ಹರಳಯ್ಯ ಶಾಲೆಗೆ ಬಿಇಒ ಭೇಟಿ | ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಶಿಕ್ಷಣ ಕ್ಷೇತ್ರ ಪವಿತ್ರ ಕ್ಷೇತ್ರ. ಈ ರಂಗದಲ್ಲಿ ಶ್ರದ್ಧಾ,ಭಕ್ತಿಯ ನಿಷ್ಕಲ್ಮಶತೆ ಭಾವದಿಂದ ಕಾಯಕ ಗೈಯುವುದು ಬಲು ಮುಖ್ಯ. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತಾಗ ಶೈಕ್ಷಣಿಕ ಶ್ರಯೋಭಿವೃದ್ಧಿ ಕಾಣಲು ಸಾಧ್ಯ. ಆ ದಿಸೆಯಲ್ಲಿ ಶಿಕ್ಷಕರು, ಪಾಲಕರು, ಪೋಷಕರು ಪ್ರಾಂಜಲ್ಯ ಮನಸಿನಿಂದ ಶ್ರಮಿಸಬೇಕು. ಜೊತೆಗೆ ಮಕ್ಕಳ ಬದ್ದತೆಯ ಓದಾಭ್ಯಾಸದ ಸಹಭಾಗಿತ್ವವುಬೇಕು. ಅಂದಾಗ ಮಾತ್ರ ಉತ್ತಮ ರೀತಿಯಲ್ಲಿ ಶೈಕ್ಷಣಿಕ ಪರಿಸರದ ವ್ಯವಸ್ಥೆ ರೂಪಗೊಳ್ಳುತ್ತದೆ ಎಂದು ಜಮಖಂಡಿ ತಾಲ್ಲೂಕಿನ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ಕಲಿಕಾ ಪ್ರಕ್ರಿಯೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಶಿಕ್ಷಕ ಸಮೂಹ ತೀವ್ರ ಗಮನ ಹರಿಸುವ ಮೂಲಕ ವಿಶೇಷ ಪರಿಹಾರ ಬೋಧನೆ ಕೈಗೊಂಡ ಪರೀಕ್ಷಾ ಮುಖ್ಯ ವಾಹಿನಿಗೆ ಸನ್ನದುಗೊಳಿಸಬೇಕೆಂದರು.
ಶಿಕ್ಷಕರಲ್ಲಿ ಸೂಕ್ಷ್ಮತೆಯ ಗ್ರಹಣಶಕ್ತಿ ಬೆರೆಯಬೇಕು. ಆ ಮೂಲಕ ಮಕ್ಕಳಲ್ಲಿ ಕಲಿಕಾ ಪಾಠಾಸಕ್ತಿ ಅಲಿಸುವ ಭಾವತರಂಗಗಳನ್ನು ಅರಳಿಸುಬೇಕು.ಅಂತಹ ಕೌಶಲ್ಯ ಹೊಂದಬೇಕು. ಓದು,ಬರಹದ ಜ್ಞಾನಾಸಕ್ತಿಯನ್ನು ಸೃಜನಾತ್ಮಕ ಸೃಷ್ಟಿಸಲು ಮುಂದಾಬೇಕು. ಪಠ್ಯದೊಂದಿಗೆ ತಮ್ಮದೇ ವಿಶೇಷ ಕಲ್ಪನೆಯ ಜ್ಞಾನ ಧಾರೆ ಎರೆದು ಹುರಿದುಂಬಿಸಬೇಕು. ಮಕ್ಕಳ ಜೀವನ ರಂಗಕ್ಕೆ ಬುದ್ದಿ ವಿಕಾಸ ಚುರುಕುಗೊಳ್ಳಬೇಕು. ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಶಿಕ್ಷಣದಿಂದ ಮಕ್ಕಳನ್ನು ಸರ್ವತ್ತೋಮವಾಗಿ ಸಶಕ್ತರನ್ನಾಗಿಸುಲು ಸಾಧ್ಯ. ಅದಕ್ಕೆ ಗುರುವಿನ ಅನುಗ್ರಹ ಬೇಕು. ಗುರು ತತ್ವ ಧೇಯವಾಗಿಸಿ ಶಿಸ್ತುಬದ್ಧ, ಶ್ರದ್ಧೆಯ ಸಂಯಮ ಭಾವದಿಂದ ಶಿಕ್ಷಕರು ಕರ್ತವ್ಯಗಳನ್ನು ಸಮಪಿ೯ಸಿದಾಗ ಮಕ್ಕಳ ಬುದ್ಧಿಮತ್ತೆ ವಿಕಾಸಕ್ಕೆ ದಾರಿ ದೀಪವಾಗುತ್ತದೆ.ಅವರ ಬಾಳು ಬೆಳಗುತ್ತದೆ ಎಂದರು.
ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ವಿಶೇಷ ಸಂವಾದ ನಡೆಸಿ ಶೈಕ್ಷಣಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ ಅವರು, ಮಕ್ಕಳಿಗೆ ಪರೀಕ್ಷಾ ಪರ್ವದ ಅರಿವು ಮೂಡಿಸಿದರು.ಉಪಯುಕ್ತ ಟಿಪ್ಸ್, ಸಲಹೆಗಳನ್ನು ನೀಡಿದರು. ಪರೀಕ್ಷಾ ಹಬ್ಬಕ್ಕೆ ಮಕ್ಕಳು ಈಗಿಂದಲೇ ಪೂರ್ವ ತಯಾರಿಯಾಗಬೇಕು. ಮಾನಸಿಕವಾಗಿ ಸಿದ್ದತೆಗೊಂಡು ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಎಂದರು.
ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಜಿ.ಎಸ್.ವಿಜಾಪೂರ ಮಾತನಾಡಿ, ಶೈಕ್ಷಣಿಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆತರಬೇಕು. ಆ ನಿಟ್ಟಿನಲ್ಲಿ ನಿರಂತರ ಶಿಕ್ಷಕರು ಶ್ರಮಿಸಬೇಕು. ಮಕ್ಕಳನ್ನು ಸಾಧ್ಯವಾದಷ್ಟು ಒತ್ತಡ ರಹಿತ ಪರೀಕ್ಷೆಗೆ ಅಣಿಗೊಳಿಸಲು ಸಂಕಲ್ಪ ಮಾಡಬೇಕು. ಅಸಾಧ್ಯವಾದುದನ್ನು ವಿಶ್ವಾಸವೆಂಬ ದಿವ್ಯತೆ ಶಕ್ತಿಯಿಂದ ಪರಿಣಾಮಕಾರಿ ರೀತಿಯಲ್ಲಿ ಸಾಧ್ಯವಾಗಿಸಿಕೊಳ್ಳಬಹುದು.ಪರೀಕ್ಷೆ ಎಂಬುದನ್ನು ಉತ್ಸವದ ರೀತಿ, ನೀತಿಯಲ್ಲಿ ಮಕ್ಕಳು ಸಂಭ್ರಮಿಸುವಂತೆ ಮಾಡಬೇಕು. ಮಾದರಿ ಪ್ರಶ್ನೋತ್ತರದ ಪತ್ರಿಕೆಗಳು ಮಕ್ಕಳೆದುರಿಗೆ ತೆರೆದಿಟ್ಟು ಪರಿಶ್ರಮದಿಂದ ಬಿಡಿಸುವಂತೆ ಪ್ರೇರಿಪಿಸಬೇಕು. ಒತ್ತಡ ನಿವಾರಿಸು ಸೂಕ್ತ ಕ್ರಮಗಳನ್ನು ತಿಳಿ ಹೇಳಿ ಪರೀಕ್ಷೆಗೆ ಮಕ್ಕಳನ್ನು ತಯಾರುಗೊಳಿಸಿ ಎಂದರು.
ಸರಿಯಾದ ಯೋಚನೆ, ಯೋಜನೆಯ ಗುರಿಯೊಂದಿಗೆ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಪೂರಕವಾಗುವ ವಿಶೇಷ ಪರಿಹಾರ ಬೋಧನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಯ ವ್ಯರ್ಥವಾಗಿ ಪೋಲಾಗದಂತೆ ನೋಡಿಕೊಳ್ಳಬಹುದೆಂದರು.ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ತಾವೆಲ್ಲ ಕಾರಣವಾಗಬೇಕು ಎಂದು ಶಿಕ್ಷಕ ಹಾಗೂ ಮಕ್ಕಳ ಬಳಗಕ್ಕೆ ಸಲಹೆ ನೀಡಿದರು.
ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಹಿರಿಯ ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಜಿ.ಆರ್.ಜಾಧವ, ಶ್ರೀಶೈಲ ಹುಣಶಿಕಟ್ಟಿ, ಸಹನಾ ಕಲ್ಯಾಣಿ, ಶೃತಿ ಲಿಗಾಡೆ ಇತರರಿದ್ದರು.
ಮಕ್ಕಳಿಗೆ ಬಿಇಒ ಕಿವಿಮಾತು
ಪರೀಕ್ಷೆ ಸಮೀಪಿಸುತ್ತಿದೆ. ಯಾವುದೇ ಕಾರಣಕ್ಕೂ ಆತಂಕ, ಭಯಕ್ಕೊಳಗಾಗದೆ ಆತ್ಮವಿಶ್ವಾಸದಿಂದ ಎದುರಿಸು ಮನೋಭಾವದ ಸ್ಥೈರ್ಯಯುತ ಬಲ ಮನಸ್ಸಿನಲ್ಲಿ ತುಂಬಿಕೊಳ್ಳಿ, ಎಲ್ಲ ವಿಷಯಗಳ ಪಾಠಾದ್ಯಾಯಗಳು ಸರಿಯಾಗಿ ಮನನ ಮಾಡಿಕೊಳ್ಳಿ, ಓದು-ಬರಹಕ್ಕೆ ಆದ್ಯತೆ ನೀಡಿ. ಈಗ ಒಂದೆರಡು ತಿಂಗಳು ಅದ್ಯಯನದಲ್ಲಿ ಮಗ್ನರಾಗಿ, ಪುಸ್ತಕಗಳನ್ನು ಸ್ನೇಹಿಗಳನ್ನಾಗಿಸಿಕೊಳ್ಳಿ. ಮೊಬೈಲ್, ಟಿವಿ, ಅನಗತ್ಯ ವಿಷಯಗಳಿಂದ ಸ್ವಲ್ಪ ದೂರಯಿರಿ. ನಿಮ್ಮ ಭವಿಷ್ಯತ್ತಿನ ಆದರ್ಶಪ್ರಾಯ ಜೀವನ ರೂಪಕ್ಕೆ ನೀವೇ ಈಗ ಸ್ವಯಂ ಪ್ರೇರಿತ ನಿರೂಪಕರಾಗಿ. ಗುರುಗಳ, ತಂದೆ,ತಾಯಿಗಳ ನುಡಿಗಳು ಮೌಲ್ಯಯುತವಾಗಿವೆ. ಅವುಗಳನ್ನು ಆಲಿಸಿ ಪಾಲಿಸಿ. ಆದರ್ಶ ಮಕ್ಕಳಾಗಿ ಮಿನುಗಿ. ನಿಮ್ಮ ಮನಸ್ಥಿತಿ ಕದಡದಂತೆ ನೋಡಿಕೊಳ್ಳಿ. ಹಿತಮಿತ ಆಹಾರದೊಂದಿಗೆ ಏಕಾಗ್ರತೆ ಕ್ಷಮತೆ ಕಾಯ್ದುಕೊಂಡು ಅಭ್ಯಾಸದಲ್ಲಿ ನಿರತರಾಗಿ. ಮನೆಯಲ್ಲಿ ಪ್ರಶಸ್ತ ಸ್ಥಳವಾಕಾಶದ ಜಾಗ ಓದಿಗೆ ಆಯ್ದುಕೊಳ್ಳಿ. ಸಾಧನೆ ಎಂಬುದು ಕಠಿಣಾತೀತ ಪರಿಶ್ರಮದಿಂದ ಲಭ್ಯ. ಆ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಪಠ್ಯ ಪುಸ್ತಕದ ಸಾಂಗತ್ಯದಲ್ಲಿ ಬೆರೆತು ಗುಣಾತ್ಮಕ ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಲು ಮುಂದಾಗಬೇಕು ಎಂದು ಬಿಇಒ ಅಶೋಕ ಬಸಣ್ಣವರ ಮಕ್ಕಳಿಗೆ ಸಮಯೋಚಿತ ಮಾಹಿತಿ, ಸಲಹೆ ನೀಡಿದರು.

