ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ | “ಜ್ಞಾನಾರಾಧನೆ” ವಿಚಾರ ಗೋಷ್ಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು. ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ ಎಂದು ಖ್ಯಾತ ಭಾಷಣಕಾರ ಮಹೇಶ ಮಾಶಾಳ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ “ಜ್ಞಾನಾರಾಧನೆ” ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮೆಲ್ಲರನ್ನು ಸತ್ಯದ ದಾರಿಯಲ್ಲಿ ನಡೆಯಿರಿ ಎಂದು ತೋರಿಸಿಕೊಟ್ಟವರು. ನಮ್ಮಲ್ಲಿರುವ ಎಲ್ಲ ಹೊಲಸನ್ನು ಹೊರಗೆ ಹಾಕಿ ನಮ್ಮನ್ನ ಮತ್ತು ನಮ್ಮ ಬದುಕನ್ನು ಶುಚಿಗೊಳಿಸಿದ ಮಹಾತ್ಮರು. ನಮ್ಮೆಲ್ಲರ ಮನಸ್ಸೊಳಗೆ ಅರಿವಿನ ದೀಪ ಹಚ್ಚಿದ ಅಪ್ಪನವರು ನಮ್ಮ ಮನಸ್ಸಲ್ಲಿ ಎಂದೆಂದಿಗೂ ಇರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬದುಕಿದ ಜೀವನ ಶೈಲಿ ಇಡೀ ಜಗತ್ತಿನ ಸಂತ ಸಮೂಹಕ್ಕೆ ಹಾಗೂ ಅವರ ಸರಳತೆ ನಮ್ಮೆಲ್ಲರ ಬದುಕಿಗೆ ಮಾದರಿ ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೋಂಡ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಹುಟ್ಟಿದ ಭೂಮಿಯಲ್ಲಿ ಹುಟ್ಟಿದ ನಾವೇ ಪುಣಿತರು. ಶ್ರೀ ಅಪ್ಪಾಜಿಯವರ ಮಾತುಗಳಲ್ಲಿ ಬರೀ ನಾಲ್ಕಾಣೆ ಭಾಗ ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂದರು.
ಸಿದ್ದಣ್ಣ ಲಂಗೂಟಿ ಮಾತನಾಡಿ, ಸಿದ್ದೇಶ್ವರ ಅಪ್ಪಗಳು ವಿಶ್ವಜ್ಞಾನಿಗಳು, ಅವರು ಆಧ್ಯಾತ್ಮ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಆಶ್ರಮದಲ್ಲಿದ್ದ ಎಲ್ಲ ಗುರುಗಳು ವಿದ್ಯಾರ್ಥಿಗಳಲ್ಲಿ ವಿಶ್ವ ತತ್ವಜ್ಞಾನದ ಚಿಂತನೆಗೆ ಕರೆದುಕೊಂಡು ಹೋದವರು ಪೂಜ್ಯ ಸಿದ್ದೇಶ್ವರ ಅಪ್ಪಗೋಳು ಎಂದು ಹೇಳಲು ಹರ್ಷವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮುಚಳಂಬಾ ನಾಗಭೂಷಣ ಶಿವಯೋಗಿಗಳ ಸಂಸ್ಥಾನ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಮಯದಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಯವರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

