ತನು ಕನ್ನಡ ಮನ ಕನ್ನಡ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಶಸ್ತಿಗಳನ್ನು ನೀಡುವುದರ ಉದ್ಧೇಶ ಕಾರ್ಯ ಮಾಡುವ ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೆ ಸಮರ್ಥನನ್ನಾಗಿ ಮಾಡುವುದಾಗಿದೆ. ಪ್ರಶಸ್ತಿ ಪಡೆದುಕೊಳ್ಳುವ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಕಾರ್ಯ ಮಾಡಬೇಕೆ ಹೊರತು ಪ್ರಶಸ್ತಿ ಪಡೆದುಕೊಂಡಿದ್ದೇನೆಂದು ಮೈ ಮರೆಯಬಾರದು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಬಿ.ಎಲ್ ಹೇಳಿದರು.
ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ತನು ಫೌಂಡೇಷನ್ ವತಿಯಿಂದ ಜರುಗಿದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಲೇಖಕ ಮಂಜುನಾಥ ಮ. ಜುನಗೊಂಡ ಅವರು ಬರೆದ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದ ಜನಗಳನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅದನ್ನು ಬಿಟ್ಟು ಸಿಕ್ಕ ಸಿಕ್ಕವರಿಗೆಲ್ಲ ಪ್ರಶಸ್ತಿಗಳನ್ನು ನೀಡುತ್ತ ಸಾಗಿದರೆ ಪ್ರಶಸ್ತಿ ಎನ್ನುವ ಪದವೇ ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಆ ನಿಟ್ಟಿನಲ್ಲಿ ತನು ಫೌಂಡೇಷನ್ ಬಳಗ ನಿಜವಾದ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಹೆಮ್ಮೆ ಎನಿಸುತ್ತದೆ. ಅದೇ ರೀತಿ ಒಟ್ಟಿಗೆ ಐದು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮಂಜುನಾಥ ಜುನಗೊಂಡ ಅವರ ಕಾರ್ಯ ನಿಜಕ್ಕೂ ಅದ್ಭುತವಾದುದ್ದು. ತಮ್ಮ ಹದವಾದ ವಿಚಾರಗಳಿಗೆ ಹರಿತವಾದ ಲೇಖನಿಯನು ಬಳಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಸಮಾಜದ ಸಮಸ್ಯೆಗಳಿಗೆ ಮದ್ದರೆಯುವ ಕೆಲಸ ಮಾಡುತ್ತಾರೆ. ಅವರ ಬರವಣಿಗೆಯ ಕಾರ್ಯ ಸದಾ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ದೇವರಗುಡ್ಡದ ಧರ್ಮದರ್ಶಿಗಳು ಹಾಗೂ ಖ್ಯಾತ ವೈದ್ಯ ಡಾ.ಸಂದೀಪ ಪಾಟೀಲ, ಬರವಣಿಗೆ ಎನ್ನುವುದು ಸುಲಭಕ್ಕೆ ನಿಲುಕುವ ಕಾರ್ಯವಲ್ಲ. ಯಾರು ಬರವಣಿಗೆಯನ್ನು ತಪಸ್ಸಿನ ರೀತಿ ಆಚರಿಸುತ್ತಾರೋ ಅವರಿಗೆ ಮಾತ್ರ ಅದು ದೊರೆಯುತ್ತದೆ. ಆ ನಿಟ್ಟಿನಲ್ಲಿ ಇಂದು ಮಂಜುನಾಥ ಅವರು ಬರವಣಿಗೆಯ ಮೂಲಕ ತಮ್ಮಲ್ಲಿ ಅಡಗಿರುವ ದೇಶಪ್ರೇಮವನ್ನು ಹೊರ ಹಾಕಿ ನಮಗೆಲ್ಲ ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಿಲ್ಲುವುದಕ್ಕೆ ಕರೆ ನೀಡಿದ್ದಾರೆ. ಅದರ ಜೊತೆಗೆ ತನು ಫೌಂಡೇಷನ್ ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ನಾಡಿನ ಋಣ ತೀರಿಸುವುದಕ್ಕೆಂದು ದುಡಿಯುತ್ತಿರುವುದು ಶ್ಲಾಘನೀಯವಾಗಿದೆ. ಇವರ ಕಾರ್ಯಕ್ಕೆ ನಾವುಗಳೆಲ್ಲ ಕೈಜೊಡಸಬೇಕು ಎಂದು ಹೇಳಿದರು.
ವೇದಾಂತ ಕಾಲೇಜಿನ ಪ್ರಾಚಾರ್ಯ ಶಾಂತವೀರಯ್ಯ ಮಠ, ಸಮಾಜ ಸೇವಕಿ ವಿಜಯಲಕ್ಷ್ಮಿ ಬಾಳಿ, ಪತ್ರಕರ್ತ ಇಂದುಶೇಖರ ಮಣೂರ, ಚಿತ್ರಾ ಅಷ್ಟಪುತ್ರೆ ಮಾತನಾಡಿದರು.
ಉಪನ್ಯಾಸಕ ಮುಸ್ತಾಕ ಮಲಘಾಣ ಪುಸ್ತಕಗಳನ್ನು ಪರಿಚಯಿಸಿದರು.
ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ ಸ್ವಾಗತಿಸಿದರು, ಸಂಗನಬಸವರಾಜ್ ಗುಡ್ಲಮನಿ ನಿರೂಪಿಸಿದರು.
ಪ್ರಶಸ್ತಿ ಪುರಸ್ಕೃತರು
ವಿವಿದ ಕ್ಷೇತ್ರಗಳ ಸಾಧಕರಾದ ಶಂಕರ ಬೈಚಬಾಳ, ಬಸವರಾಜ್ ಯಾದವಾಡ, ಡಾ.ರವೀಂದ್ರ ತೋಟದ, ಕಲ್ಮೇಶ ಆಸಂಗಿ, ಮುತ್ತು ಪಟ್ಟಣಶೆಟ್ಟಿ, ರತ್ನಾ ಜೈನ್, ಸುಜಾತಾ ರೇಶ್ಮಿ, ಗುರು ಕಡಣಿ, ಪೂರ್ಣಿಮಾ ಬಾರಿಮನಿ, ಗೀತಾ ಜಾಧವ ತನು ಕನ್ನಡ ಮನ ಕನ್ನಡ ಪ್ರಶಸ್ತಿ ಸ್ವೀಕರಿಸಿದರು.
“ಪ್ರಶಸ್ತಿಗಳು ಮಾರಾಟಕ್ಕಿರುವ ಈ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತ ಎಲೆ ಮರೆಯ ಕಾಯಿಯಂತಿರುವ ಅನೇಕ ಸಾಧಕರನ್ನು ಪ್ರತಿ ವರ್ಷವೂ ಗುರುತಿಸಿ, ಅವರಿಗೆ ತಮ್ಮ ಸಾಧನೆಯ ಹಾದಿಗೆ ಇನ್ನಷ್ಟು ಪ್ರೇರಣೆ ನೀಡುವ ದಿಸೆಯಲ್ಲಿ, ಸದಾ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ’ತನು ಫೌಂಡೇಶನ್ ವಿಜಯಪುರ’ ಇವರು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.”
– ಇಂದುಶೇಖರ ಮಣೂರ
ಜಿಲ್ಲಾ ಉಪಾಧ್ಯಕ್ಷರು
ಕಾರ್ಯನಿರತ ಪತ್ರಕರ್ತರ ಸಂಘ
ವಿಜಯಪುರ

ವಿಜಯಪುರದ ಲೇಖಕ, ವಾಗ್ಮಿ ಮಂಜುನಾಥ ಜುನಗೊಂಡ ರಚಿಸಿದ ’ಬಿಸಿಲೂರ ಭುವಿ ತಾರೆಗಳು’, ’ಪ್ರತಿಬಿಂಬ’, ಪೇಪರ್ ದೋಣಿಯಲ್ಲಿ’, ಬಸವ ಭೂಮಿಯ ಕುಸುಮಗಳು ಸೇರಿದಂತೆ ಐದು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

