ಅಭಿಮತ
– ವೀರೇಶ ಧೂಪದಮಠ
ಉದಯರಶ್ಮಿ ದಿನಪತ್ರಿಕೆ
ಜನಪ್ರತಿನಿಧಿ ಎನಿಸಿಕೊಂಡಿರುವ ರಾಜಕಾರಣಿಗಳು ಜನರ ಸೇವೆಯನ್ನು ಮಾಡಲು ರಾಜಕೀಯಕ್ಕೆ ಬಂದವರು. ಜನರ ಕಷ್ಟ, ಸಮಸ್ಯೆಗಳನ್ನು ಕಾನೂನಿನ ಪ್ರಕಾರ ಸರಿಪಡಿಸಲು ಯಾವ ರೀತಿ ಸಾಧ್ಯತೆ ಇದೆ, ಅದನ್ನು ಜಾರಿಗೆ ತರಲು ರಾಜಕಾರಣಿಗಳು ಪ್ರಯತ್ನಿಸುತ್ತಾರೆ. ಆದರೆ ಇತ್ತೀಚಿನ ರಾಜಕೀಯದಲ್ಲಿ ಜನಪ್ರತಿನಿಧಿಗಳ ಬೆಳವಣಿಗೆ ಜನರ ಸಮಸ್ಯೆ, ರಾಜ್ಯದ ಸಮಸ್ಯೆಗಳನ್ನೆಲ್ಲ ಬದಿಗೊತ್ತಿ, ಪರಸ್ಪರ ರಾಜಕೀಯ ನಾಯಕರ ಕಿತ್ತಾಟ. ಆರೋಪ ಪ್ರತ್ಯರೋಪ, ಜಾತಿ, ಧರ್ಮದಲ್ಲಿ ರಾಜಕೀಯ, ನೆಲ, ಜಲ, ಭಾಷೆ ವಿಷಯದಲ್ಲಿ ಕಿರಿಕ್ ಸೇರಿದಂತೆ ಅವಾಚ್ಯ ಶಬ್ದ, ಅವಹೇಳನಕರ ಭಾಷಣಕ್ಕೆ ಹೆಸರುವಾಸಿಯಾಗುತ್ತಿದೆ.
ಈ ಮೇಲಿನ ಯಾವುದೇ ಘಟನೆ ಆಕಸ್ಮಿಕವಾಗಿ ಬಾಯಿ ತಪ್ಪಿನಿಂದ ನಡೆದರು ಬಹಿರಂಗವಾಗಿ ಕ್ಷಮೆ ಯಾಚನೆ ಇಲ್ಲ, ಕ್ಷಮಾಪಣೆಯ ಲಿಖಿತ ಪತ್ರ ಇಲ್ಲ. ಹೀಗೆ ತಿಂಗಳುಗಟ್ಟಲೆ ಬೆಳೆಸಿಕೊಂಡು ಹೋಗಿ ಬಿಡುವುದು. ಒಟ್ಟಿನಲ್ಲಿ ಇಂತಹ ಸನ್ನಿವೇಶ ದಿನನಿತ್ಯ ನೋಡಿ ತಲೆನೋವಿನ ಮಾತ್ರೆ ತಗೊಳ್ಳುವ ಹಂತಕ್ಕೆ ಬರುತ್ತದೆ. ರಾಜಕಾರಣಿಗಳು ಎನಿಸಿಕೊಂಡವರಿಗೆ ಬೇಕಾದಷ್ಟು ಕೆಲಸ ಕಾರ್ಯಗಳಿವೆ. ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು ದಕ್ಷಿಣ ಕರ್ನಾಟಕ ಮಗ/ಮಗಳು ಉತ್ತರ ಕರ್ನಾಟಕದ ಸೊಸೆ/ಅಳಿಯ ಆಗಿರುತ್ತಾರೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನದೇ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಸಮಗ್ರ ಕರ್ನಾಟಕದಲ್ಲಿ ಕಿತ್ತೂರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದೆ ರಸ್ತೆ, ಸೇತುವೆ, ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದೆ. ಕಲ್ಯಾಣ ಕರ್ನಾಟಕ ಮಾದರಿ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಇಲ್ಲವೇ ಕಿತ್ತೂರ ಕರ್ನಾಟಕ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅಗತ್ಯವಿದೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತು ರಾಜ್ಯದ ಕೇಂದ್ರ ಸಚಿವರು, ಸಂಸದರು ಪ್ರಯತ್ನಿಸುವ ಒತ್ತಡ ತರುವ ಕೆಲಸವಾಗಲಿ.

