ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದಿನ ಒತ್ತಡದ ಜೀವನದಲ್ಲಿ ಜಾತ್ರಾ-ಉತ್ಸವದಂಗವಾಗಿ ಹಮ್ಮಿಕೊಳ್ಳುವ ಪ್ರವಚನ-ಪುರಾಣ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಮನಸ್ಸು ಆಧ್ಯಾತ್ಮಿಕ ಅಂಶಗಳ ಕಡೆಗೆ ಹೋಗುವದರಿಂದಾಗಿ ಮನಸ್ಸಿಗೆ ಪ್ರಶಾಂತತೆ ಸಿಗುವ ಜೊತೆಗೆ ಮನಸ್ಸನ್ನು ಶುದ್ಧಗೊಳಿಸುವದಕ್ಕೆ ಪೂರಕ ಎಂದು ರಾಷ್ಟ್ರೀಯ ಬಸವಸೈನ್ಯಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಮಂಗಲ ಕಾರ್ಯಕ್ರಮದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆ-ಉತ್ಸವಗಳು ಪ್ರತಿ ಕುಟುಂಬದ ಸದಸ್ಯರೊಂದಿಗೆ ಸಂಬಂಧಿಕರನ್ನು ಪರಸ್ಪರ ಭೇಟಿ ಮಾಡಲು ಸಹಕಾರಿಯಾಗಿವೆ. ಈ ಉತ್ಸವಗಳು ನಾಡಿನ ಸಂಸ್ಕ್ರತಿಯನ್ನು ಬಿಂಬಿಸುತ್ತವೆ. ನಿರಂತರವಾಗಿ ಇಂತಹ ಉತ್ಸವಗಳು ನಡೆಯುವಂತಾಗಬೇಕೆಂದರು.
ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆಗೈದ ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವ ವರ್ಷದಿಂದ ವರ್ಷಕ್ಕೆ ಎಲ್ಲ ಜನರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯುತ್ತಿರುವದು ಶ್ಲಾಘನೀಯ. ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯವೂ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹ ಹಮ್ಮಿಕೊಂಡಿರುವದು ಜಾತ್ರಾಮಹೋತ್ಸವದ ಸಮಿತಿಯ ಕಾರ್ಯ ಮೆಚ್ಚುವಂತಹದು. ಪ್ರತಿ ವರ್ಷ ನಿರಂತರವಾಗಿ ಇದೇ ರೀತಿಯಲ್ಲಿ ಜಾತ್ರೆ ಸಾಗುವಂತಾಗಲೆಂದರು.
ಸಾನಿಧ್ಯ ವಹಿಸಿದ್ದ ಘಟಪ್ರಭದ ಚನ್ನಬಸವ ದೇವರು ಮಾತನಾಡಿ, ಆಧ್ಯಾತ್ಮಿಕತೆಯಿಂದ ಮುಕ್ತಿ ಮಾರ್ಗ ಕಾಣಬೇಕು. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಆಧ್ಯಾತ್ಮಿಕತೆಯಿಂದ ಸಾರ್ಥಕತೆ ಮಾಡಿಕೊಳ್ಳಬೇಕು. ದೂರದರ್ಶನದಿಂದ ಹೊರಬಂದು ಧರ್ಮದರ್ಶನಕ್ಕೆ ಬಂದರೆ ಸುಖ-ನೆಮ್ಮದಿಯನ್ನು ಕಾಣಬಹುದು ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜಾತ್ರಾ ಸಮಿತಿಯ ಸದಸ್ಯರ, ಈ ಭಾಗದ ಜನರ ನಿಸ್ವಾರ್ಥ ಸೇವೆ, ತ್ಯಾಗ, ಒಗ್ಗಟಿನಿಂದ ಗೌರಿ-ಶಂಕರ ದೇವರ ಜಾತ್ರಾಮಹೋತ್ಸವ ಯಶಸ್ವಿಯಾಗುತ್ತಿದೆ. ಪಡಶೆಟ್ಟಿ ಬಾಂಧವರು ದೇವಸ್ಥಾನದಲ್ಲಿ ನೂತನ ಮೂರ್ತಿಗಳನ್ನು ಕಳೆದ ವರ್ಷ ಮಾಡಿಸಿದ್ದರು. ಈ ಸಲ ಮೂರ್ತಿಗಳಿಗೆ ಬೆಳ್ಳಿ ಅಲಂಕಾರಕ್ಕಾಗಿ ಐದು ಕೆಜಿ ಬೆಳ್ಳಿ ಕಾಣಿಕೆ ನೀಡುತ್ತಿರುವದು ಈ ಬಾಂಧವರು ಗೌರಿ-ಶಂಕರ ದೇವರ ಮೇಲಿಟ್ಟಿರುವ ಭಕ್ತಿ ಮೆಚ್ಚುವಂತಹದ್ದು. ದೇವರ ಮೇಲೆ ಭಕ್ತಿ ಇದ್ದರೆ ದೇವರ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ ಎಂದರು.
ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಮುಖಂಡರಾದ ಸಂಗಮೇಶ ಓಲೇಕಾರ, ರವಿ ರಾಠೋಡ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ ಮಾತನಾಡಿ ಸುಶ್ರಾವ್ಯವಾಗಿ ಜನಪದ ಗೀತೆ ಹಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪ್ರವೀಣ ಪೂಜಾರಿ,ಮುಖಂಡರಾದ ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶ್ರವಣಕುಮಾರ ಅಗರವಾಲ, ನಾಗರಾಜ ಪಟ್ಟಣಶೆಟ್ಟಿ, ಪತ್ರಕರ್ತರಾದ ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ, ಜಾತ್ರಾ ಕಮಿಟಿಯ ಶ್ರೀಶೈಲ ಮಠಪತಿ, ಈರಣ್ಣ ಪಡಶೆಟ್ಟಿ, ನಿಂಗಪ್ಪ ಕುಳಗೇರಿ, ಶಾಂತಪ್ಪ ಪಡಶೆಟ್ಟಿ, ಸಂಗಪ್ಪ ನಾಯ್ಕೋಡಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳದ ನೂತನ ನಿರ್ದೇಶಕ ಬಾಲಚಂದ್ರ ಮುಂಜಾನೆ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಹನ್ನೊಂದು ದಿನಗಳ ಕಾಲ ಪ್ರವಚನಗೈದ ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಸಂಗೀತ ಕಲಾವಿದರನ್ನು, ಜಾತ್ರೆಗೆ ಶ್ರಮಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಜಾತ್ರೆಯಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈ.ಎನ್.ಮಿಣಜಗಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಶ್ರೀಕಾಂತ ಪಡಶೆಟ್ಟಿ ವಂದಿಸಿದರು. ನಂತರ ಮೊಂಬತ್ತಿ ದೀಪ ಬೆಳಗಿದ್ದು ಹಾಗೂ ಗೌರಿ-ಶಂಕರ ದೇವರಿಗೆ ಮನೆಯಿಂದ ವಿವಿಧ ಮಹಿಳೆಯರು ಮಾಡಿಕೊಂಡು ತಂದಿದ್ದ ಹೂರಣ ಕಡುಬು, ಅನ್ನ-ಸಾಂಬಾರ ಪ್ರಸಾದವನ್ನು ಜನರು ಸ್ವೀಕರಿಸಿದ್ದು ವಿಶೇಷ.

