ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಕುರಿತು ನಡೆದ ಪೂರ್ವಭಾವಿ ಸಭೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಹೋರಾಟ ನಡೆದು ಸಾಕಷ್ಟು ದಿನಗಳು ಕಳೆದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೋರಾಟ ಹೋರಾಟವಾಗಿಯೇ ಉಳಿದಿದೆ. ಹಾಗಾಗಿ ಈ ಹೋರಾಟದ ಮತ್ತೊಂದು ಭಾಗವಾಗಿ ಬರುವ ದಿನಗಳಲ್ಲಿ ಆಲಮಟ್ಟಿಯಿಂದ ಯಾದಗಿರಿಯ ವರೆಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೋರಾಟದ ಪ್ರಮುಖರಾದ ಬಸಯ್ಯ ನಂದಿಕೇಶ್ವರಮಠ ತಿಳಿಸಿದರು.
ಪಟ್ಟಣದ ಹಳೆಯ ನ್ಯಾಯಾಲಯದ ಬಳಿ ಇರುವ ಸಾರ್ವಜನಿಕ ವಾಚನಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರೈಲನ್ನೇ ಹೋಲುವ ವಾಹನವನ್ನು ತಯಾರಿಸಿ ಮೂರರಿಂದ ನಾಲ್ಕು ದಿನಗಳ ಕಾಲ ಜನಜಾಗೃತಿ ಯಾತ್ರೆಯ ಮೂಲಕ ರೈಲು ಮಾರ್ಗದ ಪ್ರತೀ ಹಳ್ಳಿಗಳಿಗೆ ಸಂಚರಿಸಿ ಜನತೆಯ ಸಹಿ ಸಂಗ್ರಹಿಸುವದು. ಬಳಿಕ ಪ್ರಮುಖರು ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಸಾಂಕೇತಿಕ ಧರಣಿ ನಡೆಸಿ, ರೈಲಿನಿಂದ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗಾಗುವ ಲಾಭಗಳ ಬಗ್ಗೆ ಮನವಿ ಸಲ್ಲಿಸಿದಲ್ಲಿ ಈ ಬಾರಿ ಕೇಂದ್ರದ ಬಜೆಟ್ ನಲ್ಲಿ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರುವ ಆತ್ಮ ವಿಶ್ವಾಸವನ್ನು ಹೊಂದಿದ್ದೇವೆ. ಹೋರಾಟಕ್ಕೆ ಹಿಂದೆ ನಿರಂತರ ಹೋರಾಟದಲ್ಲಿ ಭಾಗಿಯಾದ ಎಲ್ಲ ಮಹನೀಯರು ಸಾಥ್ ನೀಡುತ್ತಿದ್ದು, ರೈಲು ಮಾರ್ಗದ ಪ್ರತೀ ಹಳ್ಳಿಗಳ ಮತ್ತು ಪಟ್ಟಣಗಳ ಜನತೆ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರ ಬೆಂಬಲ ಅತ್ಯಂತ ಅವಶ್ಯವಾಗಿದೆ. ಹೋರಾಟದ ಕುರಿತು ಹಮ್ಮಿಕೊಳ್ಳುವ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು.
ಪಟ್ಟಣದಲ್ಲಿ ಮೊದಲು ಪ್ರಾರಂಭವಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರಾದ ಬಾಬು ಬಿರಾದಾರ ಮಾತನಾಡಿ, ಈ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು. ಜನಪ್ರತಿನಿಧಿಗಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದು. ಜನಜಾಗೃತಿಗೆ ನಮ್ಮ ಬೆಂಬಲ ಇದೆ. ತನು, ಮನ, ಧನದಿಂದ ನಾನು ಭಾಗಿಯಾಗುವೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್.ಎಸ್.ಮಾಲಗತ್ತಿಯವರು ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಈ ಹೋರಾಟ ಪ್ರಾರಂಭವಾದರೂ ರೈಲು ಬರದಿರುವುದು ಜನಪ್ರನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಈ ಭಾಗಕ್ಕೆ ರೈಲು ಮಾರ್ಗ ಪ್ರಾರಂಭವಾಗುವದರಿಂದ ಈ ಭಾಗದ ಮೂರ್ನಾಲ್ಕು ಜಿಲ್ಲೆಯ ಭತ್ತ, ತೊಗರಿ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನಜಾಗೃತಿ ಯಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಖಂಡಿತ ರೈಲಿಗೆ ಹಸಿರು ನಿಶಾನೆ ದೊರೆಯಲಿದೆ ಎಂದರು.
ತಾಳಿಕೋಟೆ ಭಾಗದಲ್ಲಿ ಹೋರಾಟದ ಪ್ರಮುಖರಾದ ನಿವೃತ್ತ ಪ್ರಾಂಶುಪಾಲರಾದ ರೇವಣಸಿದ್ದಪ್ಪ ಜಾಲವಾದಿ, ಪಟ್ಟಣದ ಪ್ರಮುಖರಾದ ಅಶೋಕ ರೇವಡಿ, ಬಿ.ಎಸ್.ಮೇಟಿ, ಉದಯ ರಾಯಚೂರ, ಕಾಶಿಬಾಯಿ ರಾಂಪೂರ ಮತ್ತೀತರರು ಈ ಭಾಗದಲ್ಲಿ ರೈಲು ಬಂದಲ್ಲಿ ಆಗುವ ಪ್ರಯೋಜನಗಳು, ಹೋರಾಟಕ್ಕೆ, ಜನಜಾಗೃತಿಗೆ ಬೇಕಾಗುವ ಸಿದ್ಧತೆಗಳ ಬಗ್ಗೆ ಮಾತನಾಡಿದರು.
ಅರವಿಂದ ಲದ್ದೀಮಠ, ಬುಡ್ಡಾ ನಾಯ್ಕೋಡಿ, ಮಹೇಶ ಕಲ್ಯಾಣಮಠ, ಶಿವರಾಜ ರಾಠೋಡ, ಪರಶುರಾಮ ನಾಲವಾಡ, ರವಿಚಂದ್ರ ನಾಲತವಾಡ, ಕಿರಣ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.

