ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಬಯಲಾಟಗಳು ಕೇವಲ ಮನರಂಜನೆ ಅಲ್ಲ. ಜೀವನಕ್ಕೆ ಬೇಕಾದ ಕಲೆ – ನೆಲೆ ಬಯಲಾಟದಲ್ಲಿ ಕಾಣುತ್ತೇವೆ. ಟಿ ವಿ ಮತ್ತು ಮೊಬೈಲ್ ಪ್ರಭಾವದಿಂದ ಬಯಲಾಟ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಬಯಲಾಟ ಆಕಾಡೆಮಿ ಅಧ್ಯಕ್ಷ ಡಾ. ಕೆ ಆರ್ ದುರ್ಗಾದಾಸ್ ಅಭಿಪ್ರಾಯಪಟ್ಟರು.
ತಾಳಿಕೋಟೆ ತಾಲೂಕು ಮಿಣಜಗಿ ಗ್ರಾಮದ ಗ್ರಾಮದೇವತೆ ಜಾತ್ರೆ ಪ್ರಯುಕ್ತ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಮತ್ತು ಜಾತ್ರಾ ಸಮಿತಿ ಸಹಯೋಗದಲ್ಲಿ ” ಬಯಲಾಟ ವಿಚಾರ ಸಂಕಿರಣ ಮತ್ತು ಪ್ರದರ್ಶನ ” ಉದ್ಘಾಟಿಸಿ ಮಾತನಾಡುತ್ತ ಜಾತ್ರೆ ಉತ್ಸವಗಳ ಮೂಲಕ ನಮ್ಮ ಮಕ್ಕಳಲ್ಲಿ ಸಂಸ್ಕೃತಿ ಬೆಳೆಸುತ್ತಾ, ನಮ್ಮ ಹಳ್ಳಿಗಳನ್ನು ಸಾಂಸ್ಕೃತಿಕ ನೆಲೆಗಳನ್ನಾಗಿ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ ಡಿ ಆರ್ ಮಳಖೇಡ , ಬಯಲಾಟಗಳಲ್ಲಿ ಗ್ರಾಮೀಣ ಬದುಕು ಅನಾವರಣಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಯಲಾಟ ಪ್ರದರ್ಶನ ವಿರಳವಾಗುತ್ತಿದೆ. ಯುವ ಜನಾಂಗ ಜಾನಪದ ಪರಂಪರೆಯಿಂದ ದೂರಾಗುತ್ತಿರುವುದು ಕಳವಳಕಾರಿ ವಿಷಯ ಎಂದರು.
” ಬಯಲಾಟಗಳಲ್ಲಿ ಲೋಕನೀತಿ ” ಕುರಿತು ಪ್ರೊ ದೇವೇಂದ್ರ ಗೋನಾಳ ಮತ್ತು ” ಗ್ರಾಮದೇವತೆ ಜಾತ್ರೆಗಳ ಮಹತ್ವ” ಕುರಿತು ಉಪನ್ಯಾಸ ನೀಡಿ ಬಯಲಾಟಗಳಲ್ಲಿ ಪ್ರತಿ ಕುಟುಂಬ ಅನಾವರಗೊಳ್ಳುತ್ತಿದೆ. ಗ್ರಾಮ ದೇವತಾ ಆರಾಧನೆಯಲ್ಲಿ ಜನರ ನೆಮ್ಮದಿ ಅಡಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಜಾನಪದ ಕಲಾವಿದರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಲಾವಿದರಿಗೆ ನೆರವಾಗಲು ಮನವಿ ಮಾಡಿದರು.
ಬಯಲಾಟ ಅಕಾಡೆಮಿ ಸದಸ್ಯೆ ಅನುಸುಬಾಯಿ ವಡ್ಡರ ಮತ್ತು ಸಾಹಿತಿ ಸುಮಂಗಲಾ ಕೋಳೂರು ಮಾತನಾಡಿದರು. ವೇದಿಕೆಯಲ್ಲಿ ಕ ಜಾ ಪ ಸಂಘಟನಾ ಕಾರ್ಯದರ್ಶಿ ಪುಂಡಲೀಕ ಮುರಾಳ, ಕ ಜಾ ಪ ತಾಳಿಕೋಟೆ ಅಧ್ಯಕ್ಷ ಸಿದ್ದನಗೌಡ ಕಾಸಿನಕುಂಟಿ, ಗ್ರಾಮದ ಹಿರಿಯರಾದ ಹಣಮಂತ್ರಾಯಗೌಡ ಬಾಗೇವಾಡಿ, ಶಿವಾನಂದ ಹೀರೆಮಠ, ಜಿ ಕೆ ಬಿರಾದಾರ ಉಪಸ್ತಿತರಿದ್ದರು.
ಪ್ರೊ ಜಿ ಎಂ ಹಳ್ಳೂರ ಸ್ವಾಗತಿಸಿದರು. ಸಿದ್ದು ಕರಡಿ ನಿರೂಪಿಸಿದರು. ಆರ್ ಎಸ್ ವಾಲಿಕಾರ ವಂದಿಸಿದರು.
ರಾತ್ರಿ ಬಯಲಾಟ ಅಕಾಡೆಮಿ 2024-25 ನೆ ಸಾಲಿನ ಧನಸಹಾಯ ಅಡಿಯಲ್ಲಿ ” ಬಸವನ ಬಾಗೇವಾಡಿಯ ಶ್ರೀ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ನಡೆಯಿತು.

