ತಿಕೋಟಾ ನೂತನ ಮಹಾವಿದ್ಯಾಲಯದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮನುಷ್ಯ ನಿತ್ಯದ ಜಂಜಾಟದಲ್ಲಿ ತನ್ನ ಸ್ವಯಂ ಆರೋಗ್ಯದ ರಕ್ಷಣೆಯನ್ನೇ ಮರೆಯುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ಬಿ.ಎಲ್.ಡಿ.ಇ. ಆಯುರ್ವೇದ ಮಹಾವಿದ್ಯಾಲಯದ ಡಾ. ಆರ್ .ಎ.ದೇಶಮುಖ ಅವರು ಹೇಳಿದರು.
ವಿಜಯಪುರದ ಬಿ.ಎಲ್.ಡಿ.ಇ. ಆಯುರ್ವೇದ ಮಹಾವಿದ್ಯಾಲಯ ಹಾಗೂ ನೂತನ ಮಹಾವಿದ್ಯಾಲಯ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಅಂತರ್ ಶುದ್ದಿ ಬಾಹ್ಯ ಶುದ್ದಿಯಿಂದ ಇರುವುದು ಮುಖ್ಯವೆನಿಸುತ್ತದೆ.ನಾವು ಇವತ್ತು ಎದುರಿಸುವ ಅನೇಕ ರೋಗಗಳಿಗೆ ಮನೆ ಮದ್ದುಗಳ ಮೂಲಕವೇ ಪರಿಹಾರ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಮನೆ ಮದ್ದುಗಳ ಅರಿವು ಅಗತ್ಯವಾಗಿದೆ. ಪ್ರತಿ ವ್ಯಕ್ತಿ ತನ್ನ ಜೀವನದಲ್ಲಿ ಪ್ರಮುಖ ಮೂರು ಸ್ಥಂಬಳಗಳಾದ ಆಹಾರ, ನಿದ್ರೆ, ಬ್ರಹ್ಮಚರ್ಯ ಇವುಗಳನ್ನು ನಿಯಮಿತವಾಗಿ ಪಾಲಿಸಿದ್ದಾದರೆ ರೋಗ ಮುಕ್ತ ಜೀನವ ನಡೆಸಲು ಅನುಕೂಲವಾಗುತ್ತದೆ. ಇವತ್ತು ಚಿಕ್ಕ ಮಕ್ಕಳೆಲ್ಲ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಜಂಕ್ ಫುಡ್ ನಂತಹ ರಾಸಾಯನಿಕ ಯುಕ್ತ ಆಹಾರ ಸೇವನೆ ಒಂದು ಕಾರಣವಾಗಿದೆ. ಹೀಗಾಗಿ ಉತ್ತಮ ದೇಶಿ ಆಹಾರ ಪದ್ದತಿ ನಮ್ಮದಾಗಿಸುವ ಮೂಲಕ ನಮ್ಮ ಪ್ರಕೃತಿಯನ್ನು ಚನ್ನಾಗಿ ಕಾಯ್ದುಕೊಳ್ಳಬೇಕಿದೆ ಎಂದರು.
ಇದಕ್ಕೂ ಮುನ್ನ, ಡಾ. ಪರಮೇಶ್ವರಿ ಮಾತನಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದು ರೂಢಿಯಲ್ಲಿಡಬೇಕು. ಒಂದು ನಗು ಎರಡು ಹೃದಯಗಳನ್ನು ಸೇರಿಸುತ್ತದೆ. ನಗುವಿನಲ್ಲಿಯೂ ಆರೋಗ್ಯದ ಗುಟ್ಟು ಅಡಗಿದೆ. ವಾತ,ಪಿತ್ತ ಕಫ ಈ ಮೂರರಿಂದ ಪ್ರಕೃತಿ ನಿರ್ಮಿತವಾಗಿದೆ. ಪ್ರಕೃತಿ ಅನುಗುಣವಾಗಿ ಔಷಧಿ ನೀಡುವುದು ಆಯುರ್ವೇದ ತಿಳಿಸುತ್ತದೆ. ದಿನಚರ್ಯ ಹಾಗೂ ಋತುವಿಗನುಗುಣವಾಗಿ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಬಿ.ಶಿರಸಂಗಿ ಅವರು ಮಾತನಾಡಿ, ಬಾಲ್ಯದಿಂದಲೇ ಇವತ್ತು ಒತ್ತಡದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಾದವರು ವೈದ್ಯರು ತಿಳಿಸಿದ ಆರೋಗ್ಯ ಸಲಹೆಗಳನ್ನು ಪಾಲಿಸಿದರೆ ಈಗಿನಿಂದಲೇ ತಾವೆಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರೊ.ಆರ್.ಬಿ.ಸಿರಸಂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಆರ್.ಎ.ದೇಶಮುಖ , ಡಾ. ಪರಮೇಶ್ವರಿ, ಡಾ.ಅಶ್ವಿನಿ ಸಜ್ಜನವರ್, ಡಾ. ಮಂಜುಳಾ ಹೆಚ್. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ದೇಸಾಯಿ, ಪ್ರೊ. ಶಿವಮೂರ್ತಿ ಚಿಕನರ್ತಿ, ಡಾ. ಸಂತೋಷ ನವಲಗುಂದ, ಪ್ರೊ. ಗಣೇಶ ಕಾಂಬ್ಳೆ, ಪ್ರೊ. ಸ್ವಪ್ನಾ, ಪ್ರೊ. ಎಸ್.ಬಿ.ಉಪ್ಪಾರ, ಪ್ರೊ. ಸಂತೋಷ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

