ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದಿಂದ ಧರಣಿ ಸತ್ಯಾಗ್ರಹ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಪ್ರತ್ಯೇಕವಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಮೂರು ದಿನ ಪೂರ್ಣಗೊಳಿಸಿತು.
ಆರ್.ಎಫ್.ಓ. ಮಹೇಶ ಪಾಟೀಲ ಹಾಗೂ ಉಪಮುಖ್ಯ ಎಂಜಿನಿಯರ್ ಐ.ಎಲ್. ಕಳಸಾ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಹೊರಗುತ್ತಿಗೆ ಏಜೆನ್ಸಿ ಮೂಲಕ ದಿನಗೂಲಿ ಕಾರ್ಮಿಕರ ನೇಮಕ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಮುಖಂಡರು ತಿಳಿಸಿದರು.
ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ತಿಪ್ಪಣ್ಣ ಮಾದರ ಮಾತನಾಡಿ, ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ದಿನಗೂಲಿ ಕಾರ್ಮಿಕರು ಆಲಮಟ್ಟಿ ಜಲಾಶಯದ ಹಿನ್ನೀರಿನ ಮುಳುಗಡೆ ಸಂತ್ರಸ್ತರೇ ಹೆಚ್ಚಿದ್ದಾರೆ. ಕಳೆದ ೨೫ ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ವೇತನದ ಅರಣ್ಯ ಇಲಾಖೆಯ ಕಚೇರಿಯಿಂದಲೇ ಪಾವತಿಯಾಗುತ್ತಿದೆ. ಈಗ ಹೊರಗುತ್ತಿಗೆ ಏಜೆನ್ಸಿಗೆ ನೀಡಿದರೇ, ಮೊದಲಿನ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರ್ಕಾರ ತಕ್ಷಣವೇ ಇವರ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಎರಡೂ ಸಂಘಟನೆಯ ಮುಖಂಡರಾದ ದ್ಯಾಮಣ್ಣ ಬಿರಾದಾರ, ಸಂಗಮೇಶ ಚಿಮ್ಮಲಗಿ, ವಿರೂಪಾಕ್ಷಿ ಮಾದರ, ಬಸಪ್ಪ ಗುಡಿಮನಿ, ಮಹೇಶ ತೆಲಗಿ, ಅಖಂಡೇಶ ಬಡಿಗೇರ, ಮಕ್ಬೂಲ್ ಬಾಗವಾನ, ಬಾಸು ವಾಲೀಕಾರ, ಮೀನಾಕ್ಷಿ ರಾಠೋಡ, ಶಾಂತಾ ಚಿಮ್ಮಲಗಿ, ಸಂಗಮೇಶ ಯರನಾಳ, ಶಂಕರ ಅಂಕಲಗಿ, ಗೋವಿಂದ ವಡ್ಡರ, ರೇಣುಕಾ ಗೌಡರ, ಸವಿತಾ ಭಾಂಡವಳಕರ, ಶೋಭಾ ಗೌಡರ, ಶಂಕರ ಪಡಸಲಗಿ, ಕಾಶೀನಾಥ ಬಿಂಗಿ, ಅವ್ವಣ್ಣ ವಾಲೀಕಾರ ಮತ್ತೀತರರು ಇದ್ದರು.

