಾತೊರೆಯಲಾರಂಭಿಸಿತು. ಕಾರ್ಯಕ್ರಮದ ಮರು ದಿನವೂ ಅಲ್ಲೇ ಉಳಿದು ಗುರುಗಳು ವಾಸವಾಗಿದ್ದ ಲಕ್ಷ್ಮಿ ಪುರಕ್ಕೆ ಹಣ್ಣಿನ ಬುಟ್ಟಿ ಮಹಾಲಕ್ಷ್ಮಿ ಸ್ವೀಟ್ ಅಂಗಡಿಯಿಂದ ಸಿಹಿ
ತಿಂಡಿಗಳು, ವುಲನ್ ಶಾಲ್ ಹಿಡಿದು ಹರೀಶ ಹೋದ. ಅಲ್ಲಿ ಸ್ವಾಮಿ ಮೇಷ್ಟ್ರ ಮನೆ ಇದ್ದ ಜಾಗದಲ್ಲಿ ದೊಡ್ಡ ಮಹಡಿ ಮನೆಯೊಂದು ಬೀಗಿ ನಿಂತಿತ್ತು. ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಸ್ವಾಮಿ ಮೇಷ್ಟ್ರ ಹೆಂಡತಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಮಾರಿದ್ದಾಗಿ ಹೇಳಿ ಅದು ಫಲಿಸದೇ ಮೃತರಾಗಿದ್ದು ತಿಳಿದು ವ್ಯಥಿತನಾದ. ಆಕೆಯ ನಗು ಮುಖ ಮನೆಗೆ ಹೋದಾಗ ಪ್ರೀತಿಯಿಂದ ಹಾಕುತ್ತಿದ್ದ ಕೈ ತುತ್ತು ನೆನಪಾಗಿ ಕಂಗಳು ತೆವವಾಗಿ ನೆನೆಯಿತು. ಮೇಷ್ಟ್ರು ವೃಧ್ಧಾಶ್ರಮದಲ್ಲಿದ್ದಾರೆಂದು ತಿಳಿದು ಹುಡುಕಿದಾಗ ವೃಧ್ದಾಶ್ರಮದ ಕಟ್ಟೆಯ ಮೇಲೆ ಸೋತ ಮುಖದಲ್ಲಿ ಮಾಸಿದ ಬಟ್ಟೆ ಬೆಳೆದ ಗಡ್ಡ ಮೀಸೆಗಳಲ್ಲಿ ಅವರನ್ನು ಕಂಡು ಧಾವಿಸಿದ. ತನ್ನಂತಹ ಸಾವಿರಾರು ಮಕ್ಕಳನ್ನು ತಿದ್ದಿ ಇಂದು ಮಂಕಾದ ಮುಖದಲ್ಲಿ ಕಳೆದು ಹೋದಂತಿದ್ದವರ ಬಳಿ ಕುಳಿತು ” ಸರ್” ಎಂದು ಅಕ್ಕರೆಯಿಂದ ಕರೆದ ಮಾತು ಅವರ ಕಿವಿ ತಲುಪಲೇ ಇಲ್ಲ. ಮಕ್ಕಳಿಲ್ಲದ ಅವರು ಶಿಷ್ಯರನ್ನೇ ಮಕ್ಕಳಂತೆ ಪ್ರೀತಿಸುತ್ತಿದ್ದರು.
ಅವರಿಗೊಂದಿಬ್ಬರು ಮಕ್ಕಳಿದ್ದಿದ್ದರೇ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ ಎನಿಸಿತು. ಮೂರು ಬಾರಿ ಕೂಗಿದಾಗ ತಿರುಗಿ ನೋಡಿದವರ ಕಂಗಳಲ್ಲಿ ಅಪರಿತರತ್ತ ಬೀರುವ ಪ್ರಶ್ನಾರ್ಥಕ ನೋಟವಿತ್ತು. ನಂತರ ವಿಚಾರಿಸಿದಾಗ ತಿಳಿದಿದ್ದು, “ಆಶ್ರಮಕ್ಕೆ ಅವರನ್ನು ಅವರ ನೆರೆ ಮನೆಯವರೊಬ್ಬರು ಬಂದು ಸೇರಿದಾಗಲೇ ಮಂಕಾಗೇ ಇದ್ದರು. ಅವರ ಮಡದಿ ತೀರಿ ಹೋದ ನೋವಿನಿಂದ ಎಂದು ಅತ ಹೇಳಿದರು. ವರ್ಷಗಳು ದಾಟಿದರೂ ಸಹ ಯಾರ ಜೊತೆಯೂ ಮಾತಿಲ್ಲ. ಊಟ ತುಂಬಾ ಸ್ವಲ್ಪ ಮಾಡುತ್ತಾರೆ. ಮೌನವಾಗಿ ಶೂನ್ಯ ದಿಟ್ಟಿಸುತ್ತಾ ಕೂರುತ್ತಾರೆ”. ಎಂದರು. ಹರೀಶನ ಮನಸ್ಸು ಹತ್ತಾರು ಯೋಚನೆಗಳ ಸುಳಿಯಲ್ಲಿ ಗಿರಕಿ ಹಾಕಲಾರಂಭಿಸಿದಾಗ ಮೌನವಾಗಿ ಅಲ್ಲಿಂದ ಎದ್ದು ರಸ್ತೆಯುದ್ದಕ್ಕೂ ನಡೆದ. ಅದು ಅನಾಥ ವೃಧ್ಧರ ಉಚಿತ ಆಶ್ರಮ. ವೈಯಕ್ತಿಕ ನಿಗ, ಉತ್ತಮ ಊಟ ನಿಯಮಿತವಾದ ವೈದ್ಯ ತಪಾಸಣೆ ಹೈ ಟೆಕ್ ವೃಧ್ಧಾಶ್ರಮದಂತೆ ಇರುವುದಿಲ್ಲ
ದಾನಿಗಳಲ್ಲೇ ಯಾರಾದರೂ ವೈದ್ಯರು ನೋಡಿ ಹೋಗುತ್ತಾರೆ ಅಷ್ಟೇ. ಎಲ್ಲವೂ ಯಾಂತ್ರಿಕ. ಇಷ್ಟು ಜನ ವೃಧ್ಧರಿಗೆ ವೈಯಕ್ತಿಕವಾಗಿ ಯಾರು ಪ್ರೀತಿ ತೋರುತ್ತಾರೆ? ಆದರೆ ಮೇಷ್ಟ್ರನ್ನು ಇದೇ ಸ್ಥಿತಿಯಲ್ಲೇ ಬಿಟ್ಟು ಹೋದರೇ ಮುಂದೆ ಖಿನ್ನತೆ ಮಾನಸಿಕ ಅಸ್ವಸ್ಥತೆಗೆ ತಿರುಗಿ ಹುಚ್ಚಾಸ್ಪತ್ರೆಯ ಪಾಲಾದರೇ! ಕಣ್ಣಲ್ಲಿ ಮತ್ತೆ ನೀರೂರಿತು. ತಾನೇನು ಲಕ್ಷಗಟ್ಟಲೇ ಸಂಬಳ ಪಡೆಯುವ ಅಧಿಕಾರಿಯಲ್ಲ. ದ್ವಿತೀಯ ದರ್ಜೆ ಗುಮಾಸ್ತ ಮಾತ್ರ. ಹೆಂಡತಿ ಸಹ ಸಣ್ಣ ಕೆಲಸದಲ್ಲಿರುವವಳು. ಮಗುವಿನ ಪಾಲನೆಗೆ ಈಗಾಗಲೇ ಹೆಚ್ಚು ಖರ್ಚು ಬರುತ್ತಿದೆ. ಮೇಷ್ಟ್ರ ಹೊಣೆ ಹೊತ್ತು, ಅವರ ವೈದ್ಯಕೀಯ ವೆಚ್ಚವನ್ನು ತಮ್ಮಿಂದ ಭರಿಸಲು ಸಾಧ್ಯವೇ? ಬೇಡ ಆಗಾಗ ಬಂದು ನೋಡಿ ಹೋದರೆ ಸಾಕೆನಿಸಿತು. ಆದರೆ ಪುನ; ಆಶ್ರಮಕ್ಕೆ ಬಂದಾಗ ಅದೇ ಸ್ಥಿತಿಯಲ್ಲಿದ್ದ ಅವರನ್ನು ಕಂಡು ಕರುಳು ಕಿವುಚಿ ಹೆಂಡತಿಯ ಸಲಹೆ ಕೇಳಿದಾಗ ಗಂಡನ ಮನೋವ್ಯಥೆ ಆಕೆಗೆ ಅರ್ಥವಾಯ್ತು. ಹೆತ್ತ ತಾಯಿ ತಂದೆಯನ್ನು ಎಳೇ ವಯಸ್ಸಿನಲ್ಲೇ ಕಳೆದುಕೊಂಡಿದ್ದ ಅವಳು ಅವರಲ್ಲಿ ತಂದೆಯನ್ನು ಕಾಣಲು ನಿಶ್ಚಯಿಸಿ ಕರೆ ತರಲು ಹೇಳಿದಳು. ಅವರನ್ನು ಕರೆದೊಯ್ಯಲು ಇರುವ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿ ಹರೀಶ ಅಂಗಡಿಯಲ್ಲಿ ಅವರಿಗೆ ಷರ್ಟ್ ಪಂಚೆಗಳನ್ನು ಖರೀದಿಸಿ ಊರಿಗೆ ಅವರೊಂದಿಗೆ ಬಂದ.

ನಿಯಮಿತ ವೈದ್ಯಕೀಯ ಚಿಕಿತ್ಸೆ, ಮನೆಯಲ್ಲಿನ ಪ್ರೀತಿಯ ವಾತಾವರಣ ಮೇಷ್ಟ್ರಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆರಂಭವಾದವು. ಎರಡು ವರ್ಷದ ಪುಟಾಣಿ ವಿಠಲ ಅವರು ಗುಣವಾಗಲು ಹೆಚ್ಚು ಕಾರಣನಾದ. ಕೌನ್ಸಿಲಿಂಗ್, ದಂಪತಿಗಳ ನಿರ್ವಾಜ್ಯ ಪ್ರೀತಿ ಸೇವೆಗಳು, ಆರಂಭದ ಹಂತದಲ್ಲಿ ಇದ್ದ ಅವರ ಖಿನ್ನತೆಯನ್ನು ಗುಣ ಪಡಿಸಿತ್ತು. ಈಗ ಮೇಷ್ಟ್ರು ಮಗುವಿನೊಂದಿಗೆ ಆಡುತ್ತಾ ಸಂಜೆ ಪಾರ್ಕ್ ನಲ್ಲಿ ಆಡಿಸುತ್ತಾ, ಅವನಿಗೆ ಕತೆ ಹೇಳುತ್ತಾ ಸುಖಿಯಾಗಿದ್ದರು. ಹರೀಶ ಪದ್ಮಳನ್ನು ಅವರು ಬಲವಂತವಾಗಿ ಮನೆ ಪಾಠ ಮಾಡುತ್ತೇನೆಂದು ಒಪ್ಪಿಸಿದ್ದರು. ಕೆಲವು ಅಕ್ಕ ಪಕ್ಕದ ಗೆಳೆಯರ ಸ್ನೇಹ ಅವರನ್ನು ಪುನ: ಜೀವನ್ಮುಖಿಯನ್ನಾಗಿಸಿತ್ತು. ತಮಗಿಲ್ಲದ ಮಗ ಸೊಸೆಯನ್ನು ಹರೀಶ ದಂಪತಿಗಳಲ್ಲಿಯೂ ವಿಠಲನಲ್ಲಿ ಮೊಮ್ಮಗನನ್ನೂ ಕಾಣುತ್ತಿದ್ದರು. ಸಣ್ಣ ಪುಟ್ಟ ಮನೆ ಕೆಲಸಗಳೂ ಮಾಡುತ್ತಿದ್ದರು. ದಿನಕ್ಕೆ ಎರಡು ಮೂರು ಬ್ಯಾಚ್ ಪಾಠ ಮಾಡುತ್ತಾ ಮಕ್ಕಳ ಬುಧ್ದಿ ಭಾವವನ್ನು ಮೊದಲಿನಂತೆಯೇ ತಿದ್ದಿ ಬೆಳೆಸುತ್ತಿದ್ದ ಮೇಷ್ಟ್ರನ್ನು ಕಂಡು ದಂಪತಿಗಳು ತಮ್ಮ ಶ್ರಮ ಸಾರ್ಥಕವಾಯ್ತೆಂದು ಸಂತಸ ಪಟ್ಟರು.
ಹರೀಶ ಪದ್ಮ ಇಬ್ಬರೂ ಅವರನ್ನು ” ಅಪ್ಪ” ಎಂದು ಕರೆದರೇ ವಿಠಲ ”ತಾತ” ಎಂದಾಗ ಮೇಷ್ಟ್ರ ಮುಖದಲ್ಲಿ ಸಹಸ್ರ ದೀಪಗಳ ಬೆಳಕು ಮೂಡುತ್ತಿತ್ತು. ಪ್ರೀತಿ ಪಡೆಯಲೂ ಪ್ರೀತಿ ನೀಡಲು ರಕ್ತ ಸಂಬಂಧವೇ ಆಗಬೇಕಿಲ್ಲ
ಮನುಷ್ಯರನ್ನು ಪ್ರೀತಿಸುವ, ಗೌರವಿಸುವ ಹೆರವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿರುವ ಯಾರು ಬೇಕಾದರೂ ಸಹಾಯಕ್ಕೆ ಯಾರೂ ನಿಲ್ಲಬಹುದು, ಹಿಡಿ ಪ್ರೀತಿ ಬೊಗಸೆಯಷ್ಟು ಕಾಳಜಿ, ಹೃದಯಕ್ಕೆ ” ನಿಮ್ಮ ಅಗತ್ಯ ನಮಗಿದೆಯೆಂಬ ಆಪ್ತ ಭಾವ ಅನಾರೋಗ್ಯದ ಸಮಯದಲ್ಲಿ ಕಾಳಜಿ ಮಕ್ಕಳು ಮೊಮ್ಮಕಳ ಒಡನಾಟ ಇವಿಷ್ಟು ವೃದ್ಧಾಪ್ಯವನ್ನು ಸಹನೀಯವಾಗಿಸಬಲ್ಲದು. ಈ ಗುಟ್ಟನ್ನು ಜಾತಿ ಕುಲ ಕಡೇಪಕ್ಷ ರಕ್ತ ಸಂಬಂಧವೂ ಇಲ್ಲದ ಹರೀಶ ಅರಿತು ತನ್ನ ಗುರುಗಳ ಕಾಳಜಿ ಆರೈಕೆಗೆ ವೃದ್ಧಾಪ್ಯದ ಆಸರೆಗೆ ನಿಂತಿದ್ದ. ಇದನ್ನೆಲ್ಲಾ ನೆನೆದಾಗ ಸ್ವಾಮಿ ಮೇಷ್ಟ್ರ ಕಂಗಳು ತಮ್ಮ ಮೆಚ್ಚಿನ ಶಿಷ್ಯನನ್ನು ಕಂಡಾಗ ವಂದನೆ ಹೇಳುತ್ತಿದ್ದವು.
